ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಯುವಕರು ಮೃತ್ಯು; ಓರ್ವ ಗಂಭೀರ

ಶಿವಮೊಗ್ಗ : ತಾಲೂಕಿನ ಆಯನೂರು ಕೋಟೆ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮೃತರನ್ನು ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಬಳಿಯ ಮಲ್ಲಾಪುರದ ನಿವಾಸಿಗಳಾದ ಅಕಿಫ್ (21) ಮತ್ತು ಚಾಂದ್ ಪೀರ್ (18) ಎಂದು ಗುರುತಿಸಲಾಗಿದೆ. ಕ್ಯಾತಿನಕೆರೆ ಗ್ರಾಮದ ಗುರುಕಿರಣ್ (27) ಎಂಬವರು ಗಾಯಗೊಂಡಿದ್ದಾರೆ.
ಎರಡು ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿದೆ. ಅಕಿಫ್ ಮತ್ತು ಚಾಂದ್ ಪೀರ್ ಆಯನೂರಿನಿಂದ ಹಾರನಹಳ್ಳಿ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಗುರುಕಿರಣ್ ಚಾಮೇನಹಳ್ಳಿಯಿಂದ ಆಯನೂರು ಕಡೆಗೆ ಬರುತ್ತಿದ್ದ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು. ಎರಡು ಬೈಕ್ ಗಳು ಆಯನೂರು ಕೋಟೆ ಬಳಿ ಮುಖಾಮುಖಿ ಢಿಕ್ಕಿಯಾಗಿವೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಅಕಿಫ್ ಮತ್ತು ಚಾಂದ್ ಪೀರ್ ಮೇಲೆ ಹಿಂದಿನಿಂದ ಅತೀ ವೇಗವಾಗಿ ಬಂದ ಯಾವುದೋ ಅಪರಿಚಿತ ವಾಹನ ಹರಿದು ಹೋಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರಿಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಗುರುಕಿರಣ್ ಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





