ಇಂಗ್ಲೆಂಡ್, ಐರ್ಲ್ಯಾಂಡ್ ವಿರುದ್ಧ T20 ಸರಣಿಯಲ್ಲಿ ಸೋಲು; ಪರಿಶೀಲನಾ ಸಭೆ ನಡೆಸಲು BCCI ನಿರ್ಧಾರ

Photo Credit : BCCI
ಹೊಸದಿಲ್ಲಿ, ಜು.11: ಐರ್ಲ್ಯಾಂಡ್ ಹಾಗೂ ಇಂಗ್ಲೆಂಡ್ ತಂಡಗಳ ವಿರುದ್ಧ ಬೆನ್ನುಬೆನ್ನಿಗೆ ಟಿ-20 ಸರಣಿಯಲ್ಲಿ ಸೋತ ಹಿನ್ನೆಲೆಯಲ್ಲಿ ಬಿಸಿಸಿಐ, ಈಗ ನಡೆಯುತ್ತಿರುವ ಇಂಗ್ಲೆಂಡ್ ಸರಣಿಯ ನಂತರ ಭಾರತೀಯ ಕ್ರಿಕೆಟ್ ತಂಡದ ಇತ್ತೀಚಿನ ಪ್ರದರ್ಶನದ ಕುರಿತು ಪರಿಶೀಲನಾ ಸಭೆ ನಡೆಸಲು ನಿರ್ಧರಿಸಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತದ ಯುವ ಟಿ-20 ತಂಡವು ಐರ್ಲ್ಯಾಂಡ್ ವಿರುದ್ಧ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ ಇಂಗ್ಲೆಂಡ್ ನೆಲದಲ್ಲೂ ಮತ್ತೊಂದು ಟಿ-20 ಸರಣಿಯನ್ನು ಸೋತಿದೆ. ಹೀಗಾಗಿ ಬಿಸಿಸಿಐ ತಂಡದ ಇತ್ತೀಚಿನ ಪ್ರದರ್ಶನದ ಕುರಿತು ಚರ್ಚಿಸಲು ಮುಂದಾಗಿದೆ.
‘‘ಭಾರತ ಕ್ರಿಕೆಟ್ ತಂಡವು ಕೆಟ್ಟ ಹಂತದಲ್ಲಿದೆ. ಪ್ರಸಕ್ತ ಇಂಗ್ಲೆಂಡ್ ಪ್ರವಾಸ ಮುಗಿದ ನಂತರ ಎಲ್ಲಿ ತಪ್ಪಾಗಿದೆ ಎಂಬ ಕುರಿತಂತೆ ಪರಿಶೀಲನಾ ಸಭೆಯಲ್ಲಿ ಖಂಡಿತವಾಗಿಯೂ ಚರ್ಚೆ ನಡೆಸಲಿದ್ದೇವೆ’’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಹೇಳಿದ್ದಾರೆ.
ಪರಿಶೀಲನಾ ಸಭೆಯಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಭಾಗವಹಿಸುವ ನಿರೀಕ್ಷೆ ಇದೆ. ಭಾರತ ತಂಡ ಟಿ-20 ಕ್ರಿಕೆಟ್ನಲ್ಲಿ ಪರದಾಡುತ್ತಿರುವುದಕ್ಕೆ ಕಾರಣಗಳ ಕುರಿತು ಅವಲೋಕನ ಹಾಗೂ ಮುಂದಿನ ವರ್ಷದ ಟಿ-20 ವಿಶ್ವಕಪ್ ಕುರಿತು ಚರ್ಚೆ ನಡೆಸಲಾಗುತ್ತದೆ.






