ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಲು ಒತ್ತಾಯ; ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ

ಸಾಗರ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಲು ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿಯನ್ನು ಪಂಪ್ಡ್ ಸ್ಟೋರೇಜ್ ಅಣಕು ಶವಯಾತ್ರೆ ಮೂಲಕ ಶನಿವಾರದಿಂದ ಪ್ರಾರಂಭಿಸಲಾಗಿದೆ.
ಮಾಜಿ ಶಾಸಕ ಬಿ.ಸ್ವಾಮಿರಾವ್ ಹಸಿರು ನಿಶಾನೆ ತೋರಿಸಿ, ಯೋಜನೆ ಕೈಬಿಡುವ ಹಕ್ಕೊತ್ತಾಯದ ಪತ್ರಕ್ಕೆ ಸಹಿ ಹಾಕುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಬಿ.ಸ್ವಾಮಿರಾವ್, ಶರಾವತಿ ಪಂಪ್ಡ್ ಸ್ಟೋರೇಜ್ ಅವೈಜ್ಞಾನಿಕ, ಪರಿಸರಕ್ಕೆ ಮಾರಕವಾದ ಯೋಜನೆಯಾಗಿದೆ. ಮಲೆನಾಡಿಗರ ಮೇಲೆ ಪದೇಪದೇ ಒಂದಿಲ್ಲೊಂದು ಅವೈಜ್ಞಾನಿಕ ಯೋಜನೆ ಹೇರುವ ಕೆಲಸ ಮಾಡಲಾಗುತ್ತಿದೆ. ಸಾಗರ ಹೋರಾಟದ ನೆಲೆಯಾಗಿದ್ದು ಕಾಗೋಡು ಸತ್ಯಾಗ್ರಹದ ಮೂಲಕ ಗೇಣಿ ರೈತರಿಗೆ ಭೂಮಿ ದೊರಕಿಸಿ ಕೊಟ್ಟ ಹೆಗ್ಗಳಿಕೆ ಹೊಂದಿದೆ. ತಕ್ಷಣ ಪಂಪ್ಡ್ ಸ್ಟೋರೇಜ್ ಯೋಜನೆ ನಿಲ್ಲಿಸಬೇಕು. ಕಾಗೋಡು ಚಳವಳಿಯಲ್ಲಿ ಭಾಗವಹಿಸಿದ ಲೋಹಿಯಾ, ಗಣಪತಿಯಪ್ಪ ಇನ್ನಿತರ ಹೋರಾಟಗಾರರ ಮೇಲೆ ಆಣೆ ಮಾಡಿ ಹೇಳುತ್ತಿದ್ದೇವೆ ಈ ಯೋಜನೆ ಕಾರ್ಯಸಾಧುವಾಗಲು ಬಿಡುವುದಿಲ್ಲ ಎಂದು ಹೇಳಿದರು.
ಪರಿಸರವಾದಿ ಅಖಿಲೇಶ್ ಚಿಪ್ಳಿ ಮಾತನಾಡಿ, ಯೋಜನೆ ಕುರಿತು ಡಿಪಿಆರ್ ಕೇಳಿದರೆ ಕೊಡುತ್ತಿಲ್ಲ. ಪರಿಸರ ಮಾರಕವಾದ ಯೋಜನೆ ಕೈಬಿಡದೆ ಹೋದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಮಲೆನಾಡು ಭಾಗವನ್ನು ಒಳಗೊಂಡ ಪ್ರತ್ಯೇಕ ರಾಜ್ಯದ ಬೇಡಿಕೆ ಇರಿಸುವುದು ಅನಿವಾರ್ಯವಾಗುತ್ತದೆ. ಜಲಮೂಲ, ಪರಿಸರಸೂಕ್ಷ್ಮವನ್ನು ನಾಶ ಮಾಡುವ ಯೋಜನೆ ಕೈಬಿಟ್ಟು ಪರ್ಯಾಯ ವಿದ್ಯುತ್ ಉತ್ಪಾದನೆಗೆ ಸರಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಯೋಜನೆ ಕುರಿತು ಕೆಪಿಸಿಎಲ್ ಯಾವುದೇ ಮಾಹಿತಿ ಕೊಡುತ್ತಿಲ್ಲ. ಯೋಜನೆ ಕಾರ್ಯಾರಂಭಕ್ಕಿಂತ ಮೊದಲೇ ಹಣ ಬಿಡುಗಡೆ ಮಾಡಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆ ಕುರಿತು ಆಸಕ್ತಿ ವಹಿಸಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ಹೊನ್ನಾವರ ಶಾಸಕರು ಯೋಜನೆ ವಿರೋಧಿಸಿದರೆ ಸಾಗರ ಕ್ಷೇತ್ರದ ಶಾಸಕರು ಯೋಜನೆ ಪರ ವಿಧಾನಸೌಧದಲ್ಲಿ ಮಾತನಾಡಿರುವುದು ಅವರ ಪರಿಸರ ವಿರೋಧಿ ಮನಸ್ಥಿತಿಗೆ ಸಾಕ್ಷಿಯಾಗಿದೆ. ರಾಜ್ಯ ಸರಕಾರ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡಬೇಕು ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಯೋಜನೆ ಕೈಬಿಡುವವರೆಗೂ ರೈತ ಸಂಘ ನಿರಂತರ ಹೋರಾಟ ನಡೆಸಲಿದೆ. ಯೋಜನೆ ಅನನುಕೂಲತೆಯನ್ನು ರೈತ ಸಂಘದ ಪ್ರಮುಖರು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಅ.15ರವರೆಗೆ ನಿರಂತರವಾಗಿ ಹೋರಾಟ ನಡೆಯಲಿದ್ದು, ರಾಜ್ಯದ ಪ್ರಮುಖ ರೈತ ನಾಯಕರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಧರಣಿಯಲ್ಲಿ ಎಸ್.ವಿ.ಹಿತಕರ ಜೈನ್ ಇನ್ನಿತರರು ಹಾಜರಿದ್ದರು.







