ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ತಯಾರಿ ಆರಂಭ

PC : X
ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ತನ್ನ ಆರಂಭಿಕ ಪಂದ್ಯಕ್ಕಿಂತ ಮೊದಲು ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ದುಬೈನ ಐಸಿಸಿ ಅಕಾಡೆಮಿಯ ಟ್ರೈನಿಂಗ್ ಮೈದಾನದಲ್ಲಿ ರವಿವಾರ ಅಭ್ಯಾಸ ಆರಂಭಿಸಿದೆ.
ನೀಲಿ ಬಸ್ನಲ್ಲಿ ಆಗಮಿಸಿದ ಟೀಮ್ ಸೂಪರ್ಸ್ಟಾರ್ಗಳು ಐಸಿಸಿ ಅಕಾಡೆಮಿಗೆ ತೆರಳಿ ತಮಗಾಗಿ ತಯಾರಾಗಿದ್ದ ಮೈದಾನದಲ್ಲಿ ಅಭ್ಯಾಸ ನಡೆಸಿದರು.
ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವಿನ ಕಿರು ಚರ್ಚೆಯ ಮೂಲಕ ಅಭ್ಯಾಸ ಅವಧಿಯು ಆರಂಭವಾಯಿತು. ಚರ್ಚೆಯಲ್ಲಿ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಸೇರಿಕೊಂಡರು.
ಎಲ್ಲರ ಕಣ್ಣುಗಳು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ನೆಟ್ಟಿದ್ದವು. ಕೊಹ್ಲಿ ಸುಮಾರು 30 ನಿಮಿಷಗಳ ಕಾಲ ತಮ್ಮ ಕಿಟ್ಬ್ಯಾಗ್ ಅನ್ನು ಎಚ್ಚರಿಕೆಯಿಂದ ಜೋಡಿಸಿಕೊಂಡರು. ಅನೇಕ ಬ್ಯಾಟ್ ಗಳನ್ನು ಪರಿಶೀಲಿಸಿದ ನಂತರ ತಮ್ಮ ನೆಚ್ಚಿನ ಕೆಂಪು ಕಿಟ್ ಬ್ಯಾಗ್ ಅನ್ನು ಎಳೆದುಕೊಂಡು ಹೋದರು.
1998ರಲ್ಲಿ ಪಂದ್ಯಾವಳಿ ಆರಂಭವಾದ ನಂತರ ಭಾರತ ತಂಡವು ಎರಡು ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿತ್ತು. 2002ರಲ್ಲಿ ಸೌರವ್ ಗಂಗುಲಿ ನೇತೃತ್ವದ ಮೊದಲ ಬಾರಿ ಪ್ರಶಸ್ತಿ ಜಯಿಸಿತ್ತು. ಕೊಲಂಬೊದಲ್ಲಿ ಫೈನಲ್ ಪಂದ್ಯವು ಮಳೆಗಾಹುತಿಯಾದ ಹಿನ್ನೆಲೆಯಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡವನ್ನು ‘ಜಂಟಿ ವಿಜೇತರು’ ಎಂದು ಘೋಷಿಸಲಾಗಿತ್ತು.
2013ರಲ್ಲಿ ಭಾರತ ತಂಡ 2ನೇ ಬಾರಿ ಪ್ರಶಸ್ತಿ ಜಯಿಸಿತ್ತು. ಎಂ.ಎಸ್. ಧೋನಿ ನಾಯಕತ್ವದ ಭಾರತ ತಂಡವು ಮಳೆ ಬಾಧಿತ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.
ಭಾರತ ತಂಡವು 2017ರಲ್ಲಿ ಫೈನಲ್ಗೆ ಲಗ್ಗೆ ಇಟ್ಟು ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಸನಿಹ ತಲುಪಿತ್ತು. ಆದರೆ ಪಾಕಿಸ್ತಾನದ ಎದುರು ಸೋಲುಂಡಿತ್ತು.







