ಸಂಘರ್ಷಗಳ ಹಾಟ್ಸ್ಪಾಟ್ ಆದ ಪಶ್ಚಿಮ ಘಟ್ಟಗಳು : ಪ್ರಕಾಶ್ ಕಮ್ಮರಡಿ

ಶಿವಮೊಗ್ಗ : ಪಶ್ಚಿಮ ಘಟ್ಟಗಳು ಪ್ರಸಕ್ತ ಜೀವ ವೈವಿಧ್ಯತೆಯ ಮಹಾತಾಣವಾಗಿಲ್ಲ. ಬದಲಾಗಿ ಸಂಘರ್ಷಗಳ ಹಾಟ್ ಸ್ಪಾಟ್ ಆಗಿದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಡಾ. ಪ್ರಕಾಶ್ ಕಮ್ಮರಡಿ ಹೇಳಿದ್ದಾರೆ.
ಬೆಂಗಳೂರಿನ ‘ಪೃಥ್ವಿ’ ಟ್ರಸ್ಟ್ ಹಾಗೂ ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ ಮಲೆನಾಡಿನ ರೈತ, ಬುಡಕಟ್ಟು ಮತ್ತು ಪರಿಸರ ಸಂಘಟನೆಗಳ ಸಹಯೋಗದೊಂದಿಗೆ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸಹಕಾರದಲ್ಲಿ ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಮಲೆನಾಡು ಕೃಷಿ-ಅರಣ್ಯ ಸಂಘರ್ಷ ಮತ್ತು ಸಾಮರಸ್ಯ’ ಎಂಬ ವಿಷಯದ ಕುರಿತಾದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಒಕ್ಕಲೆಬ್ಬಿಸುವ ಕಾರ್ಯವು ಜನ ವಿರೋಧಿಯಾಗಿದೆ. ಪಂಪ್ಡ್ ಸ್ಟೋರೇಜ್ ವಿರುದ್ಧ ಜನರು ಗಟ್ಟಿಯಾದ ಹೋರಾಟ ಮಾಡುತ್ತಿದ್ದಾರೆ. ಒಂದು ಕಡೆ ಅರಣ್ಯ ಇಲಾಖೆಯು ಪರಿಸರ ಉಳಿಸಲು ಕಾನೂನಾತ್ಮಕವಾಗಿ ಕೆಲಸ ಮಾಡುತ್ತಿದ್ದರೆ, ಜನರು ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಮೇಲೆ ಅವಲಂಬಿತರಾಗಿದ್ದು ವಿರೋಧಾಭಾಸಗಳನ್ನು ಕಾಣಬಹುದಾಗಿದೆ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಆರ್ಥಿಕ ತಜ್ಞ ಹಾಗೂ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಮತ್ತು ಅರಣ್ಯ ಸಂಪನ್ಮೂಲ ನಿರ್ವಹಣಾ ಸಂರಕ್ಷಣಾಧಿಕಾರಿ ಎ.ಎಂ.ಅಣ್ಣಯ್ಯ, ಕೃಷಿ ಮತ್ತು ಅರಣ್ಯ ದೇಶದ ಪ್ರಗತಿಗೆ ಹಾಗೂ ಜೀವಸಂಕುಲದ ಉಳಿವಿಗೆ ಅತ್ಯಗತ್ಯವಾಗಿದ್ದು, ಎರಡರ ನಡುವಿನ ಸಾಮರಸ್ಯ ಮತ್ತು ಸಹಬಾಳ್ವೆ ಇಂದಿನ ತುರ್ತಾಗಿದೆ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಕರೆ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಟಿ.ಎಸ್.ಹೂವಯ್ಯಗೌಡ ಮಾತನಾಡಿ, ಎಲ್ಲ ಜೀವಿಗಳು, ಪ್ರಾಣಿಗಳಿಗೂ ಬದುಕುವ ಹಕ್ಕು ಇದ್ದು, ಇವುಗಳ ಬಗ್ಗೆ ಯೋಚಿಸಬೇಕಿದೆ. ಕೃಷಿ ಮತ್ತು ಅರಣ್ಯ ವಿಷಯಗಳಲ್ಲಿ ಹಲವಾರು ಕಾನೂನು ತೊಡಕು ಇವೆ. ಯಾಂತ್ರಿಕ ಅಭಿವೃದ್ಧಿಯಿಂದ ಪರಿಸರ ನಾಶವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮರಸ್ಯದ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೊ ಶಿವಮೊಗ್ಗ 90.8 ಎಫ್.ಎಂ. ನಿರ್ದೇಶಕ ಜನಾರ್ದನ ಜಿ.ಎಲ್. ಅವರು ಅರಣ್ಯ ನೀತಿಗಳು ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ವಿಷಯ ಕುರಿತು, ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಲಿ ಅಭಿವೃದ್ಧಿ ಯೋಜನೆಗಳು ಮತ್ತು ಸಂಘರ್ಷ ವಿಷಯ ಕುರಿತು, ಅಡಿಕೆ ಬೆಳೆಗಾರರ ಸಂಘದ ಪ್ರಮುಖರಾದ ರಮೇಶ್ ಹೆಗಡೆ ಅವರು ಅರಣ್ಯ ಕಾಯ್ದೆಗಳು ಮತ್ತು ಅವಾಂತರಗಳು ವಿಷ ಯ ಕುರಿತು, ಕುವೆಂಪು ವಿವಿ ವನ್ಯಜೀವಿ ಸಂರಕ್ಷಣಾ ಅಧ್ಯಯನ ವಿಭಾಗದ ಡಾ.ವಿಜಯಕುಮಾರ್ ರಕ್ಷಿತಾರಣ್ಯ ಮತ್ತು ವನ್ಯಜೀವಿ, ರೈತ ಸಂಘರ್ಷ ವಿಷಯದ ಕುರಿತು ವಿಷಯ ಮಂಡನೆ ಮಾಡಿದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಶಿವಮೊಗ್ಗದ ರೈತ ಸಂಘಟನೆಯ ಮುಖಂಡ ಕೆ.ಟಿ. ಗಂಗಾಧರ್ ವಹಿಸಿದ್ದರು.ಕಾರ್ಯಾಗಾರದ ಸಮಾರೋಪ ಹಾಗೂ ’ಮುಂದಿನ ಹೆಜ್ಜೆ’ಯ ಕುರಿತಾದ ಕೊನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ಅಡಿಕೆ ಬೆಳೆಗಾರರ ಸಂಘಟನೆಯ ಬಿ.ಆರ್. ಜಯಂತ್ ವಹಿಸಿದ್ದರೆ, ಡಾ. ಪ್ರಕಾಶ್ ಕಮ್ಮರಡಿ ನಿರ್ವಹಿಸಿದರು.
ರೈತ ಮುಖಂಡರಾದ ಎಚ್.ಆರ್.ಬಸವರಾಜಪ್ಪ, ಬುಡಕಟ್ಟು ಸಂಘಟನೆಯ ಮುಖಂಡರಾದ ರಾಮಣ್ಣ ಹಸಲರ್, ಪರಿಸರ ಸಂಘಟನೆಯ ಶೈಲೇಂದ್ರ ಬಂದಗದ್ದೆ ಹಾಗೂ ತಾಳಗುಪ್ಪದ ರೈತ ಮಹಿಳೆ ಪೂರ್ಣಿಮಾ ಅವರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ಮಂಡಿಸಿದರು. ಕಾರ್ಯಾಗಾರದಲ್ಲಿ ಕವಿತಾ ಹಾಜರಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಶೇ.64 ಅರಣ್ಯ ಭೂಮಿ ಇದೆ. ಆದರೆ, ಪಶ್ಚಿಮ ಘಟ್ಟಗಳಲ್ಲಿ ಸಾಮರಸ್ಯಕ್ಕಿಂತ ಸಂಘರ್ಷವೇ ಹೆಚ್ಚಾಗಿದೆ. ಈ ಸಂಘರ್ಷವನ್ನು ತಗ್ಗಿಸಿ ಸಾಮರಸ್ಯದಿಂದ ಬದುಕುವ ಕ್ರಮಗಳನ್ನು ಹೆಚ್ಚಿಸಬೇಕು. ಪರಿಸರ ನಮ್ಮ ಹಕ್ಕಾಗಿರುವ ರೀತಿಯಲ್ಲಿ ಈ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳೂ ಇದ್ದು, ಅದನ್ನು ನಾವು ಪಾಲಿಸಬೇಕು. ಮನುಷ್ಯ ಮಾತ್ರ ಈ ಪರಿಸರದಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲ ಪ್ರಾಣಿ, ಜೀವ ಸಂಕುಲವೂ ಬದುಕಬೇಕು. ಸಹಬಾಳ್ವೆ ನಡೆಸಬೇಕು.
ಎ.ಎಂ.ಅಣ್ಣಯ್ಯ, ಕೃಷಿ ಆರ್ಥಿಕ ತಜ್ಞ






