ಮೆಸ್ಸಿ ಭಾರತ ಭೇಟಿ: ಸಾಲ್ಟ್ಲೇಕ್ ಸ್ಟೇಡಿಯಂ ಅಸ್ತವ್ಯಸ್ತತೆಯನ್ನು ಟೀಕಿಸಿದ ಭುಟಿಯ

ಲಿಯೊನೆಲ್ ಮೆಸ್ಸಿ | Photo Credit : PTI
ಹೊಸದಿಲ್ಲಿ: ಇತ್ತೀಚೆಗೆ ಕೋಲ್ಕತಾದ ಸಾಲ್ಟ್ಲೇಕ್ ಸ್ಟೇಡಿಯಂನಲ್ಲಿ ಲಿಯೊನೆಲ್ ಮೆಸ್ಸಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ತಲೆದೋರಿದ ಅಸ್ತವ್ಯಸ್ತತೆಯನ್ನು ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯ ರವಿವಾರ ಟೀಕಿಸಿದ್ದಾರೆ.
ಆ ಘಟನೆ ದುರದೃಷ್ಟಕರ ಎಂದು ಬಣ್ಣಿಸಿದ ಅವರು, ಕ್ರೀಡಾ ಕಾರ್ಯಕ್ರಮಗಳಿಗೆ ಮಹತ್ವ ನೀಡಬೇಕು ಹಾಗೂ ರಾಜಕೀಯ ಕಾರಣಗಳು ಮತ್ತು ಔಪಚಾರಿಕತೆಗಳಿಗಾಗಿ ಅನಗತ್ಯ ವಿಳಂಬ ಮಾಡಬಾರದು ಎಂದರು.
ಅಭಿಮಾನಿಗಳು ಕ್ರೀಡೆಯನ್ನು ಆನಂದಿಸಲು ಮತ್ತು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸ್ಟೇಡಿಯಂಗಳಿಗೆ ಬರುತ್ತಾರೆಯೇ ಹೊರತು, ಸುದೀರ್ಘ ಭಾಷಣಗಳನ್ನು ಕೇಳುತ್ತಾ ಅಥವಾ ವಿಐಪಿಗಳ ಆಗಮನಕ್ಕಾಗಿ ಕಾಯುತ್ತಾ ಕೂರಲು ಅಲ್ಲ ಎಂದು ಅವರು ನುಡಿದರು.
‘‘ಕ್ರೀಡಾ ಕಾರ್ಯಕ್ರಮಗಳು ಇರುವಾಗ, ಕ್ರೀಡೆಗೆ ಆದ್ಯತೆ ಸಿಗಬೇಕು ಎನ್ನುವುದು ನನ್ನ ಅಭಿಪ್ರಾಯ’’ ಎಂದು ಭುಟಿಯ ಹೇಳಿದರು.
‘‘ಈ ಸಮಸ್ಯೆ ಭಾರತದಾದ್ಯಂತ ಕಂಡು ಬರುತ್ತಿದೆ. ಸಂಘಟಕರು ರಾಜಕಾರಣಿಗಳು ಮತ್ತು ಮುಖ್ಯ ಅತಿಥಿಗಳಿಗಾಗಿ ಕಾಯುವುದರಿಂದ ಹೆಚ್ಚಿನ ಕ್ರೀಡಾ ಪಂದ್ಯಗಳು ವಿಳಂಬಗೊಳ್ಳುತ್ತವೆ. ಇಂತಹ ಪ್ರವೃತ್ತಿಯು ಅಭಿಮಾನಿಗಳು ಮತ್ತು ಆಟಗಾರರ ತಾಳ್ಮೆಗೆಡಿಸುತ್ತ’’ ಎಂದು ಅವರು ನುಡಿದರು.





