ರಾಜ್ಯದಲ್ಲಿ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಕಾಮಗಾರಿ : ನಿತಿನ್ ಗಡ್ಕರಿ
"ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ‘ಸಿಗಂದೂರು ಚೌಡೇಶ್ವರಿ’ ಹೆಸರು ನಾಮಕರಣ"

ಸಾಗರ,: ರಾಜ್ಯದ ವಿಕಾಸಕ್ಕೆ ಕೇಂದ್ರದಿಂದ 5 ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಕಾಮಗಾರಿ ಮಾಡಲಾಗುವುದು. ರಾಜ್ಯದಲ್ಲಿ ಹೊಸ ಕಾರಿಡಾರ್, ಬೆಳಗಾವಿ-ರಾಯಚೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಇದರಿಂದ ತುಂಬಾ ಅನುಕೂಲವಾಗಲಿದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸಾಗರದ ನೆಹರೂ ಮೈದಾನದಲ್ಲಿ ಆಯೋಜಿ ಸಿದ್ದ ಸಾರ್ವಜನಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನೇ ಶಂಕುಸ್ಥಾಪನೆ ನೆರವೇರಿಸಿದ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಯನ್ನು ಉದ್ಘಾಟಿಸಿದ್ದು, ನನ್ನ ಸೌಭಾಗ್ಯ. ಇದು ಸಿಗಂದೂರು ಶ್ರೀ ಚೌಡೇಶ್ವರಿಯ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಯಡಿಯೂರಪ್ಪನವರ ಕೋರಿಕೆ ಮೇರೆಗೆ ನಾನು ಇಲ್ಲಿಗೆ ಬಂದಿದ್ದೆ. ಸೇತುವೆ ಮೌಲ್ಯ ಹೆಚ್ಚಾಗಿತ್ತು. ಬೇರೆ ಅಡಚಣೆ ಇದ್ದರೂ ಸಿಗಂದೂರು ಚೌಡೇಶ್ವರಿ ಆಶೀರ್ವಾದದಿಂದ ಕೆಲಸ ಆಗಿದೆ. ಸೇತುವೆಗೆ ಮಾತಾ ಸಿಗಂದೂರು ಚೌಡೇಶ್ವರಿ ದೇವಿಯ ಹೆಸರಿಡುವುದಾಗಿ ಘೋಷಿಸಿದರು.
ಇದಕ್ಕೂ ಮೊದಲು ಆರು ದಶಕಗಳಿಗೂ ಹೆಚ್ಚಿನ ಕಾಲದಿಂದ ಶರಾವತಿ ಸಂತ್ರಸ್ತರ ಬೇಡಿಕೆಯಾಗಿದ್ದ ಸಾಗರ ತಾಲೂಕಿನಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ದೇಶದ ಎರಡನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಯನ್ನು ಗಡ್ಕರಿ ಸೋಮವಾರ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಸೇತುವೆಯ ಲೋಕಾರ್ಪಣೆಯ ಸ್ಮರಣೆಯ ಶಿಲಾನ್ಯಾಸ ಮಾಡಿದ ಸಚಿವರು, ನಂತರ ಶರಾವತಿ ಹಿನ್ನೀರಿಗೆೆ ಬಾಗಿನ ಅರ್ಪಿಸುವ ಮೂಲಕ ಸೇತುವೆ ಉದ್ಘಾಟನೆಯನ್ನು ಅಧಿಕೃತಗೊಳಿಸಿದರು.
ದಿಲ್ಲಿಯಿಂದ ಕರ್ನಾಟಕಕ್ಕೆ ಮುಂಬೈ ಕೊಲ್ಲಾಪುರ ಮೂಲಕ ಬರಬೇಕು. ಈಗ ಹೊಸ ರಸ್ತೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ಆಗಲಿದೆ. ಈ ರಸ್ತೆ ಮುಂಬೈ ಭಾಗದಿಂದ ಸೂರತ್, ನಾಸಿಕ್, ಅಹ್ಮದ್ ನಗರ, ಕರ್ನೂಲ್, ಬೆಂಗಳೂರು, ತಿರುವನಂತಪುರ ಮೂಲಕ ಈ ಹೊಸ ಹೆದ್ದಾರಿ ಸಾಗಲಿದ್ದು, ಶೇ.50ರಷ್ಟು ಕೆಲಸ ಆಗಿದೆ ಎಂದು ಮಾಹಿತಿ ನೀಡಿದರು.
ತುಮಕೂರು-ಶಿವಮೊಗ್ಗ ನೂತನ ಹೆದ್ದಾರಿ ರಸ್ತೆ ಶೇ.80ರಷ್ಟು ಕೆಲಸ ಆಗಿದೆ. ಇದು ಡಿಸೆಂಬರ್ ಒಳಗೆ ಲೋಕಾರ್ಪಣೆಯಾಗುವುದು. ಇದರಿಂದ ಬೆಂಗಳೂರು-ಶಿವಮೊಗ್ಗ ರಸ್ತೆ ಸಂಚಾರ 7 ಗಂಟೆಯಿಂದ 3 ಗಂಟೆಗೆ ಇಳಿಯುವುದು. ಶಿವಮೊಗ್ಗ-ಚಿತ್ರದುರ್ಗ ಹೆದ್ದಾರಿ ಕಾಮಗಾರಿ 2026ರ ಫೆಬ್ರವರಿಯಲ್ಲಿ ಪೂರ್ಣವಾಗಲಿದೆ. ಇದರಿಂದ ಶಿವಮೊಗ್ಗ-ಚಿತ್ರದುರ್ಗ ಸಂಚಾರಕ್ಕೆ 3 ಗಂಟೆ ಬದಲು 1 ಗಂಟೆ ಸಾಕಾಗಲಿದೆ. ಬೆಂಗಳೂರು-ಚೆನ್ನೈ ನೂತನ ಹೆದ್ದಾರಿಯಿಂದ 2 ಗಂಟೆಯಲ್ಲಿ ತಲುಪಬಹುದು. ಬೆಂಗಳೂರು ಟ್ರಾಫಿಕ್ ಜಾಮ್ ತಪ್ಪಿಸಲು ಹೊಸ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಸಂಸದರ ಬಿ.ವೈ.ರಾಘವೇಂದ್ರ ಮಾತನಾಡಿ, ನಮ್ಮ ಪಾಲಿಗೆ ಅಂಬಾರಗೋಡ್ಲು- ಕಳಸವಳ್ಳಿ-ಸಿಗಂದೂರು ಸೇತುವೆ ನಿರ್ಮಾಣ ಐತಿಹಾಸಿಕ ಸಾಧನೆಯಾಗಿ ಉಳಿಯಲಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಎಸ್.ಎನ್.ಚನ್ನ ಬಸಪ್ಪ, ಡಿ.ಎಸ್. ಅರುಣ್, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಶಾಸಕ ಎಚ್.ಹಾಲಪ್ಪ, ಪ್ರಮುಖರಾದ ಟಿ.ಡಿ. ಮೇಘರಾಜ್, ಪ್ರಸನ್ನ ಕೆರೆಕೈ, ಎಸ್. ದತ್ತಾತ್ರಿ, ಹರಿಕೃಷ್ಣ ಇತರರಿದ್ದರು.







