ಶಿಕಾರಿಪುರ | ಚಿರತೆಯ ಕಳೇಬರ ಪತ್ತೆ

ಶಿಕಾರಿಪುರ : ತಾಲ್ಲೂಕಿನ ಹೊಸೂರು ಹೋಬಳಿಯಲ್ಲಿ ಗೊಗ್ಗ ಗ್ರಾಮದ ಸಮೀಪ ರಾಜ್ಯ ಅರಣ್ಯದ ಸರ್ವೆ ನಂ.197ರಲ್ಲಿ ಚಿರತೆಯೊಂದರ ಕಳೇಬರ ಪತ್ತೆಯಾಗಿದೆ.
ಎಂಪಿಎಂ ನಿಲಗಿರಿ ನಡುತೋಪಿನಲ್ಲಿ ಚಿರತೆ ಕಳೇಬರ ಪತ್ತೆಯಾಗಿದ್ದು, ಅದರ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಅಧಿಕಾರಿಗಳ ಪ್ರಕಾರ, ಮೂರು ವರ್ಷ ಪ್ರಾಯದ ಗಂಡು ಚಿರತೆಯ ಮೃತದೇಹ ಇದಾಗಿದೆ.
ನಿಯಮಾನುಸಾರ ಮೃತ ಗಂಡು ಚಿರತೆಯನ್ನು ದಹಿಸಲಾಯಿತು. ಮರಣೋತ್ತರ ಪರಿಕ್ಷೆಯ ಸಮಯದಲ್ಲಿ ಸಂಗ್ರಹಿಸಿದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ನಾಯ್ಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ.
ಉಪಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್ ಕುಮಾರ್, ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ, ತಹಶೀಲ್ದಾರ್ ಮಂಜುಳಾ ಶಂಕರ ಭಜಂತ್ರಿ, ನಿಸರ್ಗ ಕನ್ಸರ್ವೇಶನ್ ಟ್ರಸ್ಟ್ನ ಜಿ.ಎನ್.ಅರುಣ್ ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗುರುಸಿದ್ದಪ್ಪ, ಹುಲಿ ಸಿಂಹಧಾಮದ ವೈದ್ಯಾಧಿಕಾರಿ ಮುರಳಿ ಮನೋಹರ್, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ. ರವಿ, ಡಾ.ಸುನೀಲ್ ಸೇರಿದಂತೆ ವಿವಿಧ ಸಿಬ್ಬಂದಿಗಳು ಸ್ಥಳದಲ್ಲಿದ್ದರು.







