ಐಪಿಎಲ್ ಮೇಲೆ ಆಪರೇಶನ್ ಸಿಂಧೂರ ಪರಿಣಾಮ | ಏರ್ಪೋರ್ಟ್ ಬಂದ್, ಧರ್ಮಶಾಲಾಕ್ಕೆ ಮುಂಬೈ ತಂಡದ ಪ್ರಯಾಣ ಯೋಜನೆಗೆ ಹೊಡೆತ

PC : PTI
ಹೊಸದಿಲ್ಲಿ: ಭಾರತವು ಬುಧವಾರ ಮುಂಜಾನೆ ಆಪರೇಶನ್ ಸಿಂಧೂರ್ ನ ಭಾಗವಾಗಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ್ದರಿಂದ ಪಾಕಿಸ್ತಾನದ ಗಡಿಯಲ್ಲಿರುವ ಜಮ್ಮು, ಶ್ರೀನಗರ, ಲೇಹ್, ಜೋಧ್ಪುರ, ಅಮೃತಸರ, ಭುಜ್, ಜಾಮ್ ನಗರ, ಚಂಡಿಗಡ ಹಾಗೂ ರಾಜ್ ಕೋಟ್ ಸಹಿತ ಹಲವಾರು ವಿಮಾನ ನಿಲ್ದಾಣಗಳನ್ನು ಮೇ 10ರಂದು ಬೆಳಗ್ಗೆ 5:30ರ ತನಕ ಮುಚ್ಚಲ್ಪಡಲಿವೆ.
ಪ್ರಸಕ್ತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ಈಗಾಗಲೇ ಸಲಹೆಗಳನ್ನು ನೀಡಿದ್ದು, ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.
ಇದು ಕೆಲವು ಐಪಿಎಲ್ ತಂಡದ ಪ್ರಯಾಣದ ಯೋಜನೆಯ ಮೇಲೆ ಪರಿಣಾಮಬೀರಿದೆ. ಕೆಲವು ತಂಡಗಳು ಧರ್ಮಶಾಲಾದಲ್ಲಿದ್ದರೆ, ಇನ್ನು ಕೆಲವು ತಂಡಗಳು ಮುಂದಿನ ವಾರ ಧರ್ಮಶಾಲಾಕ್ಕೆ ತಲುಪುವ ಯೋಜನೆ ಹೊಂದಿದ್ದವು.
ಮೇ 8ರ ಪಂದ್ಯಕ್ಕಾಗಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೆ ಧರ್ಮಶಾಲಾದಲ್ಲಿವೆ. ಮುಂಬೈ ಇಂಡಿಯನ್ಸ್ ತಂಡವು ಈ ವಾರಾಂತ್ಯದಲ್ಲಿ ತಲುಪುವ ಯೋಜನೆ ಹಾಕಿಕೊಂಡಿದೆ.
ಸರಕಾರದ ನಿರ್ದೇಶನವಿಲ್ಲದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ವೇಳಾಪಟ್ಟಿಯಂತೆಯೇ ನಡೆಯಲಿದೆ.
ಧರ್ಮಶಾಲಾ ವಿಮಾನ ನಿಲ್ದಾಣ ಹಾಗೂ ನೆರೆಯ ಅಮೃತಸರ ಹಾಗೂ ಚಂಡಿಗಡ ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿರುವುದರಿಂದ ತಂಡಗಳು ಹಾಗೂ ಬಿಸಿಸಿಐ, ಪ್ರಯಾಣ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಬಹುದು.
‘‘ನಾವು ಈಗ ಕಾದುನೋಡಬೇಕಾಗಿದೆ. ಚಂಡಿಗಡ ವಿಮಾನ ನಿಲ್ದಾಣ ಮುಚ್ಚಲ್ಪಟ್ಟಿರುವ ಕಾರಣ ಬೇರೆ ಆಯ್ಕೆಯೇ ಇಲ್ಲ. ಎರಡು ತಂಡಗಳು ಈಗಾಗಲೇ ಧರ್ಮಶಾಲಾಕ್ಕೆ ಆಗಮಿಸಿವೆ. ಮೇ 11ರ ಪಂದ್ಯಕ್ಕಾಗಿ ಮುಂಬೈ ಇಂಡಿಯನ್ಸ್ ತಂಡವು ಈ ವಾರ ಧರ್ಮಶಾಲಾಕ್ಕೆ ಆಗಮಿಸಬೇಕಾಗಿತ್ತು. ನಮಗೆ ಹತ್ತಿರದ ಆಯ್ಕೆಯೆಂದರೆ ದಿಲ್ಲಿ ವಿಮಾನ ನಿಲ್ದಾಣ. ತಂಡಗಳು ಅಲ್ಲಿಗೆ ತಲುಪಲು ರಸ್ತೆ ಮಾರ್ಗದಲ್ಲಿ ದೀರ್ಘ ಪ್ರಯಾಣ ಮಾಡಬೇಕಾಗಿದೆ. ನಾವು ಸರಕಾರದ ಸಲಹೆಗಳನ್ನು ಅನುಸರಿಸುತ್ತಿದ್ದೇವೆ. ಅಗತ್ಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತೇವೆ’’ಎಂದು ಬಿಸಿಸಿಐಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈ ತನಕ ಬಿಸಿಸಿಐಯಿಂದ ಯಾವುದೇ ಸೂಚನೆಯನ್ನು ಸ್ವೀಕರಿಸಿಲ್ಲ. ಮುಂಬಯಿ ತಂಡ ತನ್ನ ಪ್ರಯಾಣ ಯೋಜನೆ ಬದಲಾಯಿಸಬಹುದು. ಆ ತಂಡವು ತನ್ನ ನಿಗದಿತ ವಿಮಾನವನ್ನು ರದ್ದುಗೊಳಿಸಿದೆಯೇ ಎಂದು ಈ ಹಂತದಲ್ಲಿ ದೃಢಪಡಿಸಲು ಸಾಧ್ಯವಿಲ್ಲ, ಆದರೆ ವಿಮಾನ ನಿಲ್ದಾಣದ ಪರಿಸ್ಥಿತಿ ಬದಲಾಗದಿದ್ದರೆ ವಿಮಾನ ಯಾನ ರದ್ದುಪಡಿಸುವ ಸಾಧ್ಯತೆಯಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ಮಂಗಳವಾರ ರಾತ್ರಿ ತನ್ನ ಪಂದ್ಯವನ್ನು ಆಡಿರುವ ಹಾರ್ದಿಕ್ ಪಾಂಡ್ಯ ಬಳಗವು ಸದ್ಯ ಮುಂಬೈನಲ್ಲಿದೆ.
ಧರ್ಮಶಾಲಾದ ಎಚ್ಪಿಸಿಎ ಕ್ರೀಡಾಂಗಣವು ಈ ವಾರ ಎರಡು ಪಂದ್ಯಗಳ ಆತಿಥ್ಯವಹಿಸಬೇಕಿದೆ. ಸದ್ಯದ ಪರಿಸ್ಥಿತಿಯು ಭಾರತೀಯ ಕ್ರಿಕೆಟ್ ಮಂಡಳಿಯು ಪರ್ಯಾಯ ಆಯ್ಕೆಯತ್ತ ಚಿತ್ತಹರಿಸಲು ಕಾರಣವಾಗಬಹುದು.