ಕಸ್ತೂರಿ ರಂಗನ್ ವರದಿ ಬಗ್ಗೆ ಸಂಪುಟದಲ್ಲಿ ಚರ್ಚೆ : ಮಧು ಬಂಗಾರಪ್ಪ

ಶಿವಮೊಗ್ಗ : ಕಸ್ತೂರಿ ರಂಗನ್ ವರದಿ ಸಂಬಂಧ ಮುಖ್ಯಮಂತ್ರಿಯವರು ಇತ್ತೀಚೆಗೆ ಶಾಸಕರು, ಸಚಿವರ ಸಭೆ ಕರೆದಿದ್ದರು. ಸಭೆಯಲ್ಲಿ ವಿಶೇಷ ಅಧಿವೇಶನ ಕರೆದು, ನಿರ್ಣಯ ಕಳಿಸುವ ತೀರ್ಮಾನವಾಗಿದೆ. ಸೆ.3ರಂದು ಕ್ಯಾಬಿನೆಟ್ ಇದೆ. ಅಲ್ಲೂ ಚರ್ಚೆ ಮಾಡಿ ಮುಂದೆ ಕೊಂಡೊಯ್ಯುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಗೆ ಮೊದಲಿಂದಲೂ ವಿರೋಧಿಸಲಾಗುತ್ತಿದೆ. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ವಿರೋಧಿಸಲಾಗಿತ್ತು. ಆಗಲೇ ಇದನ್ನು ತಿರಸ್ಕರಿಸಿ, ರಾಜ್ಯ ಸರಕಾರ ನಿರ್ಣಯ ಕೈಗೊಂಡು ಕಳುಹಿಸಿತ್ತು ಎಂದರು.
ಈ ಹಿಂದೆ ವಿರೋಧ ಮಾಡಿದಾಗ ಸರಕಾರದ ಜತೆ ಕೇಂದ್ರ ಚರ್ಚೆ ಮಾಡಬೇಕಿತ್ತು. ಸಂಸದರು ಇಲ್ಲಿ ಬಂದು ನಮ್ಮದೇನಿಲ್ಲ ಎಂದು ಮನವಿ ಕೊಡ್ತಾರೆ. ಆದರೆ, ಕೇಂದ್ರ ಸರಕಾರವೇನು ನಮ್ಮದಾ..? ನಮ್ಮದಾಗಿದ್ರೆ ಎರಡು ನಿಮಿಷದಲ್ಲಿ ಈ ವರದಿಯನ್ನು ತಿರಸ್ಕಾರ ಮಾಡಿ ಬಿಸಾಕುತ್ತಿದ್ದೆವು. ಇಲ್ಲಿನ ಸಂಸದರು ಜನರಿಗೆ ತಪ್ಪು ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಅತೀ ಹೆಚ್ಚು ಬಿಜೆಪಿ ಸಂಸದರಿದ್ದಾರೆ. ಕಸ್ತೂರಿ ರಂಗನ್ ವರದಿಯಿಂದ ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಹೆಚ್ಚು ತೊಂದರೆಯಾಗುತ್ತಿದೆ. ಸಂಸದರಾದ ಬಿ.ವೈ.ರಾಘವೇಂದ್ರ ಹಾಗೂ ಕಾಗೇರಿಯವರು ಇಲ್ಲಿ ಬಂದು ಪುಗ್ಸಟ್ಟೆ ಹೇಳಿಕೆ ಕೊಡುತ್ತಾರೆ. ಈ ಬಗ್ಗೆ ಸಂಸತ್ನಲ್ಲಿ ಯಾಕೆ ಚರ್ಚೆ ಮಾಡಲಿಲ್ಲ?. ಸಾಲದಕ್ಕೆ ರಾಘವೇಂದ್ರ ಅವರ ತಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆಗ ಯಾಕೆ ಚರ್ಚೆ ಮಾಡಲಿಲ್ಲ? ಆಗ ಏನೂ ಮಾಡದೆ ಈಗ ಬಿಜೆಪಿ ರಾಜ್ಯಾಧ್ಯಕ್ಷರು ನಮಗೆ ಮನವಿ ಕೊಡುತ್ತಾರೆ. ಅತ್ತ ಸಂಸದ ರಾಘವೇಂದ್ರ ಅವರೂ ಮನವಿ ಮಾಡುತ್ತಾರೆ. ರಾಜಕೀ ಯವಾಗಿ ಹೀಗೇ ಬಿಡುವುದಕ್ಕೆ ಆಗುವುದಿಲ್ಲ. ಕೇಂದ್ರವನ್ನು ನಾವು ಟೀಕೆ ಮಾಡಲೇ ಬೇಕು. ವರದಿ ಜಾರಿಯಾದರೆ ಎಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಈ ವರದಿಯನ್ನು ವಿರೋಧಿಸಿ ಸರಕಾರದಿಂದ ವಿರೋಧ ದಾಖಲಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿ ವಿರುದ್ಧ ವಾಗ್ದಾಳಿ
ಸಚಿವ ಬಸವರಾಜ ರಾಯರೆಡ್ಡಿ ಇಸ್ಲಾಮ್ ಧರ್ಮ ಶ್ರೇಷ್ಠ ಎಂದು ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಅಂದಿದ್ದರು. ದೇವೇಗೌಡರು ಬಿಜೆಪಿ ಜೊತೆ ಸೇರಿದ ತಕ್ಷಣ ಪವಿತ್ರರಾಗಿ ಬಿಡುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಇದೇ ದೇವೇಗೌಡ ಅವರು ಈ ಹಿಂದೆ ಮೋದಿಯವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಅಂದಿದ್ದರು. ಈಗ ಪಕ್ಕದಲ್ಲೇ ಹಲ್ಲು ಕಿಸ್ಕೊಂಡು ಕುಳಿತುಕೊಳ್ಳುತ್ತಾರೆ ಎಂದು ಕುಟುಕಿದರು.






