ಟಿ-20 ವಿಶ್ವಕಪ್ | ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಮನವಿ ಮಾಡಲಿರುವ ಬಾಂಗ್ಲಾದೇಶ

ಮುಸ್ತಫಿಝುರ್ ರೆಹ್ಮಾನ್ (Photo: PTI)
ಹೊಸದಿಲ್ಲಿ: 2026ರ ಟಿ-20 ವಿಶ್ವಕಪ್ ನ ಬಾಂಗ್ಲಾದೇಶದ ಲೀಗ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮನವಿ ಮಾಡಲಿದೆ ಎಂದು ವರದಿಯಾಗಿದೆ.
ಟಿ-20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶವು ಭಾರತದಲ್ಲಿ ನಾಲ್ಕು ಲೀಗ್ ಪಂದ್ಯಗಳನ್ನು ಆಡಬೇಕಿದೆ. ಅದರಲ್ಲಿ ಮೂರು ಪಂದ್ಯಗಳು ಕೋಲ್ಕತ್ತಾ ಹಾಗೂ ಒಂದು ಪಂದ್ಯ ಮುಂಬೈನಲ್ಲಿ ನಡೆಯಬೇಕಿದೆ. ಆದರೆ, ಇದೀಗ ಈ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC)ಗೆ ಮನವಿ ಮಾಡಲು BCB ಗೆ ಎಂದು ಬಾಂಗ್ಲಾದೇಶದ ಕ್ರೀಡಾ ಸಚಿವ ಆಸಿಫ್ ನಝ್ರುಲ್ ಸೂಚಿಸಿದ್ದಾರೆ.
2026ರ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ತಂಡವು ಇತರ ಫ್ರಾಂಚೈಸಿಗಳ ತೀವ್ರ ಪೈಪೋಟಿಯ ನಡುವೆಯೂ 2 ಕೋಟಿ ರೂ. ಮೂಲಬೆಲೆ ಹೊಂದಿದ್ದ ಬಾಂಗ್ಲಾದೇಶದ ಮುಸ್ತಫಿಝುರ್ ರೆಹ್ಮಾನ್ ಅವರನ್ನು 9.20 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಮುಸ್ತಫಿಝುರ್ ಅವರನ್ನು ಬಿಸಿಸಿಐ ಸೂಚನೆಯ ಮೇರೆಗೆ ಕೆಕೆಆರ್ ತಂಡದಿಂದ ಕೈಬಿಡಲಾಗಿದೆ.
ಈ ನಡುವೆ, “ಬಾಂಗ್ಲಾದೇಶದಲ್ಲಿ 2026ರ ಐಪಿಎಲ್ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಮನವಿ ಮಾಡಲಾಗಿದ್ದು, ಬಾಂಗ್ಲಾದೇಶದ ಕ್ರಿಕೆಟ್, ಕ್ರಿಕೆಟಿಗರು ಅಥವಾ ಬಾಂಗ್ಲಾದೇಶಕ್ಕಾಗುವ ಅವಮಾನವನ್ನು ನಾವು ಸಹಿಸುವುದಿಲ್ಲ” ಎಂದು ಆಸಿಫ್ ನಝ್ರುಲ್ ಹೇಳಿದ್ದಾರೆ ಎಂದು ವರದಿಯಾಗಿದೆ.







