SHIVAMOGGA | ಆನೆ ದಾಳಿಗೆ ತೆಂಗು, ಅಡಿಕೆ ಮರಗಳು ನಾಶ: ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ

ಶಿವಮೊಗ್ಗ: ತಾಲೂಕಿನ ಪುರದಾಳು ಗ್ರಾಮದಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಒಂಟಿ ಸಲಗವೊಂದು ರೈತರ ಅಡಿಕೆ ಹಾಗೂ ತೆಂಗಿನ ತೋಟವನ್ನು ನಾಶಪಡಿಸಿದೆ.
ಮಂಗಳವಾರ ರಾತ್ರಿ ಪುರದಾಳು ಗ್ರಾಮದ ಬೇಳೂರು ಬಳಿ ಒಂಟಿ ಸಲಗ ರೈತರ ತೋಟಕ್ಕೆ ನುಗ್ಗಿ ಅಡಿಕೆ-ತೆಂಗಿನ ಗಿಡಗಳನ್ನು ಧ್ವಂಸ ಮಾಡಿದೆ.
ಪುರದಾಳು ಗ್ರಾಮದ ದಿ.ಗುಮ್ಮನಬೈಲು ಸಿದ್ದಪ್ಪ ಹಾಗೂ ಕಿಡದುಂಬೆ ವಿಶ್ವನಾಥ್ ಮತ್ತು ಹುಣಸೇಮಕ್ಕಿ ಅಣ್ಣಪ್ಪ, ಗಂಟೆಮನೆ ಮೂರ್ತಿ ಎಂಬವರ ತೋಟಗಳಿಗೆ ನುಗ್ಗಿರುವ ಒಂಟಿ ಸಲಗ, ಹಲವು ಅಡಿಕೆ ಮರಗಳನ್ನು ನಾಶ ಮಾಡಿದೆ.
ದಿ.ಸಿದ್ದಪ್ಪನವರಿಗೆ ಸೇರಿದ ತೋಟದಲ್ಲಿ 20ಕ್ಕೂ ಅಧಿಕ ಅಡಿಕೆ ಮರ ಹಾಗೂ ತೆಂಗಿನಮರ, ಅಣ್ಣಪ್ಪರ ತೋಟದಲ್ಲಿ 12ಕ್ಕೂ ಹೆಚ್ಚು ಅಡಿಕೆ ಮರ, ಮೂರ್ತಿಯವರ ತೋಟದಲ್ಲಿ 5ಕ್ಕೂ ಅಧಿಕ ಅಡಿಕೆ ಮರ ಹಾಗೂ ವಿಶ್ವನಾಥ್ ಅವರ ತೋಟದಲ್ಲಿ 10ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಮುರಿದು ಹಾಕಿದೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ:
ಕಾಡಾನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಈ ಹಿಂದೆ ಡಿಸಿಎಫ್ ಕಚೇರಿ ಎದುರು ಧರಣಿ ನಡೆಸಿ ಕಾಡಾನೆ ಹಾವಳಿಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯವರು ಕೂಡಲೇ ಕಾಡಾನೆ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ.






