ಆಪರೇಷನ್ ಸಿಂಧೂರ | ಉಗ್ರರ ಮೇಲಿನ ದಾಳಿ ಸ್ವಾಗತಿಸಿದ ಮಂಜುನಾಥ್ ರಾವ್ ತಾಯಿ

PC : NDTV
ಶಿವಮೊಗ್ಗ : ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆದ ದಾಳಿಯನ್ನು ಪಹಲ್ಗಾಮ್ ದಾಳಿಯಲ್ಲಿ ಮೃತರಾದ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಅವರ ತಾಯಿ ಸುಮತಿ ಸ್ವಾಗತಿಸಿದ್ದಾರೆ.
ಮಂಜುನಾಥ ರಾವ್ ಅವರ ತಾಯಿ ಸುಮತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕೇಂದ್ರ ಸರಕಾರ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿದೆ ಎಂದರು.
ಕುಟುಂಬದಲ್ಲಿ ಯಜಮಾನ ಯಾವುದೇ ತೀರ್ಮಾನ ಕೈಗೊಂಡರೂ ನಾವೆಲ್ಲ ಬದ್ಧರಾಗಿರುತ್ತೇವೆ. ಹಾಗೆಯೇ ನಮ್ಮ ದೇಶವನ್ನು ಕುಟುಂಬ ಎಂದು ಪರಿಗಣಿಸಿದರೆ ಮೋದಿ ಅವರು ಯಜಮಾನನ ಸ್ಥಾನದಲ್ಲಿದ್ದಾರೆ. ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ನಮ್ಮ ಮಗ ಮಲೆನಾಡಿನಲ್ಲಿ ಹುಟ್ಟಿದವನು ಅಲ್ಲಿ ಹೋಗಿ ಅನಾಥವಾಗಿ ಮೃತಪಟ್ಟಿದ್ದ. ಇದು ನನಗೆ ಬಹಳ ನೋವಿದೆ ಎಂದು ಹೇಳಿದರು.
ಕಳೆದ ರಾತ್ರಿ ಎರಡು ಮೂರು ಜನ ಎನ್ಐಎ ಅಧಿಕಾರಿಗಳು ಬಂದಿದ್ದರು. ಸರಕಾರದ ಕಡೆಯಿಂದ ಎಂದು ತಿಳಿಸಿದ್ದರು. ಮಾಧ್ಯಮದವರು ಏನೆಲ್ಲ ಪ್ರಶ್ನೆ ಕೇಳುತ್ತಾರೋ ಅದೇ ರೀತಿಯ ಪ್ರಶ್ನೆಗಳನ್ನು ಕೇಳಿದರು. ನಾವು ಉತ್ತರ ನೀಡಿದ್ದೇವೆ. ತುಂಬಾ ಹೊತ್ತು ಮನೆಯಲ್ಲಿದ್ದರು ಎಂದು ತಿಳಿಸಿದರು.