‘‘ಧರ್ಮದ ಹೆಸರಿನ ವಿಭಜನೆ ರಾಜಕಾರಣ ಯಾರಿಗೂ ಒಳ್ಳೆಯದಲ್ಲ’’
ವಾರ್ತಾಭಾರತಿ ವಿಶೇಷ ಸಂದರ್ಶನ
- ಟಿ.ಡಿ. ರಾಜೇಗೌಡ ಶಾಸಕ, ಶೃಂಗೇರಿ ವಿಧಾನಸಭಾ ಕ್ಷೇತ್ರ
- ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ
► ಚುನಾವಣೆ ಫಲಿತಾಂಶದ ವೇಳೆಗೆ ಒಂದು ರೀತಿಯ ಹಾವು ಏಣಿ ಆಟದಂತಿತ್ತು. ಕೊನೆಯಲ್ಲಿ 201 ಮತಗಳ ಅಂತರದ ಗೆಲುವು. ಪ್ರಯಾಸದ ಗೆಲುವು. ಈ ಸಲದ ಚುನಾವಣೆಯಲ್ಲಿನ ನಿಮ್ಮ ಗೆಲುವಿನ ಬಗ್ಗೆ ಹೇಗೆನ್ನಿಸಿತು?
ಟಿ.ಡಿ. ರಾಜೇಗೌಡ: ಒಂದು ಮತದಲ್ಲಿ ಗೆದ್ದರೂ ಗೆಲುವೇ. ನನ್ನ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ, ಯಾವುದೇ ದ್ವೇಷವಿಲ್ಲದೆ ಪಕ್ಷಾತೀತವಾಗಿ ಎಲ್ಲರ ಕೆಲಸಗಳನ್ನೂ ಮಾಡುತ್ತೇನೆ. ಸಮ್ಮಿಶ್ರ ಸರಕಾರವಿದ್ದಾಗಲೂ ಬಹಳ ಒಳ್ಳೆಯ ಕೆಲಸಗಳಾಗಿದ್ದವು. ತುಂಬ ಸಮಾಧಾನ ತಂದಿತ್ತು. ಎಲ್ಲ ಭಾಗದಲ್ಲಿಯೂ ಶಕ್ತಿ ಮೀರಿ ಕೈಗೊಂಡ ಅಭಿವೃದ್ಧಿ ಕೆಲಸಗಳ ನಂತರ ಏನಾಯಿತೆಂಬುದು ಗೊತ್ತಿದೆ. ಒಂದು ಪಕ್ಷದಿಂದ ಗೆದ್ದ ಶಾಸಕರನ್ನು ಹಣದ ಆಮಿಷವೊಡ್ಡಿ ಖರೀದಿಸಿ, ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬಂತು. ಜನ ಬಿಜೆಪಿಯವರು ಹೇಳಿದ್ದನ್ನೆಲ್ಲ ನಂಬಿದ್ದರು. ಅಧಿಕಾರಕ್ಕೆ ಬಂದ ಮೇಲೆ ಗೊತ್ತಾಯಿತು, ಅವರು ಹೇಳಿದ್ದೆಲ್ಲ ಸಂಪೂರ್ಣ ಸುಳ್ಳು. ಒಂದೇ ಒಂದು ಭರವಸೆಯನ್ನೂ ಅವರು ಈಡೇರಿಸಲಿಲ್ಲ.
► ನಿಮ್ಮ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಅರಣ್ಯವಾಸಿಗಳ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆ ಇವೆಲ್ಲ ಇವೆ. ನೀವೀಗ ಅಧಿಕಾರದಲ್ಲಿದ್ದೀರಿ. ಏನು ಮಾಡಬೇಕು ಎಂದುಕೊಂಡಿದ್ದೀರಿ?
ಟಿ.ಡಿ. ರಾಜೇಗೌಡ: ಅಡಿಕೆ ಬೆಳೆಗಾರರದ್ದು ನಿಜವಾದ ಸಮಸ್ಯೆ. ಮೊದಲನೆಯದಾಗಿ ಹಳದಿ ಎಲೆ ರೋಗ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವಿದ್ದಾಗ ನಾವೆಲ್ಲ ನಿಯೋಗ ಹೋಗಿ, ಹಳದಿ ಎಲೆ ರೋಗದ ಬಗ್ಗೆ ತೋಟಗಾರಿಕಾ ಸಚಿವರ ಗಮನ ಸೆಳೆದಿದ್ದೆವು. ಅವರು ಒಂದು ಸಮಿತಿ ರಚನೆ ಮಾಡಿ ತನಿಖೆಗೆ ಕಳುಹಿಸಿಕೊಟ್ಟರು. ರೋಗಕ್ಕೆ ಪರಿಹಾರ ಕಂಡುಕೊಳ್ಳಲು ಆಗಲಿಲ್ಲ. ಆ ಸಮಿತಿ ಸರಕಾರಕ್ಕೆ ಒಂದು ಶಿಫಾರಸು ಮಾಡಿತು. ಪರ್ಯಾಯ ಬೆಳೆಯ ಪ್ರಸ್ತಾವವೂ ಇತ್ತು. ರೈತರ ಪರಿಸ್ಥಿತಿಯನ್ನು ನಿಜವಾಗಿಯೂ ಅರ್ಥ ಮಾಡಿಕೊಂಡು, ಉತ್ತಮ ಪ್ಯಾಕೇಜ್ ಕೊಡಬೇಕೆಂಬ ಪ್ರಸ್ತಾವವೂ ಬಂದಿತ್ತು. ಆಗ ಹಣಕಾಸು ಸಚಿವರಾಗಿ ಪ್ರಣಬ್ ಮುಖರ್ಜಿಯವರು ಅದಕ್ಕೆಲ್ಲ ಭರವಸೆ ಕೊಟ್ಟಿದ್ದರು. ನಂತರದ ಬೆಳವಣಿಗೆಗಳಲ್ಲಿ ಅವರು ರಾಷ್ಟ್ರಪತಿಯಾದರು. ಅದಾದ ಮೇಲೆ ನನೆಗುದಿಗೆ ಬಿತ್ತು. ಸಾಲ ಮನ್ನಾ ಹೊರತುಪಡಿಸಿ ಬೇರೆಲ್ಲ ಪ್ಯಾಕೇಜ್ಗಳನ್ನೂ ಆಗ ಕೇಂದ್ರ ಸರಕಾರ ಒದಗಿಸಿತು.
► ಈ ಸಮಸ್ಯೆಗೆ ಹೇಗೆ ಪರಿಹಾರ?
ಟಿ.ಡಿ. ರಾಜೇಗೌಡ: ಮಲೆನಾಡಿನಲ್ಲಿ ವಾಣಿಜ್ಯ ಬೆಳೆ ಅಡಿಕೆ. ಅದು ನಾಶವಾದರೆ ಎಲ್ಲರೂ ಗುಳೆ ಹೋಗಬೇಕಾಗುತ್ತದೆ. ಪರ್ಯಾಯ ಬೆಳೆ ಬೆಳೆಯುವ ಶಕ್ತಿಯೂ ಇಲ್ಲ. ಅತಿವೃಷ್ಟಿ, ಅನಾವೃಷ್ಟಿಯಂಥ ಸ್ಥಿತಿಯಲ್ಲಿ ರೈತರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ವಿಜ್ಞಾನಿಗಳು ಈ ರೋಗಗಳಿಗೆ ಪರಿಹಾರ ಕಂಡುಕೊಳ್ಳಲು ಐದು ಕೋಟಿ ರೂ.ಗಳ ಅಗತ್ಯವಿದೆ ಎನ್ನುತ್ತಾರೆ. ಬಿಜೆಪಿ ಸರಕಾರವಿದ್ದಾಗ ಬಜೆಟ್ನಲ್ಲಿ 10 ಕೋಟಿ ರೂ. ಘೋಷಣೆ ಮಾಡಿತು. ಒಂದು ರೂ.ಯೂ ಬಿಡುಗಡೆಯಾಗಲಿಲ್ಲ. ಸಿದ್ದರಾಮಯ್ಯನವರ ಸರಕಾರ ಈ ಬಾರಿ ಅದರ ಸಂಶೋಧನೆಗೆ ಐದು ಕೋಟಿ ರೂ. ಮೀಸಲಿಟ್ಟಿದೆ. ಅದನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ.
► ಒಂದು ಕಡೆ ಅಡಿಕೆ ಬೆಳೆಯಿಲ್ಲದಿದ್ದರೆ ಮಲೆನಾಡಿನ ರೈತರು ಬದುಕುವುದೇ ಕಷ್ಟ. ಇನ್ನೊಂದೆಡೆ ಕೇಂದ್ರ ಸರಕಾರ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ. ಹೀಗಿರುವಾಗ ರೈತರ ಪರಿಸ್ಥಿತಿ ಏನು?
ಟಿ.ಡಿ. ರಾಜೇಗೌಡ: ಅಡಿಕೆ ನಮ್ಮಲ್ಲಿ ಬೆಳೆಯುವಷ್ಟು ವೈಜ್ಞಾನಿಕವಾಗಿ ಬೇರೆ ಕಡೆ ಬೆಳೆಯುವುದಿಲ್ಲ. ಮಲೇಶ್ಯ, ಇಂಡೋನೇಶ್ಯ ಮೊದಲಾದೆಡೆ ಬೆಳೆಯುತ್ತಾರೆ. ಆದರೆ ಅದು ಕಾಡಲ್ಲಿ ಬೆಳೆಯುವುದು. ಗುಣಮಟ್ಟ ನಮ್ಮಲ್ಲಿನ ಅಡಿಕೆಯ ಹಾಗೆ ಇರುವುದಿಲ್ಲ. ವೀಳ್ಯದೆಲೆ, ಅಡಿಕೆ ಆರೋಗ್ಯದ ಮೇಲೆ ಈವರೆಗೂ ದುಷ್ಪರಿಣಾಮ ಬೀರಿಲ್ಲ. ತಂಬಾಕಿನ ಜೊತೆಗೆ ಸೇರಿಸಿ ಮಾರುವುದನ್ನು ನಿಲ್ಲಿಸಬೇಕು. ತಂಬಾಕನ್ನು ಅಡಿಕೆಯಿಂದ ಬೇರ್ಪಡಿಸಬೇಕು.
► ಬಹಳ ದೊಡ್ಡ ಭಯ ಇರುವುದು, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡು ಭಾಗದವರಿಗೆ ಆಗುವ ಸಮಸ್ಯೆಯ ಕುರಿತು. ತೀರ್ಥಹಳ್ಳಿ ಭಾಗದಲ್ಲಿ ಹೋರಾಟ ಶುರುವಾಗಿದೆ. ಈ ಭಾಗದ ಜನರ ಪರವಾಗಿ ನೀವು ಏನು ಹೇಳಬಯಸುತ್ತೀರಿ?
ಟಿ.ಡಿ. ರಾಜೇಗೌಡ: ಅದರ ಬಗ್ಗೆ ನಾವು ಸಾಕಷ್ಟು ಹೋರಾಟಗಳನ್ನು ರೂಪಿಸಿದ್ದೆವು. ಪ್ರತಿಭಟನೆಗಳನ್ನು ಮಾಡಿದ್ದೆವು. ನಮ್ಮ ಪ್ರತಿರೋಧದ ಬಗ್ಗೆ ಸರಕಾರಕ್ಕೆ ಈಗಾಗಲೇ ಮನದಟ್ಟು ಮಾಡಿದ್ದೇವೆ.
► ನಿಮ್ಮ ಪ್ರಕಾರ, ವರದಿ ಜಾರಿಯಾಗಬೇಕೇ, ಆಗಬಾರದೆ?
ಟಿ.ಡಿ. ರಾಜೇಗೌಡ: ಜಾರಿಯಾಗಬಾರದು. ಈಗಾಗಲೇ ಅರಣ್ಯ ರಕ್ಷಣೆಗೋಸ್ಕರ, ಪರಿಸರ ರಕ್ಷಣೆಗೋಸ್ಕರ ಅನೇಕ ಕಾಯ್ದೆಗಳಿವೆ. ರಾಷ್ಟ್ರೀಯ ಉದ್ಯಾನಗಳು, ಮೀಸಲು ಅರಣ್ಯ ಹೀಗೆ ಹಲವು ಇವೆ. ಈ ವರದಿ ಅಷ್ಟು ಸಮಂಜಸವೆಂದು ಕಾಣಿಸುವುದಿಲ್ಲ.
► ಬೇರೆ ರಾಜ್ಯಗಳಲ್ಲಿ ನೋಡುತ್ತಿದ್ದೇವೆ. ಪರಿಸರವನ್ನು ಉಳಿಸಿಕೊಳ್ಳದೇ ಇರುವುದಕ್ಕೆ ಎಂಥ ಅವಘಡಗಳಾಗುತ್ತಿವೆ ಎಂಬುದನ್ನು ಗಮನಿಸುತ್ತಿದ್ದೇವೆ. ಗುಡ್ಡ ಬೆಟ್ಟ ಕುಸಿದು ಊರಿಗೇ ಊರೇ ನಾಶವಾಗುತ್ತಿದೆ. ಗಾಡ್ಗೀಳ್ ವರದಿ ಕೊಟ್ಟಿದ್ದರ ಹತ್ತಿಪ್ಪತ್ತು ಪರ್ಸೆಂಟ್ ಅನ್ನೂ ಕಸ್ತೂರಿ ರಂಗನ್ ವರದಿ ಕೊಟ್ಟಿಲ್ಲ. ಅದನ್ನೂ ಪಾಲಿಸದಿದ್ದರೆ ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳುವುದು ಹೇಗೆ?
ಟಿ.ಡಿ. ರಾಜೇಗೌಡ: ಈಗಾಗಲೇ ಇರುವ ಮೀಸಲು ಅರಣ್ಯದಂಥ ಪ್ರದೇಶಗಳಿಗೆ ಅದನ್ನು ಸೀಮಿತಗೊಳಿಸಲಿ. ಕೃಷಿ ಚಟುವಟಿಕೆಗಳಿಗೆ ಬಳಸಿದ ಭೂಮಿಯನ್ನೆಲ್ಲ ವೈಮಾನಿಕ ಸಮೀಕ್ಷೆ ಮಾಡಿದರೆ ಎಲ್ಲವೂ ಕಾಡಿನಂತೆಯೇ ಕಾಣಿಸುತ್ತದೆ. ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ಮಾಡಿದರು. ಆಗ ರೈತರ ಮೂಲಭೂತ ಸೌಕರ್ಯಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ ಎನ್ನಲಾಗಿತ್ತು. ಕುಡಿಯುವ ನೀರು, ರಸ್ತೆ, ಕೃಷಿ ಚಟುವಟಿಕೆ ಯಾವುದಕ್ಕೂ ಅಡ್ಡಿಪಡಿಸುವುದಿಲ್ಲ ಎಂದೆಲ್ಲ ಭರವಸೆ ಕೊಡಲಾಯಿತು. ಅದಾದ ಬಳಿಕ ಹಂತಹಂತವಾಗಿ ಕಿರುಕುಳ ಶುರುವಾಯಿತು. ರಸ್ತೆ ಮಾಡುವುದಕ್ಕೆ, ಓಡಾಟಕ್ಕೆ, ಕಾಡಿನ ಉತ್ಪನ್ನ ಬಳಕೆಗೆ ಬಿಡುತ್ತಿಲ್ಲ. ಅರಣ್ಯ ಇಲಾಖೆ ಕಾನೂನುಗಳ ಬಗ್ಗೆ ಜನರು ಬೇಸತ್ತಿದ್ದಾರೆ. ಅಧಿಕಾರಿಗಳು ನಕ್ಷೆ ನೋಡಿಕೊಂಡು ಮಾಡಿದರೆ, ಕೃಷಿ ಚಟುವಟಿಕೆ ಮಾಡುತ್ತಿರುವವರು ಎಲ್ಲಿಗೆ ಹೋಗಬೇಕು?
► ನೀವು ಹೇಳುವುದು ರೈತರ ದೃಷ್ಟಿಯಿಂದ ಸರಿ. ಕ್ಷೇತ್ರದ ಜನರ ದೃಷ್ಟಿಯಿಂದ ನೀವು ಹೇಳುತ್ತಿದ್ದೀರಿ. ಇನ್ನು ಕೆಲವರಿದ್ದಾರೆ. ಪೂರ್ತಿ ಅರಣ್ಯ ಒತ್ತುವರಿ ಮಾಡಿಕೊಂಡವರು. ಅಲ್ಲೆಲ್ಲ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಬೇಕು ಎನ್ನಿಸುವುದಿಲ್ಲವೆ?
ಟಿ.ಡಿ. ರಾಜೇಗೌಡ: ರಾಷ್ಟ್ರೀಯ ಉದ್ಯಾನಗಳು, ಮೀಸಲು ಅರಣ್ಯಗಳು ಒತ್ತುವರಿಯಾಗಿದ್ದರೆ ತೆರವು ಮಾಡಿಸುತ್ತಾರೆ. ಈಗ ಜನಸಂಖ್ಯೆ ಬೆಳೆದಿದೆ. ಆ ಹೆಚ್ಚಿರುವ ಜನರಿಗೆ ಆಹಾರ ಬೆಳೆಯಬೇಕಾದವರು ರೈತರು. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕೃಷಿ ಚಟುವಟಿಕೆಗೆ ಭೂಮಿ ಬಳಸುತ್ತಿದ್ದಾರೆ. ಗಣಿಗಾರಿಕೆಯಿಂದ ಭೂಮಿ ಹಾಳಾಗಿದೆಯೇ ಹೊರತು ಮಲೆನಾಡಿನಲ್ಲಿ ಅಂಥ ವಾತಾವರಣ ಇಲ್ಲ. ಕೆಲವರು ಮನೆ ಕಟ್ಟುವುದಕ್ಕೆ, ರಸ್ತೆ ನಿರ್ಮಾಣಕ್ಕೆ ಅವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಕೆಲವು ಅನಾಹುತಗಳು ಆಗಿರಬಹುದು. ಅದರ ಬಗ್ಗೆ ಸ್ವಲ್ಪ ಜಾಗೃತಿ ಮೂಡಿಸಬೇಕು. ನಮ್ಮಲ್ಲಿ ಯಾವುದೇ ಭೂಕುಸಿತ ಆಗುತ್ತಿಲ್ಲ.
► ನಿಮ್ಮ ಕ್ಷೇತ್ರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ವೈದ್ಯರ ಕೊರತೆ ಇದೆ ಎನ್ನಲಾಗುತ್ತಿದೆ. ಕಳೆದ ಬಾರಿ ಅನುದಾನ ಸಿಕ್ಕಿಲ್ಲ ಎಂದಿರಿ. ಈ ಬಾರಿ ಭಾಗ್ಯಗಳ ಕಾರಣಕ್ಕಾಗಿ ಯಾವ ಶಾಸಕರಿಗೂ ಹೆಚ್ಚು ಅನುದಾನ ಸಿಗುತ್ತಿಲ್ಲ ಎಂಬ ಮಾಹಿತಿ ಇದೆ. ಇದನ್ನೆಲ್ಲ ಹೇಗೆ ನಿರ್ವಹಿಸುತ್ತೀರಿ?
ಟಿ.ಡಿ. ರಾಜೇಗೌಡ: ಯಾವುದೇ ಸರಕಾರ ಚುನಾವಣೆಗೆ ಮೊದಲು ಭರವಸೆ ಕೊಡುತ್ತದೆ. ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಭರವಸೆ ಈಡೇರಿಸುವುದಕ್ಕೆ ಯಾವುದಾದರೂ ಸರಕಾರ ಕ್ರಮ ಕೈಗೊಂಡಿದೆ ಎಂದರೆ ಅದು ಕಾಂಗ್ರೆಸ್ ಸರಕಾರ. ಕಳೆದ ಹಲವು ವರ್ಷಗಳಲ್ಲಿ ಬಿಜೆಪಿಯವರು ಬಹಳ ಭರವಸೆಗಳನ್ನು ಕೊಟ್ಟಿದ್ದರು. ಪೆಟ್ರೋಲ್, ಡೀಸೆಲ್ ದರ, ಗ್ಯಾಸ್ ಬೆಲೆ ಕಡಿಮೆ ಮಾಡುವುದಾಗಿ ಹೇಳಿದ್ದರು. ಯಾವುದೂ ಕಡಿಮೆಯಾಗಿಲ್ಲ. ಎಲ್ಲವೂ ಎರಡು ಮೂರು ಪಟ್ಟು ಜಾಸ್ತಿಯೇ ಆಗಿದೆ.
► ಆದರೆ ಮೋದಿ ಮತ್ತು ಬಿಜೆಪಿಯನ್ನು ಬೆಂಬಲಿಸುವ ಅತಿ ಹೆಚ್ಚಿನ ಜನ ಇದ್ದಾರೆ. ಲೋಕಸಭೆ ಚುನಾವಣೆಯಲ್ಲಿಯೂ ನಿಮ್ಮ ಗೆಲುವಿನ ಟ್ರೆಂಡ್ ಹೀಗೆಯೇ ಇರಲಿದೆಯೆ?
ಟಿ.ಡಿ. ರಾಜೇಗೌಡ: ಈಗ ನಮ್ಮ ಸರಕಾರ ಕೊಟ್ಟಿರುವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನೂರಕ್ಕೆ ನೂರರಷ್ಟು ಕರ್ನಾಟಕದಲ್ಲಿ ಗೆಲ್ಲಬೇಕು. ಬೇರೆ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಸರಕಾರ ಇರುವಲ್ಲಿ ಇದನ್ನು ಮಾಡಲಾಗುತ್ತಿದೆ. ನಮ್ಮ ಅನ್ನಭಾಗ್ಯ ಯಶಸ್ವಿಯಾಗಬಾರದು ಎಂದು ಕೇಂದ್ರ ನಮಗೆ ಅಕ್ಕಿ ಕೊಡಲಿಲ್ಲ. ಯಾವ ಅಕ್ಕಿ ಅದು? ನಾವು ಬೆಳೆದದ್ದೇ. ಅಕ್ಕಿ ದಾಸ್ತಾನು ಬೇಕಾದಷ್ಟಿದ್ದರೂ ಕೊಡಲಿಲ್ಲ. ಕೊಡಬಹುದಿತ್ತಲ್ಲವೆ? ಉಚಿತವಾಗಿ ಕೇಳಿದ್ದಲ್ಲ, ದುಡ್ಡು ಕೊಟ್ಟು ಕೊಳ್ಳುವುದಕ್ಕಾಗಿ ಕೇಳಿದ್ದೆವು. ಕೊಟ್ಟಿದ್ದರೆ ಬಡವರಿಗೆ ಅದನ್ನು ಕೊಡುತ್ತಿದ್ದೆವು.
► ನಿಮ್ಮ ಕ್ಷೇತ್ರ ಮತ್ತು ನಿಮ್ಮ ಜಿಲ್ಲೆ ಸಂಘ ಪರಿವಾರದ ಕೈವಶದಲ್ಲಿತ್ತು. ಈಗ ಅವರು ಸೋತಿದ್ದರೂ ಬಹಳ ದೊಡ್ಡ ಪ್ರಮಾಣದ ಮತಗಳನ್ನು ಪಡೆದಿದ್ದಾರೆ. ಈ ಭಾಗದಲ್ಲಿ ದತ್ತಪೀಠ ಅಭಿಯಾನದಿಂದ ಆದ ಬಿಜೆಪಿ ಪರ ಅಲೆ ಈಗಲೂ ಉಳಿದಿದೆ ಅನಿಸುತ್ತದೆಯೆ? ಲೋಕಸಭೆ ಚುನಾವನೆಯಲ್ಲಿ ಇದು ಪ್ರತಿಫಲಿಸುತ್ತದೆಯೆ?
ಟಿ.ಡಿ. ರಾಜೇಗೌಡ: ಜೀವಂತವಾಗಿಡುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ದತ್ತಪೀಠ ಸಮಸ್ಯೆಯನ್ನು ಇವರು ಬಗೆಹರಿಸಲು ಬಿಡುತ್ತಿಲ್ಲ. ಅದನ್ನು ಹಾಗೇ ಉಳಿಸಿಕೊಂಡು ರಾಜಕಾರಣ ಮಾಡಲಾಗುತ್ತಿದೆ. ಅದಕ್ಕೂ ಒಂದು ಶಾಶ್ವತ ಪರಿಹಾರ ಕೊಟ್ಟುಕೊಳ್ಳಬಹುದು. ಅದು ಹಿಂದೂ-ಮುಸ್ಲಿಮರ ಭಾವೈಕ್ಯತಾ ಕೇಂದ್ರ. ಅಲ್ಲಿ ಮತ ಗಳಿಸುವುದಕ್ಕೆ ಧಾರ್ಮಿಕ ವಿಭಜನೆ ಮಾಡಿ ಅಧಿಕಾರಕ್ಕೆ ಬರುವ ಹುನ್ನಾರ ನಡೆಸಿದ್ದಾರೆ, ಅಧಿಕಾರಕ್ಕೆ ಬಂದಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಅದು ಒಳ್ಳೆಯದಲ್ಲ. ಸುಳ್ಳು ಬಹಳ ಸುಲಭ. ಸತ್ಯ ಕಷ್ಟ. ಜನ ಕೂಡ ಸುಳ್ಳನ್ನು ಬಹಳ ಬೇಗ ನಂಬುತ್ತಾರೆ. ಆಮೇಲೆ ಗೊತ್ತಾಗುತ್ತದೆ.
► ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರ ಎಂದರೆ ಗೋವಿಂದೇಗೌಡರನ್ನು ಮರೆಯುವಂತಿಲ್ಲ. ಈ ಬಾರಿ ನಿಮಗೆ ಆ ಖಾತೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಮಧು ಬಂಗಾರಪ್ಪ ಅವರಿಗೆ ಸಿಕ್ಕಿತು. ಇದರ ಬಗ್ಗೆ ಪ್ರತಿಕ್ರಿಯೆ?
ಟಿ.ಡಿ. ರಾಜೇಗೌಡ: ಸರಕಾರ ರಚನೆ ಸಂದರ್ಭದಲ್ಲಿ ಜಾತಿ, ಜಿಲ್ಲೆ ಇವೆಲ್ಲಕ್ಕೆ ಪ್ರಾತಿನಿಧ್ಯ ಕೊಡಬೇಕಾಗುತ್ತದೆ. ಹಿರಿತನದ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಕೊಟ್ಟಿದ್ದಾರೆ. ಅವರ ತಂದೆಯವರು ಕೊಟ್ಟ ಕಾರ್ಯಕ್ರಮಗಳು ಇವತ್ತಿಗೂ ಜನರ ಮನಸ್ಸಿನಲ್ಲಿವೆ. ನಮ್ಮ ಭಾಗದಲ್ಲಿ ಯಾರಿಗಾದರೂ ಕೊಡಿ ಎಂದು ನಮ್ಮ ಬೇಡಿಕೆಯೇನೋ ಇತ್ತು. ಆದರೆ ಕೊಟ್ಟಿಲ್ಲ ಎಂಬ ಬೇಸರವೇನೂ ಇಲ್ಲ.
► ಮುಂದಿನ ದಿನಗಳಲ್ಲಿ ಸಿಗಬಹುದು ಎಂಬ ನಿರೀಕ್ಷೆ ಇದೆಯೆ?
ಟಿ.ಡಿ. ರಾಜೇಗೌಡ: ಅದು ಸರಕಾರಕ್ಕೆ, ಸರಕಾರ ನಡೆಸುವವರಿಗೆ, ನಮ್ಮ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಬಿಟ್ಟಿರುವ ವಿಚಾರ.
► ನಿಮ್ಮ ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು ಎಂಬ ಕನಸು ಇಟ್ಟುಕೊಂಡಿದ್ದೀರಿ?
ಟಿ.ಡಿ. ರಾಜೇಗೌಡ: ಶಾಸಕನಾದ ನಂತರ ಆರೋಗ್ಯ, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಆಗುತ್ತಿರುತ್ತವೆ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆದವು. ಆಗಲೂ ಪಕ್ಷಾತೀತವಾಗಿ ಅನುದಾನ ಕೊಡಲಾಗಿತ್ತು. ನಾನು ಕೂಡ ನನಗೆ ಎಷ್ಟೇ ತೊಂದರೆ ಕೊಟ್ಟರೂ ನನ್ನ ಅನುಭವದ ಆಧಾರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಈ ಸಲ ನಮ್ಮದೇ ಸರಕಾರವಿದೆ. ಜಿಲ್ಲಾವಾರು ಸಭೆ ಕರೆದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಮ್ಮ ಸಮಸ್ಯೆಗಳನ್ನೆಲ್ಲ ಕೇಳಿದ್ದಾರೆ. ಎಲ್ಲವನ್ನೂ ಚರ್ಚಿಸಿದ್ದೇವೆ. ಫೆಬ್ರವರಿ ನಂತರ ಹಣ ಕೊಡುವುದಾಗಿ ಹೇಳಿದ್ದಾರೆ. ಈಗಲೂ ನಿರ್ವಹಣೆಗೆ ಹಣ ಬರುತ್ತಿದೆ. ನನ್ನ ಕ್ಷೇತ್ರಕ್ಕೆ ಮಳೆಗಾಲದಲ್ಲಿ ರಸ್ತೆ ನಿರ್ವಹಣೆಗೆ 4 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಕೆಲಸಗಳಾಗುತ್ತಿವೆ. ಹೊಸದಾಗಿ ದೊಡ್ಡ ದೊಡ್ಡ ಯೋಜನೆಗಳಿಗೆ ಹಣ ಈಗ ಕೊಡುತ್ತಿಲ್ಲ ಅಷ್ಟೆ.
► ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ನೀವು ಹೇಳುತ್ತಿದ್ದೀರಿ. ಕೆಲವರು ಭಿನ್ನಮತ ಇದೆ ಎನ್ನುತ್ತಿದ್ದಾರೆ. ಸರಿಯಾಗಿ ಯಾವುದಕ್ಕೂ ಸ್ಪಂದಿಸುತ್ತಿಲ್ಲ, ವರ್ಗಾವಣೆಗಳು ನಾವು ಹೇಳಿದಂತೆ ಆಗುತ್ತಿಲ್ಲ, ಕಮಿಷನ್ ನಡೆಯುತ್ತದೆ ಎಂಬ ಆರೋಪಗಳಿವೆ. ಇದರ ಬಗ್ಗೆ?
ಟಿ.ಡಿ. ರಾಜೇಗೌಡ: ನಮ್ಮ ಕ್ಷೇತ್ರದಲ್ಲಿ ಕೂಡ ಕೆಲವು ದೂರುಗಳ ಆಧಾರದ ಮೇಲೆ ನಾನು ಕೆಲವು ವರ್ಗಾವಣೆಗಳನ್ನು ಮಾಡಿಸಿದ್ದೇನೆ. ಯಾವ ಮಂತ್ರಿಗಳೂ ಇವತ್ತಿನವರೆಗೂ ಒಂದು ರೂ. ಕೇಳಿಲ್ಲ. ನಾವು ಕೊಟ್ಟಿರುವ ಶಿಫಾರಸುಗಳನ್ನು ವರ್ಗಾವಣೆ ಮಾನದಂಡಗಳಿಗೆ ಅನುಗುಣವಾಗಿದ್ದಲ್ಲಿ ಮಾಡಿದ್ದಾರೆ. ಯಾವ ಅಧಿಕಾರಿಗಳೂ ಹಣ ಕೇಳಿಲ್ಲ. ನಾವೂ ಯಾರನ್ನೂ ಕೇಳಿಲ್ಲ. ವರ್ಗಾವಣೆ ಯಾವುದೇ ಸರಕಾರವಿದ್ದಾಗಲೂ ನಡೆಯುವಂಥದ್ದು. ನಮ್ಮ ಸರಕಾರದಲ್ಲಿ ಮುಕ್ತವಾದ ವರ್ಗಾವಣೆಗಳು ಆಗಿವೆ.
► ಬಿಜೆಪಿಯ ಧರ್ಮದ ರಾಜಕೀಯಕ್ಕೆ ಇನ್ನೂ ಆಯುಸ್ಸು ಇದೆ ಅನ್ನಿಸುತ್ತದೆಯೆ? ಅಥವಾ ಮುಗಿಯಿತು ಎನ್ನಿಸುತ್ತಿದೆಯೆ?
ಟಿ.ಡಿ. ರಾಜೇಗೌಡ: ಜನ ಬುದ್ಧಿವಂತರಾಗುತ್ತಿದ್ದಾರೆ. ಒಟ್ಟಾಗಿ ಬಾಳುವುದರಲ್ಲಿ ಅರ್ಥವಿದೆ ಎಂಬುದನ್ನು ಜನರೂ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇಲ್ಲದೆ ಹೋದಲ್ಲಿ ಆಂತರಿಕ ಕಲಹಗಳು ಶುರುವಾಗುತ್ತವೆ. ನನ್ನ ಸ್ವಾರ್ಥಕ್ಕೋಸ್ಕರ ನಾನು ಜಾತಿ, ಧರ್ಮ, ಮತ ಎಂದು ಹೊಡೆದಾಟಕ್ಕೆ ಹಚ್ಚಿದರೆ ದೇಶಕ್ಕೆ ಒಳ್ಳೆಯದನ್ನು ಮಾಡಿದಂತಾಗುವುದಿಲ್ಲ. ಮಕ್ಕಳಲ್ಲಿ ಅಂಥ ಭಾವನೆ ಬಿತ್ತಬಾರದು. ಶಾಲಾ ಮಕ್ಕಳಲ್ಲೂ ಜಾತಿ ಧರ್ಮದ ಭಾವನೆ ಬಿತ್ತುವಂಥ ಕೆಲಸ ರಾಜಕೀಯಕ್ಕೋಸ್ಕರ ರಾಜಕಾರಣಿಗಳಿಂದ ಆಗುತ್ತಿದೆ. ಅದು ತಪ್ಪು. ಕಡಿಮೆ ಸಂಖ್ಯೆಯಲ್ಲಿರುವ ಸಮುದಾಯವನ್ನು ಬಹುಸಂಖ್ಯಾಕರು ಪ್ರೀತಿಯಿಂದ ಕಾಣಬೇಕು. ಪ್ರಪಂಚದೆಲ್ಲೆಡೆ ಅದೇ ವ್ಯವಸ್ಥೆಯಿದೆ. ನಾವು ಅದನ್ನು ಮೈಗೂಡಿಸಿಕೊಂಡರೆ ಖಂಡಿತ ಒಳ್ಳೆಯದು.
► 2024ರಲ್ಲಿ ಅಂಥ ಬದಲಾವಣೆ ಆದೀತೆ?
ಟಿ.ಡಿ. ರಾಜೇಗೌಡ: ಆಗಬೇಕು. ಜನ ಬದಲಾಗಬೇಕು. ಜನರಲ್ಲಿ ಪರಿವರ್ತನೆ ಬರಬೇಕು. ಸರಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಮ್ಮ ಕ್ಷೇತ್ರದಲ್ಲಿಯೇ ನೋಡಿ, ಈಗ ಯಾವ ಸಮಸ್ಯೆಗಳೂ ಇಲ್ಲ. ಮೊದಲು ಅಲ್ಲಲ್ಲಿ ಕೋಮುಗಲಭೆಗಳು ಆಗುತ್ತಿದ್ದವು. ನಾನು ಬಂದ ಮೇಲೆ ಅದಾವುದೂ ಆಗಲು ಬಿಟ್ಟಿಲ್ಲ.
► ಆದರೆ ಲೋಕಸಭೆ ಕ್ಷೇತ್ರ ಎಂದು ಬಂದಾಗ, ದಕ್ಷಿಣ ಕನ್ನಡ ಬಿಟ್ಟರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿಯೇ ಹೆಚ್ಚು ಕೋಮು ಧ್ರುವೀಕರಣ ಆಗಿರುವುದು ಅಥವಾ ಸಂಘರ್ಷಗಳು ಹೆಚ್ಚು ನಡೆಯುವುದು. ಇದನ್ನು ಹೇಗೆ ಬಗೆಹರಿಸುವುದು?
ಟಿ.ಡಿ. ರಾಜೇಗೌಡ: ನಾವೀಗ ಐದು ಸೀಟುಗಳಲ್ಲಿ ಐದನ್ನೂ ಗೆದ್ದೆವು. ಉಡುಪಿಯಲ್ಲಿ ಜನ ಇನ್ನೂ ಆ ಭಾವನೆಯಿಂದ ಹೊರಬಂದಿಲ್ಲ. ಆದರೆ ಬದಲಾವಣೆ ಆಗುತ್ತಿದೆ.
► ಈ ಬಾರಿ ಲೋಕಸಭೆ ಚುನಾವಣೆ ಬಗ್ಗೆ ಏನು ನಿರೀಕ್ಷೆ ಇದೆ?
ಟಿ.ಡಿ. ರಾಜೇಗೌಡ: ಜನರ ಪ್ರೀತಿ ವಿಶ್ವಾಸ ಇದೆ. ಸರಕಾರ ಕೊಟ್ಟ ಭರವಸೆಗಳನ್ನು ಉಳಿಸಿಕೊಂಡಿದೆ. ಉತ್ತಮ ಆಡಳಿತ ಕೊಡುತ್ತಿದೆ. ಅಭಿವೃದ್ಧಿ ನಿರಂತರವಾಗಿ ಆಗುತ್ತಿದೆ. ಎಲ್ಲೂ ಕೆಲಸ ಸ್ಥಗಿತವಾಗಿಲ್ಲ. ಅನುದಾನ ಕೊರತೆಯಿರುವುದರಿಂದ ಸ್ವಲ್ಪ ಮಂದಗತಿ ಇದೆ.