ಎಸ್ಐಆರ್ ಜಾಗೃತಿ ಕುರಿತು ಶಿವಮೊಗ್ಗದಲ್ಲಿ ಬಹಿರಂಗ ಸಭೆ

ಶಿವಮೊಗ್ಗ : ಕೇಂದ್ರದ ಬಿಜೆಪಿ ಸರಕಾರವು ದೇಶದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ದುರುದ್ದೇಶದಿಂದಲೇ ಜಾರಿಗೆ ತಂದಿದೆ. ಆದರೆ ಜಿಲ್ಲೆಯ ಜನರಲ್ಲಿ ಇದರ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳುವಂತೆ ಮಾಡುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕರೆ ನೀಡಿದೆ.
ಮತದಾರರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆ ಕಾರ್ಯಕ್ರಮವು ಜೂ.30ರಿಂದ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ಸೋಮವಾರ ಎಸ್ಐಆರ್ ಜಾಗೃತಿ ಕುರಿತು ಬಹಿರಂಗ ಸಭೆ ನಡೆಸಲಾಯಿತು.
ಮಾಜಿ ಸಚಿವ ಮಧು ಬಂಗಾರಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಯೂ ಇಲ್ಲಿ ಮತದಾನದ ಹಕ್ಕು ಪಡೆದಿರುವುದು ಬಿಜೆಪಿ ಸರಕಾರದಿಂದ ಅಲ್ಲ, ಅದು ಸಿಕ್ಕಿದ್ದು ಸಂವಿಧಾನದ ಮೂಲಕ. ಹಾಗಾಗಿ ನಮಗೆ ಸಂವಿಧಾನವೇ ದೇವರು. ಆ ಮೂಲಕವೇ ನಾವು ನಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕಿದೆ. ಕೇಂದ್ರದ ಬಿಜೆಪಿ ಸರಕಾರದ ದುರುದ್ದೇಶವನ್ನು ಆ ಮೂಲಕವೇ ತಡೆಯಬೇಕಿದೆ ಎಂದರು.
ನಾಳೆಯಿಂದಲೇ ನಾವು ನಮ್ಮ ಕರ್ತವ್ಯಗಳಲ್ಲಿ ತೊಡಗಿಸಿಕೊಳ್ಳಬೇಕಿದೆ.ಸಂವಿಧಾನ ಪ್ರಕಾರ ನಾವು ಏನು ಮಾಡಬೇಕೋ ಅದನ್ನು ಮಾಡೋಣ, ಎಲ್ಲದ್ದಕ್ಕೂ ಉತ್ತರ ಇರುತ್ತದೆ. ನಿವಾಸಿ ದೃಢೀಕರಣ ಸಮಸ್ಯೆ ಇದ್ದಲ್ಲಿ ನಾವೇ ಮುಂದೆ ನಿಂತು ಮಾಡಿಸೋಣ, ಒಟ್ಟಾರೆ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇರುವಂತೆ ನೋಡಿಕೊಳ್ಳೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಮುಖಂಡರಾದ ಆಯನೂರು ಮಂಜುನಾಥ್, ಎನ್. ರಮೇಶ್, ಎಚ್.ಎಸ್. ಸುಂದರೇಶ್, ಎಚ್.ಸಿ. ಯೋಗೇಶ್, ಕಲಗೋಡು ರತ್ನಾಕರ, ಬಿ.ಎಸ್. ಗಣೇಶ್, ಇಸ್ಮಾಯಿಲ್ ಖಾನ್, ಜಿ. ಪಲ್ಲವಿ, ಎಂ. ಶ್ರೀಕಾಂತ್, ಜವಳಿ ನಿಗಮದ ಅಧ್ಯಕ್ಷ ಚೇತನ್ ಕೆ.ಗೌಡ ಮಾತನಾಡಿ, ಕೇಂದ್ರದ ದುರುದ್ದೇಶ ಪೂರ್ವಕ ಎಸ್ಐಆರ್ ಬಗ್ಗೆ ಜಾಗೃತಿ ಅಗತ್ಯವಿದೆ. ಆ ನಿಟ್ಟಿನಲ್ಲಿಯೇ ಪಕ್ಷದ ಕಾರ್ಯಕರ್ತರು ಮತದಾರರಿಗೆ ಸರಿಯಾದ ಮಾಹಿತಿ ನೀಡಿ ಮತದಾನದ ಹಕ್ಕು ಪಡೆಯುವಂತೆ ಮಾಡಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಜಿ. ಚಂದ್ರಶೇಖರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ವೇತಾ ಬಂಡಿ, ಮುಖಂಡರಾದ ಎಸ್.ಪಿ. ಶೇಷಾದ್ರಿ, ಎಸ್.ರವಿಕುಮಾರ್, ಕೆಂಚೇನಹಳ್ಳಿ ಕುಮಾರ್, ವೇದಾ ವಿಜಯ್ ಕುಮಾರ್, ನಯಾಝ್ ಅಹ್ಮದ್, ಶ್ರೀನಿವಾಸ್ ಕರಿಯಣ್ಣ, ಶರತ್ ಮರಿಯಪ್ಪ, ಆರ್.ರಾಜಶೇಖರ್ ಮತ್ತಿತರರು ಇದ್ದರು






