ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿ ಬಳಿದ ಶಿವಸೇನಾ ಕಾರ್ಯಕರ್ತರು
ಮುಂಬೈ, ಅ. 12: ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿಯವರ ಮಾಧ್ಯಮ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಶಿವಸೇನಾ ಕಾರ್ಯಕರ್ತರು ಸೋಮವಾರ ಬೆಳಗ್ಗೆ ಮಸಿಯನ್ನು ಬಳಿದು ಪರಾರಿಯಾಗಿರುವ ಘಟನೆ ಬಗ್ಗೆ ವರದಿಯಾಗಿದೆ.
ಮುಂಬೈನಲ್ಲಿ ಶುಕ್ರವಾರ ನಡೆಯುವಂತಹ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಕಸೂರಿ ಅವರ ಪುಸ್ತಕ ಬಿಡುಗಡೆ ಸಮಾರಂಭವನ್ನು ಕುಲಕರ್ಣಿ ಅವರ ಸಂಸ್ಥೆ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ತೆರಳದಂತೆ ಶಿವಸೇನಾ ಕಾರ್ಯಕರ್ತರು ಬೆದರಿಕೆಯನ್ನು ಹಾಕಿದ್ದರು. ಇದನ್ನು ಲೆಕ್ಕಿಸದೆ ಕಾರ್ಯಕ್ರಮಕ್ಕೆಂದು ಮನೆಯಿಂದ ಹೊರಡಿದ್ದ ಸಂದರ್ಭದಲ್ಲಿ ಹತ್ತು ಮಂದಿ ಕಾರ್ಯಕರ್ತರು ನನ್ನ ಮುಂಬಾಗಿಲಿಗೆ ಬಂದು ತನ್ನ ಮೇಲೆ ಈ ಕೃತ್ಯ ಎಸಗಿರುವುದಾಗಿ ಎಂದು ಅವರು ಆರೋಪಿಸಿದ್ದಾರೆ.
ನನ್ನ ಮುಖಕ್ಕೆ ಮಸಿ ಬಳಿದ ಹಾಗೆ, ಇವರು ನನ್ನ ಸಿದ್ಧಾಂತಗಳಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕುಲಕರ್ಣಿ ದೂರಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕಸೂರಿ ಅವರ ಪುಸ್ತಕ ಬಿಡುಗಡೆ ಸಮಾರಂಭ ರದ್ದು ಮಾಡುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.