BCCI ಪ್ರಶಸ್ತಿ ಪ್ರದಾನ ಸಮಾರಂಭ | ರಾಹುಲ್ ದ್ರಾವಿಡ್, ಬಿನ್ನಿ, ಮಿಥಾಲಿ ರಾಜ್ ಗೆ ಜೀವಮಾನ ಸಾಧನೆ ಗೌರವ

PC : INSTAGRAM
ಹೊಸದಿಲ್ಲಿ: ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಹಾಗೂ ಮಿಥಾಲಿ ರಾಜ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರವಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಮೂವರು ತಮ್ಮ ದೀರ್ಘಕಾಲದ ಸೇವೆ ಮತ್ತು ಸಾಧನೆಗಾಗಿ ಸನ್ಮಾನಿತರಾದರು.
ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಎರಡರಲ್ಲೂ 10,000 ಕ್ಕೂ ಹೆಚ್ಚು ರನ್ ಗಳಿಸಿರುವ ದ್ರಾವಿಡ್, ಭಾರತದ ಅತ್ಯಂತ ಪ್ರಮುಖ ಬ್ಯಾಟರ್ ಗಳಲ್ಲಿ ಒಬ್ಬರು. ಟೆಸ್ಟ್ ನಲ್ಲಿ 13,288 ಮತ್ತು ಏಕದಿನದಲ್ಲಿ 10,899 ರನ್ಗಳನ್ನು ಗಳಿಸಿರುವ ಅವರು, ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ. 1996ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪ್ರವೇಶಿಸಿದ ಅವರು 2012ರಲ್ಲಿ ನಿವೃತ್ತರಾದರು.
ನಿವೃತ್ತಿಯ ನಂತರ ದ್ರಾವಿಡ್ ತರಬೇತುದಾರರಾಗಿ ಸೇವೆ ಸಲ್ಲಿಸಿ, ಭಾರತ ‘ಎ’ ಮತ್ತು ಅಂಡರ್–19 ತಂಡಗಳನ್ನು ಮುನ್ನಡೆಸಿದರು. 2018ರಲ್ಲಿ ಅಂಡರ್–19 ವಿಶ್ವಕಪ್ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಬಳಿಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದು, 2021ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು. 2024ರ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಅವರ ಅವಧಿ ಅಂತ್ಯಗೊಂಡಿತು.
1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ, ಆ ಟೂರ್ನಿಯಲ್ಲಿ 18 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. 1985ರ ವಿಶ್ವ ಚಾಂಪಿಯನ್ ಶಿಪ್ ಆಫ್ ಕ್ರಿಕೆಟ್ ನಲ್ಲೂ ಅವರು ಗಮನಾರ್ಹ ಪ್ರದರ್ಶನ ನೀಡಿದ್ದರು. ನಂತರ ಅಂಡರ್–19 ತಂಡದ ಕೋಚ್ ಹಾಗೂ ರಾಷ್ಟ್ರೀಯ ತಂಡದ ಆಯ್ಕೆದಾರರಾಗಿ ಸೇವೆ ಸಲ್ಲಿಸಿದ ಅವರು, 2022ರಲ್ಲಿ ಬಿಸಿಸಿಐ ಅಧ್ಯಕ್ಷರಾದರು.
ಮಿಥಾಲಿ ರಾಜ್ ಭಾರತೀಯ ಮಹಿಳಾ ಕ್ರಿಕೆಟ್ ನ ಪ್ರಮುಖ ಮುಖವಾಗಿದ್ದು, ದೀರ್ಘಕಾಲ ತಂಡವನ್ನು ಮುನ್ನಡೆಸಿ ಅನೇಕ ಸಾಧನೆಗಳನ್ನು ನಿರ್ಮಿಸಿದ್ದಾರೆ. ಮಹಿಳಾ ಕ್ರಿಕೆಟ್ಗೆ ಜಾಗತಿಕ ಮಟ್ಟದಲ್ಲಿ ಗುರುತು ತಂದುಕೊಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.
ಭಾರತೀಯ ಕ್ರಿಕೆಟ್ಗೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಪ್ರದಾನಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.






