"Oracle ನಡೆಸಿದ್ದು 30 ಸಾವಿರ ಜನರ ಮಾರಣಹೋಮ": ಬೃಹತ್ ಉದ್ಯೋಗ ಕಡಿತಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕವಿರಾಜ್

ಕವಿರಾಜ್ (Photo source/facebook); PTI
ಬೆಂಗಳೂರು: ತಂತ್ರಜ್ಞಾನ ದಿಗ್ಗಜ Oracle ಸಂಸ್ಥೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವ್ಯಾಪಕ ಮಟ್ಟದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಈ ಕುರಿತು ನಿರ್ದೇಶಕ ಮತ್ತು ಗೀತರಚನೆಕಾರ ಕವಿರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಅಕ್ಷರಶಃ ಮೊನ್ನೆ oracle ನಡೆಸಿದ್ದು 30 ಸಾವಿರ ಜನರ ಮಾರಣಹೋಮ. ಇದು ಎಷ್ಟು ಬೃಹತ್ ಎಂದರೆ ಆ ಜಾಗತಿಕ ದೈತ್ಯ ಕಂಪನಿ ಇಷ್ಟು ದಿನ ತನಗಾಗಿ ದುಡಿದ ಶೇಕಡಾ 18 ರಷ್ಟು ಉದ್ಯೋಗಿಗಳನ್ನು ಉಸಿರೆತ್ತಲು ಅವಕಾಶವಿಲ್ಲದಂತೆ ಒಂದೇ ಏಟಿಗೆ ಹೊರದಬ್ಬಿದೆ. ಕಾರ್ಪೋರೇಟ್ ಜಗತ್ತಿನಷ್ಟು ನಿರ್ದಯಿ ರಾಕ್ಷಸ ಕೂಟ ಇನ್ನೊಂದು ಇರಲು ಸಾಧ್ಯವಿಲ್ಲ." ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕವಿರಾಜ್ ಅವರ ಪೋಸ್ಟ್ ನಲ್ಲೇನಿದೆ?
ಜಗತ್ತಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಸೆಟಲ್ ಆಗಿದ್ದೇವೆ ಅಂದುಕೊಂಡು EMI ಮೂಲಕ ತನ್ನ ಪುಟ್ಟ ಸ್ವರ್ಗವನ್ನು ಕಟ್ಟಿಕೊಂಡಿರುತ್ತಾರೆ. ಬೆಳಿಗ್ಗೆ 6 ಗಂಟೆಗೆ ಒಂದು ಮೇಲ್ ಬರುತ್ತೆ, ಅದರಲ್ಲಿ ನಿಮ್ಮ ಸೇವೆ ನಮಗೆ ಅವಶ್ಯಕತೆಯಿಲ್ಲ. ನಿಮ್ಮನು ಈ ಕ್ಷಣದಿಂದ ಕೆಲಸದಿಂದ ತೆಗೆಯಲಾಗಿದೆ ಎಂದು ಬರೆಯಲಾಗಿರುತ್ತೆ. ಹೇಗಿರಬೇಡ ಆ ಆಘಾತ. ಅವರ ಇಡೀ ಜಗತ್ತೇ ಒಂದೇ ಕ್ಷಣಕ್ಕೆ ತಲೆಕೆಳಗಾಗಿರುತ್ತೆ.
ಅಕ್ಷರಶಃ ಮೊನ್ನೆ oracle ನಡೆಸಿದ್ದು 30 ಸಾವಿರ ಜನರ ಮಾರಣಹೋಮ. ಇದು ಎಷ್ಟು ಬೃಹತ್ ಎಂದರೆ ಆ ಜಾಗತಿಕ ದೈತ್ಯ ಕಂಪನಿ ಇಷ್ಟು ದಿನ ತನಗಾಗಿ ದುಡಿದ ಶೇಕಡಾ 18 ರಷ್ಟು ಉದ್ಯೋಗಿಗಳನ್ನು ಉಸಿರೆತ್ತಲು ಅವಕಾಶವಿಲ್ಲದಂತೆ ಒಂದೇ ಏಟಿಗೆ ಹೊರದಬ್ಬಿದೆ. ಕಾರ್ಪೋರೇಟ್ ಜಗತ್ತಿನಷ್ಟು ನಿರ್ದಯಿ ರಾಕ್ಷಸ ಕೂಟ ಇನ್ನೊಂದು ಇರಲು ಸಾಧ್ಯವಿಲ್ಲ. ಕೆಲಸದಿಂದ ತೆಗೆಯುವ ಒಂದು ಗೌರವಯುತ ಮಾರ್ಗ ಅನುಸರಿಸುವ ನೈತಿಕತೆಯೂ ಆ ಧನದಾಹಿ ವ್ಯವಸ್ಥೆಗಿಲ್ಲ. ಇಡೀ ಪ್ರಪಂಚ ಅವರ ಹಿಡಿತದಲ್ಲೇ ಇದೆ. ರೂಲ್ಸ್ ಎಲ್ಲಾ ಅವರೇ ಬರೆಸುತ್ತಾರೆ. ಅವರ ಒಂದು ಕೂದಲು ಕೊಂಕಿಸಲು ಯಾರಿಗೂ ಸಾಧ್ಯವಿಲ್ಲ ಎಂಬುದು ಶತಸಿದ್ಧ. ಬೇರೆ ಹೊತ್ತಾಗಿದ್ದರೆ ಇಲ್ಲಿಲ್ಲ ಎಂದರೇ ಅಲ್ಲಿ ಕೆಲಸ ಸಿಗುತ್ತೆ ಅನ್ನಬಹುದಿತ್ತು. ಆದರೆ ಈಗೇನಿದ್ದರೂ ಕೆಲಸದಿಂದ ತೆಗೆದು ಬಿಸಾಕುವ ಕಾಲ. ಬಹುತೇಕ ಕಾರ್ಪೊರೇಟ್ ಕಂಪನಿಗಳು ಇದೇ ಹಾದಿಯಲ್ಲಿವೆ. ಕಳೆದೊಂದು ವರ್ಷದಲ್ಲಿ ಅಮೆಜಾನ್ 30 ಸಾವಿರ, ಇಂಟೆಲ್ 27 ಸಾವಿರ, ಮೈಕ್ರೋಸಾಫ್ಟ್ 15 ಸಾವಿರ, ಟಿಸಿಎಸ್ 12 ಸಾವಿರ ಉದ್ಯೋಗಳನ್ನು ಹೊರದಬ್ಬಿವೆ .
ದೊಡ್ಡ ವಿಪರ್ಯಾಸ ಎಂದರೆ ನೌಕರರ ಗುಂಡಿಯನ್ನು ಸಂಬಳ ಕೊಟ್ಟು ಅವರ ಕೈಯಲ್ಲೇ ತೊಡಿಸಲಾಗಿರುತ್ತೆ. ಇವರ ಕೆಲಸ ಕಸಿಯುವ AI ತಂತ್ರಜ್ಞಾನಕ್ಕೆ ಇವರೇ ಮನೆ ಮಠ ಮರೆತು ಹಗಲಿರುಳು ದುಡಿದಿರುತ್ತಾರೆ. ನಿಜಕ್ಕೂ ಸಂಭ್ರಮ ಪಟ್ಟು ಬೆರಗುಗಣ್ಣಿನಿಂದ ನೋಡಬೇಕಿದ್ದ ತಾಂತ್ರಿಕ ಅಭಿವೃದ್ಧಿಗಳು ಭಯ ಹುಟ್ಟಿಸುತ್ತಿವೆ. ಅದರಲ್ಲೂ AI ಅಕ್ಷರಶಃ ನಡುಕ ಹುಟ್ಟಿಸುವ ವೇಗದಲ್ಲಿ ಎಲ್ಲವನ್ನೂ ನುಂಗುತ್ತಿದೆ. ಒಬ್ಬ ಡಿಜಿಟಲ್ ಅನಕ್ಷರಸ್ಥ ಎಂದೇ ಹೇಳಬಹುದಾದ ನಾನೇ ಎಷ್ಟೋ ತಂತ್ರಜ್ಞರಿಂದ ಮಾಡಿಸಿಕೊಳ್ಳಬೇಕಿದ್ದ ಕೆಲಸಗಳನ್ನಕೇವಲ prompt ಕೊಡುವ ಮೂಲಕ ನಾನೇ ಮಾಡಿಕೊಳ್ಳುತ್ತಿದ್ದೇನೆ. ಇನ್ನು digitally ತಿಳಿದವರು ಏನೇನು ಮಾಡುತ್ತಿರಬಹುದು. AI ಕೆಲಸ ಕಳೆಯೋದಿಲ್ಲ ಬದಲಿಗೆ ಹೊಸ ಉದ್ಯೋಗಳನ್ನು ಸೃಷ್ಟಿಸುತ್ತೆ ಎನ್ನುವ ಕಿವಿ ಮೇಲೆ ಹೂ ಇಡುವ ಹೇಳಿಕೆಗೆ ಯಾವ ಆಧಾರವೂ ಸದ್ಯಕ್ಕಂತೂ ಕಾಣಿಸುತ್ತಿಲ್ಲ.
ಈಗಾಗಲೇ ನನ್ನ ವಲಯದಲ್ಲೇ ಕೆಲಸ ಕಳೆದುಕೊಂಡು ದಿಕ್ಕೆಟ್ಟಿರುವ ಮಿತ್ರರು ಹಲವರಿದ್ದಾರೆ ಇನ್ನೆಷ್ಟು ಜನ ಕೆಲಸ ಕಳೆದುಕೊಳ್ಳಬಹುದು ಗೊತ್ತಿಲ್ಲ.
ಅತ್ತ ದೇಶಗಳ ಅಧಿಕಾರ ಹಿಡಿದ ಅವಿವೇಕಿ ಹುಚ್ಚರ ಅಹಂನಿಂದಾಗಿ ಎಲ್ಲೋ ನಡೆಯುತ್ತಿರುವ ಯುದ್ಧ, ಇಲ್ಲಿ ನಮ್ಮ ದೈನಂದಿನ ಬದುಕನ್ನು, ನಮ್ಮ ಊಟದ ತಟ್ಟೆಯನ್ನು ತಟ್ಟಿದೆ. ಒಟ್ಟಾರೆ ಇಡೀ ಜಗತ್ತಲ್ಲೇ ಒಂದು ಅರಾಜಕತೆಯಿದೆಜಿ. ಎಲ್ಲಾ ದಿಕ್ಕಿನಲ್ಲೂ ಮಹಾ ವಿಪ್ಲವವೊಂದರೆಡೆಗೆ ದಾಪುಗಾಲು ಹಾಕುತ್ತಿರುವಂತಿದೆ. ಏನೇ ಆದರೂ ಇಂತಾ ಸುನಾಮಿಗಳೆದುರು ನಾವೆಲ್ಲರೂ ಅಸಹಾಯಕರು. ಕಾಲವೇ ಎಲ್ಲಕ್ಕೂ ಉತ್ತರ, ಪರಿಹಾರ ಕೊಡಬೇಕು. ಏನೇ ಬಂದರೂ ಕುಗ್ಗದೇ ಎದುರಿಸಲು ಮಾನಸಿಕವಾಗಿ ನಾವೆಲ್ಲರೂ ಸಿದ್ಧರಾಗಿರಬೇಕು ಅಷ್ಟೇ.







