ಆರೆಸ್ಸೆಸ್ ಸಂಘಟನೆ ನಿಷೇಧಿಸಿದರೆ ಕಾಂಗ್ರೆಸ್ ನಿರ್ನಾಮ: ಕೆ.ಎಸ್. ಈಶ್ವರಪ್ಪ ಎಚ್ಚರಿಕೆ

ಶಿವಮೊಗ್ಗ: ಆರೆಸ್ಸೆಸ್ ಸಂಘಟನೆ ನಿಷೇಧಿಸಿದರೆ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ನಾಯಕರುಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಪ್ರಿಯಾಂಕ್ ಖರ್ಗೆ, ಬಿ.ಕೆ ಹರಿಪ್ರಸಾದ್ ಮುಂತಾದವರು ಆರೆಸ್ಸೆಸ್ ಚಟುವಟಿಕೆಗಳನ್ನು ಸರ್ಕಾರಿ ಜಾಗಗಳಲ್ಲಿ ನಿಷೇಧಿಸಬೇಕು ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಇವರ ಈ ಹೇಳಿಕೆಗಳು ಹುಚ್ಚು ಹೇಳಿಕೆಗಳಾಗಿವೆ. ಆರೆಸ್ಸೆಸ್ ಸುದ್ದಿಗೆ ತಾಕತ್ತಿದ್ದರೆ ಬನ್ನಿ. ಅದನ್ನು ನಿಷೇಧಿಸಿ ನೋಡೋಣ ಎಂದು ಸವಾಲು ಹಾಕಿದರು.
ಆರೆಸ್ಸೆಸ್ ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಅದು 100 ವರ್ಷಗಳನ್ನು ಪೂರೈಸಿದೆ. ದಿಲ್ಲಿಯಿಂದ ಹಳ್ಳಿಯವರೆಗೆ ಕೋಟ್ಯಾಂತರ ಯುವಕರು ಆರೆಸ್ಸೆಸ್ ಮೂಲಕ ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದರು.
ಹಿಂದೂ ಧರ್ಮ ಎನ್ನುವುದು ಅದೊಂದು ಜೀವನ ಕ್ರಮವಾಗಿದೆ. ಆ ತತ್ವದ ಅಡಿಯಲ್ಲೇ ಆರೆಸ್ಸೆಸ್ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸುತ್ತದೆ. ಇಡೀ ಪ್ರಪಂಚವೇ ಆರೆಸ್ಸೆಸ್ ಸಂಘಟನೆಯನ್ನು ಮೆಚ್ಚುತ್ತಿದೆ. ಹೀಗಿರುವಾಗ ಕರ್ನಾಟಕದ ಕೆಲವು ಮಂತ್ರಿಗಳು ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ಆಕೋಶ ವ್ಯಕ್ತಪಡಿಸಿದರು.
ಆರೆಸ್ಸೆಸ್ ನಿಂದ ಬಂದ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಮುಂತಾದವರು ಈ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ. ರಾಷ್ಟ್ರಪತಿ ಉಪರಾಷ್ಟ್ರಪತಿಗಳೂ ಆಗಿದ್ದಾರೆ. ಆರೆಸ್ಸೆಸ್ ನಿಂದ ಪಾಠ ಕಲಿತ ನಾಯಕರುಗಳು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಏಕರೂಪ ಸಂಹಿತೆ ಮುಂತಾದ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿದೆ ಎಂದರು.
ಈ ಹಿಂದಿನ ಪ್ರಧಾನ ಮಂತ್ರಿಗಳಾಗಿದ್ದ ನೆಹರೂ, ಇಂದಿರಾಗಾಂಧಿಯವರು ಸಂಘವನ್ನು ನಿಷೇಧಿಸಲು ಹೋಗಿ ಮುಖಭಂಗಕ್ಕೆ ಒಳಗಾಗಿದ್ದನ್ನು ಪಿಯಾಂಕ್ ಖರ್ಗೆ, ಹರಿಪ್ರಸಾದ್ ಮರೆತಂತೆ ಇದೆ. ಪ್ರಿಯಾಂಕ್ ಖರ್ಗೆ ಮುಖ್ಯಮಂತಿಗಳಿಗೆ ಪತ್ರ ಬರೆದಿದ್ದನ್ನು ಸಿದ್ದರಾಮಯ್ಯ ಅವರು ಹರಿದು ಬಿಸಾಕಬೇಕಿತ್ತು. ಆದರೆ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿ, ಸೂಕ್ತ ಕಮ ಕೈಗೊಳ್ಳುವಂತೆ ಸೂಚಿಸಿರುವುದು ಅವರ ಬುದ್ದಿಗೇಡಿತನವನ್ನು ತೋರಿಸುತ್ತದೆ. ಮುಖ್ಯಮಂತ್ರಿ ಹುದ್ದೆ ಕಳೆಯಲೆಂದೇ ಖರ್ಗೆ ಈ ಉಪಾಯ ಹೂಡಿದ್ದಾರೆ. ಇದನ್ನು ಸಿದ್ದರಾಮಯ್ಯ ಅರಿತುಕೊಂಡು ಖರ್ಗೆ ಕರೆದು ಛೀಮಾರಿ ಹಾಕಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಲಿಂಗಯ್ಯಶಾಸ್ತ್ರೀ, ಈ. ವಿಶ್ವಾಸ್, ಕುಬೇರಪ್ಪ, ಚನ್ನಬಸಪ್ಪ, ಬಾಲು ಉಪಸ್ಥಿತರಿದ್ದರು.







