ಇಲ್ಲಿ ಹಸಿದು ಸಾಯೋದಕ್ಕಿಂತ, ಇಸ್ರೇಲಲ್ಲಿ ಸಾಯೋದೇ ಮೇಲು ಎಂದು ಹೊರಟ ಸಾವಿರಾರು ಕಾರ್ಮಿಕರು !

ವರ್ಷವೂ ಕೋಟಿ ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ವಿಶ್ವಗುರುವಿನ ದೇಶದಲ್ಲಿ ಈಗಿರುವ ಸ್ಥಿತಿ ಏನು ?. ಇಲ್ಲಿ ಹಸಿದು ಹಸಿದು ಹೈರಾಣಾಗುವುದಕ್ಕಿಂತ, ಆಕ್ರಮಣಕ್ಕಿಳಿದಿರುವ ಇಸ್ರೇಲಿಗೆ ಹೋಗಿ ಸಾಯುವುದೇ ಎಷ್ಟೋ ಮೇಲು ಎಂದುಕೊಂಡು ಈ ದೇಶದ ಕಾರ್ಮಿಕರು ಆ ಯುದ್ಧಪೀಡಿತ ದೇಶಕ್ಕೆ ಹೋಗಲು ತಾ ಮುಂದು ನಾ ಮುಂದು ಎಂದು ತಯಾರಾಗಿ ಬಿಟ್ಟಿದ್ದಾರೆ.
ಇದೆಂತಹ ವಿಪರ್ಯಾಸ ನೋಡಿ. ಇಲ್ಲಿನ ಯುವಕರಿಗೆ ಭಾರೀ ಉದ್ಯೋಗದ ಭರವಸೆಯನ್ನು ಯಾವ ಸರ್ಕಾರ ಕೊಟ್ಟಿತ್ತೋ ಅದೇ ಬಿಜೆಪಿ ಸರ್ಕಾರ ಈಗ ಅವರನ್ನು ಯುದ್ಧಗ್ರಸ್ತ ದೇಶದಲ್ಲಿ ದುಡಿಯಲು ಕಳಿಸುತ್ತಿದೆ. ಅಲ್ಲಿ ದುಡಿಯಲು ಹೋಗುತ್ತಿರುವ ಕಾರ್ಮಿಕರಿಗೆ ಭದ್ರತೆಯ ಯಾವ ಭರವಸೆಯನ್ನೂ ಕೊಡದೆ, ಅವರನ್ನು ಕಳಿಸುತ್ತಿರುವ ಇಲ್ಲಿನ ವಿಶ್ವಗುರು ಸರಕಾರ ಅದೆಷ್ಟು ಬೇಜವಾಬ್ದಾರಿಯದ್ದು ?
ಅದೆಷ್ಟು ಸಂವೇದನಾ ರಹಿತ ಸರಕಾರವಿದು ?
ಹಾಗಾದರೆ ಇಲ್ಲಿ ಅದೆಂಥ ಹತಾಶ ಪರಿಸ್ಥಿತಿ ನಿರ್ಮಾಣವಾಗಿದೆ ? ದೇಶದಲ್ಲಿ ನಿರುದ್ಯೋಗದ ಸ್ಥಿತಿ ಅದೆಷ್ಟು ಭಯಾನಕವಾಗಿದೆ ? ವಿಕಸಿತ ಭಾರತ, ಅಮೃತ ಕಾಲ, ಬಡತನ ಮುಕ್ತ ಎಂದೆಲ್ಲ ಮತ್ತೇಕೆ ಈ ಸರ್ಕಾರ ಬಡಾಯಿ ಕೊಚ್ಚಿಕೊಂಡು ಓಡಾಡುತ್ತಿದೆ? ಒಂದು ಯುದ್ಧದಾಹಿ ಮತ್ತು ಯುದ್ಧಗ್ರಸ್ತ ದೇಶ. ಇನ್ನೊಂದು ಇಲ್ಲಿನ ಯುವಜನರಿಗೆ, ಕಾರ್ಮಿಕರಿಗೆ ಉದ್ಯೋಗ ಕೊಡಲಾರದೆ, ಹಸಿವನ್ನೂ, ಬಡತನವನ್ನೂ ಮರೆಮಾಚಲು ನೋಡುತ್ತ ತನ್ನನ್ನು ತಾನು ವಿಶ್ವಗುರು ಎಂದು ಹೇಳಿಕೊಳ್ಳುವ ದೇಶ.
ಇಲ್ಲಿ ಉದ್ಯೋಗ ಕೊಡಲಾಗದೆ, ಅಲ್ಲಿ ಅಗತ್ಯವಾಗಿರುವ ಕಾರ್ಮಿಕರನ್ನು ಇಲ್ಲಿಂದ ಅಲ್ಲಿಗೆ ಕಳಿಸಲಾಗುತ್ತಿದೆ. ಮತ್ತು ಇವರದೇ ಕೋಮುವಾದದ ಅಮಲಿನಲ್ಲಿ ಮುಳುಗಿಹೋಗಿದ್ದವರೂ ಕೂಡ ಈಗ ಇಸ್ರೇಲ್ಗೆ ದುಡಿಯಲು ಹೋಗುತ್ತಿರುವ ಕಾರ್ಮಿಕರ ಸಾಲಿನಲ್ಲಿ ಇದ್ದಿರಬಹುದು.
ಮುಂದಿನ ವಾರದಿಂದ ಭಾರತದ ಸುಮಾರು 10,000 ಕಾರ್ಮಿಕರು ಇಸ್ರೇಲ್ಗೆ ಹೋಗಲು ಶುರುಮಾಡಲಿದ್ದಾರೆ. ಫೆಲೆಸ್ತೀನ್ ಮೇಲೆ ಆಕ್ರಮಣ ಶುರು ಮಾಡಿದ ಬಳಿಕ ಫೆಲೆಸ್ತೀನಿಯರನ್ನು ಒಳಗೆ ಬಿಟ್ಟುಕೊಳ್ಳದ ಇಸ್ರೇಲ್ ಗೆ ದುಡಿಯುವುದಕ್ಕೆ ಜನರೇ ಇಲ್ಲವಾಗಿದೆ. ಅದಕ್ಕೆ ಸರಿಯಾಗಿ, ಈ ವಿಶ್ವಗುರು ದೇಶದಲ್ಲಿ ಕೆಲಸವೂ ಇಲ್ಲದೆ, ಹೊತ್ತಿನ ತುತ್ತಿಗೂ ತತ್ವಾರವಾಗಿ ಕಂಗೆಟ್ಟಿರುವ ಸಾವಿರ ಸಾವಿರ ಕಾರ್ಮಿಕರು ಹಸಿವಿನಿಂದ ಬಳಲುತ್ತಿದ್ದಾರೆ.
ಇಸ್ರೇಲ್ಗೆ ಹೋಗಲು ಇಲ್ಲಿ ಭಾರೀ ಪೈಪೋಟಿಯೇ ನಡೆದಿದೆ. ಸುಮಾರು 10,000 ಕಾರ್ಮಿಕರು ವಾರಕ್ಕೆ 700ರಿಂದ 1,000 ಸಂಖ್ಯೆಯ ಬ್ಯಾಚ್ಗಳಲ್ಲಿ ಇಸ್ರೇಲ್ಗೆ ಹೋಗಲಿದ್ದಾರೆ. ಯುಪಿ, ಹರ್ಯಾಣಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದ ಬೆನ್ನಿಗೆ ಬಿಹಾರ, ರಾಜಸ್ತಾನ, ಹಿಮಾಚಲ ಪ್ರದೇಶ, ಮಿಝೋರಾಂ ಹಾಗು ತೆಲಂಗಾಣಗಳಲ್ಲೂ ಇಸ್ರೇಲ್ ಗೆ ಹೋಗಲು ಕಾರ್ಮಿಕರು ಸಿದ್ಧವಾಗಿದ್ದಾರೆ.
ಯುದ್ಧ ಸ್ಥಿತಿಯಲ್ಲಿ ಇಸ್ರೇಲ್ನಲ್ಲಿ ನಿರ್ಮಾಣ ಉದ್ಯಮಕ್ಕೆ ಯಾವ ಮಟ್ಟದಲ್ಲಿ ಕಾರ್ಮಿಕರು ಇಲ್ಲವಾಗಿದ್ದಾರೆಂದರೆ, 50,000ದಿಂದ 60,000ದಷ್ಟು ವಿದೇಶಿ ಕಾರ್ಮಿಕರನ್ನು ಅಲ್ಲಿಗೆ ಕರೆಸಿಕೊಳ್ಳಲು ಇಸ್ರೇಲ್ ತಯಾರಾಗಿದೆ. ಅದರಲ್ಲಿ ಭಾರತದ 10,000 ಕಾರ್ಮಿಕರನ್ನೂ ತನ್ನಲ್ಲಿ ಕರೆಸಿಕೊಳ್ಳುವುದಕ್ಕೆ ಕಳೆದ ತಿಂಗಳೇ ಒಪ್ಪಿಗೆ ಕೊಟ್ಟಿದೆ. ಮೆಕ್ಸಿಕೋ, ಕೀನ್ಯಾ ಮತ್ತು ಮಲಾವಿಯಿಂದಲೂ ಕೆಲಸಗಾರರನ್ನು ನೇಮಿಸಿಕೊಳ್ಳಲು ಅದು ನೋಡುತ್ತಿದೆ. ಭಾರತ, ಶ್ರೀಲಂಕಾ ಮತ್ತು ಉಜ್ಬೇಕಿಸ್ತಾನ್ಗಳಲ್ಲಿ ಕಾರ್ಮಿಕರ ಆಯ್ಕೆ ಆಗಲೇ ಶುರುವಾಗಿದೆ.
ಇಲ್ಲಿಯವರೆಗೆ ಪರೀಕ್ಷಿಸಲಾದ ಸುಮಾರು 8,000 ಕಾರ್ಮಿಕರಲ್ಲಿ ಸುಮಾರು 5,500 ಕಾರ್ಮಿಕರು ಇಸ್ರೇಲ್ನಲ್ಲಿ ಕೆಲಸ ಮಾಡಲು ಸರಿಹೊಂದುತ್ತಾರೆ ಎಂಬುದು ಕಂಡುಬಂದಿದ್ದು, ಅವರಲ್ಲಿ ಹೆಚ್ಚಿನವರು ಭಾರತದ ಕಾರ್ಮಿಕರೇ ಆಗಿದ್ದಾರೆ. ಭಾರತೀಯ ಕಟ್ಟಡ ಕಾರ್ಮಿಕರು ಉತ್ತಮ ವೃತ್ತಿಪರ ಮಟ್ಟದಲ್ಲಿದ್ದಾರೆ. ಅವರಲ್ಲಿ ಅನೇಕರು ಈ ಹಿಂದೆ ಗಲ್ಫ್ ದೇಶಗಳಲ್ಲಿ ಕೆಲಸ ಮಾಡಿದವರಾಗಿದ್ದು, ಕೆಲಸದಲ್ಲಿ ಪರಿಣತಿಯಿದೆ.
ಹೆಚ್ಚಿನವರು ಇಂಗ್ಲಿಷ್ನಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ ಮತ್ತು ಗಲ್ಫ್ ನಲ್ಲಿ ಕೆಲಸ ಮಾಡಿದವರಿಗೆ ಅರೇಬಿಕ್ ಕೂಡ ತಿಳಿದಿದೆ.
ಇವೆಲ್ಲ ಕಾರಣಗಳಿಂದ ಭಾರತೀಯ ಕಾರ್ಮಿಕರೇ ಹೆಚ್ಚು ಆಯ್ಕೆಯಾಗುತ್ತಿದ್ದಾರೆ. ಇಲ್ಲಿನ ಕಾರ್ಮಿಕರಿಗೂ ಈಗ ಅದೇ ಬೇಕಾಗಿದೆ.
ಸುಮಾರು 18,000 ಭಾರತೀಯರು ಇಸ್ರೇಲ್ನಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದು, ಹೆಚ್ಚಿನವರು ಯುದ್ಧದ ವೇಳೆಯಲ್ಲಿಯೂ ದೇಶ ಬಿಡದೆ ಇಸ್ರೇಲ್ನಲ್ಲಿಯೇ ಇರಲು ನಿರ್ಧರಿಸಿದರು. ಯಾಕೆಂದರೆ, ಅವರು ಅಲ್ಲಿ ಸಾಕಷ್ಟು ಸುರಕ್ಷಿತರಾಗಿದ್ಧಾರೆ ಎಂದೆಲ್ಲ ಬಿಂಬಿಸುವುದು ನಡೆದಿದೆ.
ಆದರೆ, ವಾಸ್ತವ ಬೇರೆಯೇ ಇದೆ. ಯುದ್ಧವೇ ಆದರೂ ಸರಿಯೆ, ಅಲ್ಲಿಂದ ಬಿಟ್ಟು ಭಾರತಕ್ಕೆ ಮರಳಿದರೆ ಹಸಿದ ಹೊಟ್ಟೆಯಲ್ಲಿಯೇ ಕೂರಬೇಕಾಗುತ್ತದೆ ಎಂಬುದು ಗೊತ್ತಿರುವುದರಿಂದಲೇ ಅವರು ಅಲ್ಲಿಂದ ಬಿಟ್ಟು ಬರಲು ಮನಸ್ಸು ಮಾಡಿದಂತಿಲ್ಲ.
ಈಗ ಇಸ್ರೇಲ್ ಗೆ ಹೋಗಲು ತುದಿಗಾಲಲ್ಲಿ ನಿಂತಿರುವ ಕಾರ್ಮಿಕರು, ಅಲ್ಲಿ ಹೋಗಿ ಸತ್ತರೂ ಪರವಾಗಿಲ್ಲ, ಇಲ್ಲಿ ಮಾತ್ರ ಹಸಿವಿನಿಂದ ನರಳುವ ಕರ್ಮ ಬೇಡ ಎನ್ನುತ್ತಿರುವುದೇ ಇದಕ್ಕೆ ಸಾಕ್ಷಿ. ಎಂಥ ದಾರುಣ ಸನ್ನಿವೇಶ ಇಲ್ಲಿದೆ ಎನ್ನುವುದನ್ನು ಕಾರ್ಮಿಕರ ಈ ಮಾತುಗಳೇ ಹೇಳುತ್ತಿವೆ.
ಇಲ್ಲಿಂದ ಕಾರ್ಮಿಕರನ್ನು ಇಸ್ರೇಲ್ಗೆ ಕಳಿಸಲಾಗುತ್ತಿರುವುದು, ಕೋಟಿ ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ಸರ್ಕಾರದ ವೈಫಲ್ಯ ಎಂದೇ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಕೂಡ ಹೇಳುತ್ತಿದೆ.
ಕಾರ್ಮಿಕರಿಗೆ ಇಸ್ರೇಲ್ನಲ್ಲಿ ಇರಬಹುದಾದ ಅಪಾಯದ ಬಗ್ಗೆ ಪ್ರತಿಪಕ್ಷಗಳೂ ತೀವ್ರ ಕಳವಳ ವ್ಯಕ್ತಪಡಿಸಿವೆ.
ದೇಶದ ವಿವಿಧ ಭಾಗಗಳ ಕಾರ್ಮಿಕರು, ಶಟರಿಂಗ್, ಕಬ್ಬಿಣದ ಕೆಲಸ, ಸೆರಾಮಿಕ್ ಟೈಲಿಂಗ್ ಅಥವಾ ಪ್ಲಾಸ್ಟರಿಂಗ್ನಲ್ಲಿ ನುರಿತವರು ಅರ್ಜಿ ಸಲ್ಲಿಸುತ್ತಿದ್ದಾರೆ. ದೊಡ್ಡ ವೇತನದ ಆಮಿಷ ಒಡ್ಡಲಾಗುತ್ತಿರುವುದರಿಂದ ಕಾರ್ಮಿಕರ ಪೈಪೋಟಿಯೂ ಹೆಚ್ಚಿದೆ.
ಈ ದೇಶದಲ್ಲಿ ಎಂಥ ಸ್ಥಿತಿಯಿದೆ ಎನ್ನುವುದನ್ನು ಹೇಳುವ ಮತ್ತೊಂದು ಉದಾಹರಣೆ, ಇಸ್ರೇಲ್ಗೆ ಹೋಗಲು ತಯಾರಾಗಿರುವ ಉತ್ತರ ಪ್ರದೇಶದ ಒಬ್ಬ ಫೋಟೊಗ್ರಾಫರ್ ಕಥೆ. ಆತ ಕ್ಯಾಮೆರಾ ತೆಗೆದುಕೊಳ್ಳಲು ಸಾಲಕ್ಕೆ ಅರ್ಜಿ ಹಾಕಿದರೆ ಅದನ್ನು ಬ್ಯಾಂಕ್ ತಿರಸ್ಕರಿಸಿದೆ.
ಇದಾದ ಬಳಿಕವೇ ಇಸ್ರೇಲ್ನಲ್ಲಿ ಕೆಲಸಕ್ಕೆ ಇಲ್ಲಿನವರನ್ನು ಕಳಿಸಲಾಗುತ್ತಿರುವ ವಿಚಾರ ತಿಳಿದು ಆಯ್ಕೆ ಪರೀಕ್ಷೆ ಎದುರಿಸಿದ್ದು ಆತ.
ಅಲ್ಲಿಗೆ ಹೋಗುವುರಿಂದ ಅಪಾಯ ಇದೆ ಅನ್ನುವುದು ಆತನಿಗೆ ಹೊತ್ತು. ಆದರೂ ಮಕ್ಕಳಿಗಾಗಿ, ಭವಿಷ್ಯಕ್ಕಾಗಿ ಎಲ್ಲಿಗಾದರೂ ಹೋಗಿ ದುಡಿಯಲೇಬೇಕಿದೆ ಎನ್ನುವ ಅನಿವಾರ್ಯತೆ ಆತನದು. ತನಗೆ ಬೇಕಿರುವ ಒಂದು ಸಣ್ಣ ಮೊತ್ತದ ಸಾಲವನ್ನು ಬ್ಯಾಂಕ್ ಕೊಟ್ಟಿದ್ದಿದ್ದರೆ,
ಮಕ್ಕಳನ್ನು ಇಲ್ಲಿ ಬಿಟ್ಟು ಯುದ್ಧ ನಡೆದಿರುವ ದೇಶಕ್ಕೆ ದುಡಿಯಲು ಹೋಗಬೇಕಾದ ಸ್ಥಿತಿ ಇರುತ್ತಿರಲಿಲ್ಲ ಎನ್ನುವ ಆತನ ಕಷ್ಟ ಎಂಥದಿರಬಹುದು ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳಬಹುದಾಗಿದೆ.
ಅಗತ್ಯ ಇರುವವರಿಗೆ ಉದ್ಯೋಗ ಕಲ್ಪಿಸುವ ಯುಪಿಎ ಸರಕಾರದ ನರೇಗಾ ಯೋಜನೆಯನ್ನು ಲೇವಡಿ ಮಾಡಿದ್ದ ಮೋದಿ ಸರ್ಕಾರ,
ಈ ದೇಶದ ಬಡವರಿಗಾಗಿ, ದುಡಿವವರಿಗಾಗಿ ಮಾಡಿದ್ದೇನು ಎಂಬ ಬಣ್ಣ ಈ ಕಟುವಾಸ್ತವದಲ್ಲಿ ಬಯಲಾಗುತ್ತಿದೆ.
ಇಲ್ಲಿ ಕೆಲಸ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿಯೇ, ಇಲ್ಲಿಯ ಸರ್ಕಾರ ತಮ್ಮ ಕೈಹಿಡಿಯುತ್ತಿಲ್ಲ ಎಂಬ ಕಾರಣಕ್ಕಾಗಿಯೇ, ಅವರೆಲ್ಲ ಇಂದು ಇಂಥದೊಂದು ರಿಸ್ಕ್ ತೆಗೆದುಕೊಂಡು ಇಸ್ರೇಲ್ನಂಥ ಯುದ್ಧಗ್ರಸ್ತ ದೇಶಕ್ಕೆ ಹೋಗಲು ಮುಂದಾಗಿದ್ದಾರೆ.
ಕೆಲಸವೇ ಸಿಗದ ಈ ದೇಶದಲ್ಲಿ ಇರುವುದಕ್ಕಿಂತ, ಅಪಾಯವಿದ್ದರೂ ಸರಿಯೇ ಅಲ್ಲಿಗೇ ಹೋಗುವುದು ಎಷ್ಟೋ ಪಾಲು ಮೇಲು ಎಂದು ನಿರ್ಧರಿಸಿಬಿಟ್ಟಿದ್ದಾರೆ ಅವರೆಲ್ಲ. ಇಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಒಂದು ಕೆಲಸ ಸಿಗಲಿಲ್ಲ. ಈಗ ಅಲ್ಲಿಗೆ ಹೋಗಿಯಾದರೂ ದುಡ್ಡು ಸಂಪಾದಿಸಬಹುದು. ಅಲ್ಲಿಂದ ವಾಪಸಾದ ಮೇಲೆ ಏನಾದರೂ ವ್ಯಾಪಾರ ಶುರುಮಾಡಬೇಕು ಎಂದುಕೊಂಡಿದ್ದೇನೆ ಎಂದೊಬ್ಬ ಕಾರ್ಮಿಕ ತನ್ನ ಕನಸಿನ ಬಗ್ಗೆ ಹೇಳಿಕೊಳ್ಳುತ್ತಾನೆ.
ವರದಿಗಳು ದಾಖಲಿಸಿರುವ ಆ ಕಾರ್ಮಿಕರ ಮಾತುಗಳ ಬಗ್ಗೆ ತಿಳಿಯುವಾಗ ಕರುಳು ಚುರ್ ಎನ್ನದೇ ಇರುವುದಿಲ್ಲ. ಅವರಾರಿಗೂ ಬೇರೆಲ್ಲೋ ಹೋಗಿ ದುಡಿಯುವ ಮನಸ್ಸಿಲ್ಲ. ಆದರೆ ಅನಿವಾರ್ಯತೆ ಅವರನ್ನು ಮನೆ ಮಾರು ಬಿಟ್ಟು ಈ ದೇಶದಿಂದ ಬೇರೆಲ್ಲಿಗಾದರೂ ಹೋದರೆ ಸಾಕಪ್ಪಾ ಎಂದುಕೊಳ್ಳುವಂತೆ ಮಾಡಿದೆ.
ಇದೇ ಅಲ್ಲವೆ ಅವರ ಪಾಲಿಗೆ ಈ ಮಹಾನ್ ವಿಶ್ವಗುರುವಿನ ದೇಶ ಕೊಟ್ಟಿರುವ ದೊಡ್ಡ ಉಡುಗೊರೆ? ಆ ಬಡವರು, ಅಸಹಾಯಕರ ಕಷ್ಟಕ್ಕೆ ಒದಗದೆ, ಮೂರನೇ ಆರ್ಥಕತೆ, ಟ್ರಿಲಿಯನ್ ಡಾಲರ್ ಕಥೆಗಳನ್ನೆಲ್ಲ ಹೇಳುತ್ತ ಇವರೇಕೆ ದೇಶದ ಜನರನ್ನು ಮತ್ತೂ ಮತ್ತೂ ಭ್ರಮೆಯಲ್ಲಿ ಬೀಳಿಸುತ್ತಿದ್ದಾರೆ? ಅಕಸ್ಮಾತ್ ಇಲ್ಲಿ ಕೆಲಸ ಸಿಕ್ಕರೂ ಪುಡಿಗಾಸಿಗಾಗಿ ದುಡಿಯಬೇಕು. ಬೆಲೆಯೇರಿಕೆಯ ಈ ದಿನಗಳಲ್ಲಿ ಅದಾವುದಕ್ಕೂ ಆಗುವುದಿಲ್ಲ.
ಹಾಗಾಗಿ, ಪ್ರಾಣಕ್ಕೆ ರಿಸ್ಕ್ ಇದ್ದರೂ, ಇಲ್ಲಿನ ಬಡತನಕ್ಕಿಂತಲೂ ಅದೇನೂ ದೊಡ್ಡ ರಿಸ್ಕ್ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರೆಲ್ಲ ಈ ದೇಶದಲ್ಲಿನ ಇವತ್ತಿನ ಸ್ಥಿತಿಯಿಂದ ರೋಸಿಹೋಗಿದ್ದಾರೆ.
ತನ್ನ ದೇಶದ ಜನರಿಗೆ ಅವರು ಬದುಕಲು ಆಗುವಂಥ ಒಂದು ಉದ್ಯೋಗವನ್ನೂ ಕೊಡಲಾರದ ಮೋದಿ ಸರ್ಕಾರ, ಈಗ ಅವರನ್ನೆಲ್ಲ ಯುದ್ಧದಿಂದ ಆವರಿಸಿರುವ ಇಸ್ರೇಲ್ ಗೆ ತಳ್ಳುತ್ತಿದೆ ಎಂಬುದೇ ತೀರಾ ನಾಚಿಕೆಗೇಡಿನ ಸಂಗತಿಯಾಗಿದೆ. ಮತ್ತು ಸರ್ಕಾರ ಅಲ್ಲಿಗೆ ಹೋಗುತ್ತಿರುವ ಕಾರ್ಮಿಕರ ಭದ್ರತೆ ವಿಚಾರದಲ್ಲಿ ಏನೇನೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ಅದರ ಹೊಣೆಗೇಡಿತನದ ಪರಮಾವಧಿಯಾಗಿದೆ.
ಅಲ್ಲಿಗೆ, ಕಳಿಸಿಕೊಡಲಾಗುವ ಕಾರ್ಮಿಕರಿಗೆ ಯಾವುದೇ ಸುರಕ್ಷತೆಯ ಖಾತರಿಯಿಲ್ಲ ಮತ್ತು ಉದ್ಯೋಗ ಖಾತರಿಯೂ ಇಲ್ಲ. ಉತ್ತರ ಪ್ರದೇಶ. ಹರ್ಯಾಣಗಳಿಂದ ಕಾರ್ಮಿಕರನ್ನು ಹೀಗೆ ಯಾವುದೇ ಸುರಕ್ಷತಾ ಕ್ರಮಗಳ ಪಾಲನೆಯೂ ಇಲ್ಲದೆ ಕಳಿಸಿಕೊಡಲು ಮುಂದಾಗಿರುವುದಕ್ಕೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ತಕರಾರು ತೆಗೆದಿದೆ.
ಅಲ್ಲಿಗೆ ಕಳಿಸಲಾಗುವ ಈ ಕಾರ್ಮಿಕರಿಗೆ ಆಕರ್ಷಕ ಸಂಬಳದ ಆಮಿಷವಿದೆ ಅಷ್ಟೆ. ಆದರೆ ಸುರಕ್ಷತೆಯ ಭರವಸೆಯೇ ಇಲ್ಲ. ಯಾವುದೇ ವಿಮೆ, ವೈದ್ಯಕೀಯ ವಿಮೆಯಂಥ ಸೌಲಭ್ಯವೂ ಅವರಿಗಿಲ್ಲ, ಉದ್ಯೋಗದ ಖಾತ್ರಿಯೂ ಇಲ್ಲ. ಹೀಗಿರುವಾಗ ಅಲ್ಲಿಗೆ ಹೋದ ಮೇಲಿನ ಅವರ ಸ್ಥಿತಿ ಏನಿರುತ್ತದೆಯೊ ಯಾರಿಗೆ ಗೊತ್ತು?
ಇಂಥ ರಿಸ್ಕ್ ಬಗ್ಗೆ ಗೊತ್ತಿದ್ದೂ ಅಲ್ಲಿಗೆ ಹೋಗಲು ಕಾರ್ಮಿಕರು ಹಿಂದೆ ಮುಂದೆ ನೋಡುತ್ತಿಲ್ಲವೆಂಬುದು, ಭಾರತದಲ್ಲಿನ ಸ್ಥಿತಿ ಅತಿ ಶೋಚನೀಯವಾಗಿದೆ ಎಂಬುದನ್ನೇ ಸಾಬೀತು ಮಾಡುತ್ತಿದೆ. ಸರ್ಕಾರ ಮಾತ್ರ ಸುಳ್ಳು ಕಥೆಗಳನ್ನು ಹೇಳಿಕೊಂಡೇ, ನಾಟಕವಾಡಿಕೊಂಡೇ ಬರುತ್ತಿದೆ.
2017-2018ರಲ್ಲಿ ಶೇ.6ರಷ್ಟಿದ್ದ ನಿರುದ್ಯೋಗ 2021-2022ರಲ್ಲಿ ಶೇ.4ಕ್ಕೆ ಇಳಿದಿದೆ ಎಂದು ಸರ್ಕಾರಿ ಡಾಟಾಗಳು ತೋರಿಸುತ್ತವೆ. ಆದರೆ, ವಾಸ್ತವ ಏನೆಂದರೆ, ಈ ಸರ್ಕಾರಿ ಅಂಕಿ ಅಂಶಗಳಲ್ಲಿ ಸಂಬಳವಿಲ್ಲದ ಕೆಲಸಗಳನ್ನೂ ಉದ್ಯೋಗಗಳು ಎಂದು ಸೇರಿಸಲಾಗುತ್ತಿದೆ ಎಂಬುದನ್ನು ಅರ್ಥಶಾಸ್ತ್ರಜ್ಞರೇ ಹೇಳುತ್ತಿದ್ದಾರೆ.
ಹೀಗೆ ದೇಶ ಸುಭಿಕ್ಷವಾಗಿದೆ ಎಂದು ಸುಳ್ಳು ಸುಳ್ಳೇ ಬಿಂಬಿಸಲಾಗುತ್ತಿದೆ. ಸಂಘಟಿತ ಉದ್ಯೋಗಗಳು ಅಷ್ಟೇನೂ ಬೆಳೆಯುತ್ತಿಲ್ಲ ಮತ್ತು ಅದೇ ಸಮಯದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಯುವಜನರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಈ ಯಾವ ವಾಸ್ತವವನ್ನೂ ಸರ್ಕಾರ ಗಮನಿಸದೆ, ಬರೀ ತನ್ನ ವಿಫಲತೆಗಳನ್ನು ಅಡಗಿಸುವುದರಲ್ಲಿಯೇ ತೊಡಗಿದೆ.
ಸಂಶೋಧನಾ ವರದಿಗಳ ಪ್ರಕಾರ, 1980ರ ದಶಕದ ಬಳಿಕ ನಿಯಮಿತ ವೇತನ ಅಥವಾ ಸಂಬಳದ ಕೆಲಸವಿರುವ ಕಾರ್ಮಿಕರ ಪಾಲು 2004ರಲ್ಲಿ ಹೆಚ್ಚಾಗಲು ಶುರುವಾಯಿತು. ಆದರೆ, 2019ರಿಂದ ಮತ್ತೆ ಕುಸಿಯತೊಡಗಿದೆ. ನಿಯಮಿತ ವೇತನದ ಉದ್ಯೋಗಗಳ ವೇಗ ಕಡಿಮೆಯಾಗಿದೆ.
ಕೋಟಿ ಕೋಟಿ ಉದ್ಯೋಗಗಳು ಬರೀ ಭರವಸೆಯಾಗಿಯೇ ಉಳಿದಿವೆ. ಪಕೋಡ ಮಾರುವುದೂ ಉದ್ಯೋಗವೇ ಅಲ್ಲವೆ ಎಂದು, ಉದ್ಯೋಗ ಕೇಳುವ ಯುವಕರಿಗೆ ಪ್ರಧಾನಿಯಿಂದ ಮರುಪ್ರಶ್ನೆ ಬರುತ್ತದೆ. ಇಂಥವರು ಮೂರನೇ ಆರ್ಥಿಕತೆಯೆಡೆಗೆ ದೇಶವನ್ನು ಕೊಂಡೊಯ್ಯಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಮತ್ತು ಇಲ್ಲಿ ಕೆಲಸವಿಲ್ಲದಕ್ಕೆ ಕಾರ್ಮಿಕರನ್ನು ಇಸ್ರೇಲ್ಗೆ ಕಳಿಸಲಾಗುತ್ತಿದೆ.







