ಷೇರು ಮಾರುಕಟ್ಟೆ ಹೂಡಿಕೆ ಹೆಸರಲ್ಲಿ ವಂಚನೆ: ₹34 ಲಕ್ಷ ಕಳೆದುಕೊಂಡ ಶಿವಮೊಗ್ಗದ ವ್ಯಕ್ತಿ!

ಶಿವಮೊಗ್ಗ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಬಹುದು ಎಂಬ ಅಪರಿಚಿತ ವಾಟ್ಸಾಪ್ ಸಂದೇಶವನ್ನು ನಂಬಿ ಶಿವಮೊಗ್ಗದ ನಿವಾಸಿಯೊಬ್ಬರು ಬರೋಬ್ಬರಿ 34 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ.
ಶಿವಮೊಗ್ಗದ ಬಿ.ಬಿ. ಸ್ಟ್ರೀಟ್ನ ನಿವಾಸಿ(ಹೆಸರು ಗೌಪ್ಯ) ವಂಚನೆಗೆ ಒಳಗಾದವರು. ಅಪರಿಚಿತ ವಾಟ್ಸಾಪ್ ಸಂಖ್ಯೆಯಿಂದ ಬಿ.ಬಿ. ಸ್ಟ್ರೀಟ್ನ ನಿವಾಸಿಯೊಬ್ಬರಿಗೆ ಸಂದೇಶವೊಂದು ಬಂದಿತ್ತು. ಆ ಸಂದೇಶದಲ್ಲಿ ನಿರ್ದಿಷ್ಟ ಕಂಪನಿಯೊಂದರ ಹೆಸರನ್ನು ಉಲ್ಲೇಖಿಸಿ, ತಮ್ಮ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ಆಮಿಷ ಒಡ್ಡಲಾಗಿತ್ತು.
ಈ ಆಮಿಷವನ್ನು ನಂಬಿದ ದೂರುದಾರರು, ಕಳೆದ ಎರಡು ತಿಂಗಳಲ್ಲಿ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು ₹34,16,000 ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಹಣ ಹೂಡಿಕೆ ಮಾಡಿದ ನಂತರ, ಆರೋಪಿಗಳು ಫೋನ್ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿ, ಹೂಡಿಕೆಯ ಲಾಭಾಂಶವನ್ನು ನೀಡದೆ ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಸದ್ಯ,ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





