ಹೈಡ್ರೇಶನ್ ಅಥವಾ ಜಾಹೀರಾತು ಬ್ರೇಕ್? ಫಿಫಾ ಹೊಸ ನಿಯಮದಿಂದ ಯಾರಿಗೆ ಲಾಭ?

Photo Credit: x/@FIFAWorldCup
ಫಿಫಾದ ಹೈಡ್ರೇಶನ್ ಬ್ರೇಕ್ ಬಗ್ಗೆ ಆಟಗಾರರು ಮತ್ತು ತರಬೇತುದಾರರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಈ ಬ್ರೇಕ್ ಮೆಚ್ಚಿಕೊಂಡರೆ, ಇನ್ನು ಕೆಲವರು ವಿರೋಧಿಸುತ್ತಿದ್ದಾರೆ.
2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಅಭಿಮಾನಿಗಳಿಗೆ ಹಬ್ಬವನ್ನೇ ನೀಡಿದೆ. ಅದ್ಭುತ ಗೋಲ್ಗಳು, ಕಾರ್ಯಯೋಜಿತ ಮಾಸ್ಟರ್ಕ್ಲಾಸ್ಗಳು, ಬ್ರೇಕ್ಔಟ್ ಸ್ಟಾರ್ಗಳು ಮತ್ತು ನಾಟಕೀಯ ಕ್ಷಣಗಳು ದೊಡ್ಡ ವೇದಿಕೆಯನ್ನು ಬೆಳಗಿಸಿವೆ. ಜೊತೆಗೆ ನೀರು ಕುಡಿಯಲು ಸಮಯ!
ಸದ್ಯ ವಿಶ್ವಕಪ್ ಸುತ್ತ ಆಗುತ್ತಿರುವ ದೊಡ್ಡ ಚರ್ಚೆಯ ವಿಷಯ ಇದೇ! ಕೂಲಿಂಗ್ ಅಥವಾ ಹೈಡ್ರೇಶನ್ ಬ್ರೇಕ್ಗಳು ಎಂದು ಕರೆಯಲಾಗುವ ಪ್ರತಿ ಅರ್ಧದಲ್ಲಿ ಕಡ್ಡಾಯವಾಗಿ ಮೂರು ನಿಮಿಷಗಳ ನಿಲುಗಡೆ ಅಭಿಮಾನಿಗಳು, ಆಟಗಾರರು, ತರಬೇತುದಾರರು ಮತ್ತು ಚಿಂತಕರ ನಡುವೆ ಭಿನ್ನ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಫಿಫಾ ಈ ಪಂದ್ಯಾವಳಿಗಾಗಿ ನಿಯಮವನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಪಂದ್ಯದ ಅಧಿಕಾರಿಗಳು ಪ್ರತಿ ಅರ್ಧದ 22ನೇ ನಿಮಿಷದಲ್ಲಿ ಹೈಡ್ರೇಶನ್ ಬ್ರೇಕ್ಗಾಗಿ ಆಟ ನಿಲ್ಲಿಸುತ್ತಾರೆ. ಹವಾಮಾನ ಸ್ಥಿತಿ ಅಥವಾ ತಾಪಮಾನದ ವಿಷಯ ಗಣನೆಗೆ ತೆಗೆದುಕೊಳ್ಳದೆ ಪ್ರತಿ ಪಂದ್ಯದಲ್ಲೂ ನಿಲುಗಡೆ ಜಾರಿಗೊಳಿಸಲಾಗುತ್ತದೆ. ಸ್ಪರ್ಧೆಯ ಉದ್ದಕ್ಕೂ ಸ್ಥಿರತೆ ಖಚಿತಪಡಿಸಲು ರೆಫ್ರಿಗಳು ಸಮಯದ ಮೇಲ್ವಿಚಾರಣೆ ಮಾಡುತ್ತಾರೆ.
ಪ್ರಸಾರಕರಿಗೆ ಆದಾಯ ಹೆಚ್ಚಿಸಲು ಜಾಹೀರಾತು ಸೇರಿಸುವ ಮೂಲಕ ಈ ವಿರಾಮ ಬಳಸಿಕೊಳ್ಳಲು ಫಿಫಾ ಅವಕಾಶ ಮಾಡಿಕೊಟ್ಟಿದೆ. ಇದು ಫುಟ್ಬಾಲ್ಗೆ ಮೊದಲನೆಯದು. ಪರಿಣಾಮವಾಗಿ ವೀಕ್ಷಕರು ಇದಕ್ಕಿದ್ದಂತೆ ವಿಶ್ವಕಪ್ ಪಂದ್ಯದ ಮಧ್ಯೆ ಜಾಹೀರಾತುಗಳನ್ನು ವೀಕ್ಷಿಸುತ್ತಿದ್ದಾರೆ. ವಾಸ್ತವದಲ್ಲಿ ಫುಟ್ಬಾಲ್ ಎರಡು ಅವಿಚ್ಛಿನ್ನ ಅರ್ಧಭಾಗಗಳ ಆಟಕ್ಕೆ ಬದಲಾಗಿ ಡ್ರಿಂಕ್ ಬ್ರೇಕ್ ಕಾರಣದಿಂದ ನಾಲ್ಕು ಕಾಲುಭಾಗಗಳ ಕ್ರೀಡೆಯಾಗಿ ಬದಲಾಗಿದೆ. ಹೀಗಾಗಿ ಇದರ ಅಗತ್ಯವಿದೆಯೇ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.
ಫುಟ್ಬಾಲ್ ಆಟ ಕ್ರಿಕೆಟ್ನಂತೆ ವಿರಾಮದ ಆಟವಲ್ಲ. ಆವೇಗದಿಂದ ಕೂಡಿರುತ್ತದೆ. ಒಂದು ಕ್ಷಣದಲ್ಲಿ ತಂಡಗಳು ಮರಳಿ ಬರಲು ಸಾಧ್ಯವಾಗುವುದಿಲ್ಲ. ನಿರಂತರ ಒತ್ತಡ, ಹಿಡಿತ ಮತ್ತು ಆಟಗಾರರು ಕ್ರಮೇಣ ತಮ್ಮ ಲಯ ಕಂಡುಕೊಳ್ಳಬೇಕಾಗುತ್ತದೆ. ಗುರಿ ಬೆನ್ನಟ್ಟುವ ತಂಡ ಹೆಚ್ಚಾಗಿ ತೀವ್ರತೆ ಕಾಯ್ದುಕೊಳ್ಳಬೇಕಾಗುತ್ತದೆ. ಆಯಾಸಗೊಂಡಿರುವ ಎದುರಾಳಿಗಳು ತಪ್ಪು ಮಾಡುವುದನ್ನು ಬಳಸಿಕೊಳ್ಳಬೇಕಾಗುತ್ತದೆ.
ಹೀಗಾಗಿ ಅನೇಕರು ನಿಲುಗಡೆಯಿಂದ ಆಟದ ಸಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಅಭಿಪ್ರಾಯಪಡುತ್ತಿದ್ದಾರೆ. ಸ್ಪರ್ಧೆ ಉತ್ತುಂಗಕ್ಕೇರಲು ಆರಂಭಿಸಿ ಪ್ರಮುಖ ಆಟಗಾರರು ತಮ್ಮ ಗತಿ ಕಂಡುಕೊಂಡಾಗ ರೆಫ್ರಿ ಶಿಳ್ಳೆ ಹೊಡೆಯುತ್ತಾರೆ ಮತ್ತು ಎಲ್ಲರೂ ಟಚ್ಲೈನ್ ಕಡೆಗೆ ತೆರಳುತ್ತಾರೆ.
ಆಟಗಾರರು ಮತ್ತು ತರಬೇತುದಾರರೂ ಬಹಿರಂಗವಾಗಿ ಈ ಡ್ರಿಂಕ್ ಬ್ರೇಕ್ ಅನ್ನು ಪ್ರಶ್ನಿಸಿದ್ದಾರೆ. ನೆದರ್ಲ್ಯಾಂಡ್ ನಾಯಕ ವರ್ಜಿಲ್ ವ್ಯಾನ್ ಡ್ರಿಂಕ್ ಬ್ರೇಕ್ ಹೆಸರಲ್ಲಿ ಜಾಹೀರಾತಿಗೆ ಸಮಯ ಕೊಡುವುದು ನನಗೆ ಇಷ್ಟವಾಗುತ್ತಿಲ್ಲ ಎಂದು ಬಹಿರಂಗವಾಗೇ ಹೇಳಿದ್ದಾರೆ.
“ನ್ಯೂಟ್ರಲ್ ಪ್ರೇಕ್ಷಕರು ಇಂತಹ ಸಂದರ್ಭದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ನಿಜವಾಗಿಯೂ ಸ್ಥಿತಿ ಗಂಭೀರವಾಗಿ ಆಟ ಮುಂದುವರಿದರೆ ಅವರ ಆಸಕ್ತಿಯೂ ಉಳಿದಿರುತ್ತದೆ. ಆದರೆ ಪ್ರತಿ ಆಟವೂ ಭಿನ್ನವಾಗಿರುತ್ತದೆ. ಅಂಗಣ ನಿಜವಾಗಿಯೂ ಆಯಾಸದಾಯಕವಾಗಿದ್ದಾಗ ಬ್ರೇಕ್ ತೆಗೆದುಕೊಳ್ಳುವುದು ಬೇರೆ ವಿಷಯ” ಎಂದು ಅಮೆರಿಕದ ತರಬೇತುದಾರ ಮೌರಿಸಿಯೊ ಪೊಚೆಟ್ಟಿನೊ ಅಭಿಪ್ರಾಯಪಟ್ಟಿದ್ದಾರೆ. “ನನಗೆ ಈ ಬ್ರೇಕ್ ಇಷ್ಟವಾಗಿಲ್ಲ. ಸ್ಥಿತಿ ಗಂಭೀರವಾಗಿದ್ದಾಗ ಹೈಡ್ರೇಶನ್ ಬ್ರೇಕ್ ಸರಿ. ಆದರೆ ಪರಿಸ್ಥಿತಿ ಚೆನ್ನಾಗಿದ್ದಾಗ ಬ್ರೇಕ್ ಅಗತ್ಯವಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತರಬೇತುದಾರರಿಗೆ ಸಲಹೆ ನೀಡುವ ಅವಕಾಶವೆ?
ಆದರೆ ತರಬೇತುದಾರರು ಕೆಲವರು ಈ ಬ್ರೇಕ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಮೊರಕ್ಕೊ ವಿರುದ್ಧ ಬ್ರೆಝಿಲ್ ಸಂಕಷ್ಟದಲ್ಲಿದ್ದಾಗ ಡ್ರಿಂಕ್ ಬ್ರೇಕ್ ಬಂದಿತ್ತು. ಆಗಲೇ ತರಬೇತುದಾರ ಕಾರ್ಲೊ ಅನ್ಸೆಲೋಟಿಗೆ ತಮ್ಮ ಆಟಗಾರರನ್ನು ಒಟ್ಟುಗೂಡಿಸಿ ತಂತ್ರಗಳ ಸೂಚನೆ ನೀಡಲು ಅವಕಾಶ ಸಿಕ್ಕಿತ್ತು. ಆಟ ಪುನರಾರಂಭವಾದಾಗ ಸ್ವಲ್ಪ ಸಮಯದಲ್ಲಿಯೇ ಬ್ರೆಝಿಲ್ನ ವಿನಿಸಿಯಸ್ ಜೂನಿಯರ್ ಗೋಲು ಬಾರಿಸಿದಾಗ ಸಮಬಲ ಸಾಧಿಸಿತು. “ತರಬೇತುದಾರರಿಗೆ ಆಟದ ಮಧ್ಯದ ನಿಲುಗಡೆ ವರದಾನವಾಗಿದೆ. ಪಂದ್ಯವನ್ನು ಮರುಹೊಂದಿಸಲು, ತಂತ್ರ ತಿರುಚಲು ಮತ್ತು ಎದುರಾಳಿಯ ಲಯ ಅಡ್ಡಿಪಡಿಸಲು ಫುಟ್ಬಾಲ್ನಲ್ಲಿ ಅಪರೂಪದ ಅವಕಾಶ ಸಿಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ತರಬೇತುದಾರರು ಗಾಯ ಅಥವಾ ದೀರ್ಘ ಅಡಚಣೆ ಸಂದರ್ಭದಲ್ಲಿ ತಂಡಕ್ಕೆ ಸಂದೇಶ ಕಳುಹಿಸುತ್ತಾರೆ. ಆದರೆ ಇದೀಗ ಡ್ರಿಂಕ್ ಬ್ರೇಕ್ ಅವರಿಗೆ ಹೊಸ ಅವಕಾಶ ನೀಡಿದೆ. ಕುರಾಕೊ ಮೊದಲ ಗೋಲು ಗಳಿಸಿ ಜರ್ಮನಿಯ ವಿರುದ್ಧ ಮೇಲುಗೈ ಸಾಧಿಸಿದ್ದ ಸಮಯದಲ್ಲಿ ಡ್ರಿಂಕ್ ಬ್ರೇಕ್ ಬಂದಿತ್ತು. ಅದಾದ ಮೇಲೆ ಜರ್ಮನಿ 7-1ರಿಂದ ಪಂದ್ಯ ಗೆದ್ದುಕೊಂಡಿತು. ಹೈಡ್ರೇಶನ್ ಬ್ರೇಕ್ ಈ ಕುಸಿತಕ್ಕೆ ಸಂಪೂರ್ಣ ಕಾರಣವಲ್ಲದೆ ಇದ್ದರೂ ಆಟದ ನಿಲುಗಡೆಯು ಜರ್ಮನಿಗೆ ಕಾರ್ಯಯೋಜನೆ ಮರುರೂಪಿಸಲು ಅವಕಾಶ ನೀಡಿತ್ತು ಎಂದು ವಿಶ್ಲೇಷಕರಾದ ಸ್ಪೇನ್ನ ಮಾಜಿ ಮಿಡ್ಫೀಲ್ಡರ್ ಜುವಾನ್ ಮಾಟಾ ಹೇಳಿದ್ದಾರೆ. ಅವರ ಪ್ರಕಾರ ಆಟಗಾರರಿಗೆ ಇಂತಹ ಬ್ರೇಕ್ ಉತ್ತಮವಲ್ಲ.
“ನೀವು ಸೋತಾಗ ಗೋಲು ಗಳಿಸಲು ಬಯಸುತ್ತೀರಿ ಮತ್ತು ಗೆದ್ದಾಗ ಚೆಂಡನ್ನು ಉಳಿಸಲು ಬಯಸುತ್ತೀರಿ. ಆದರೆ ವಿರಾಮ ಈ ಆವೇಗವನ್ನು ಮುರಿಯುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಾಹೀರಾತುದಾರರು ಆಟಕ್ಕೆ ಅಡ್ಡಿಪಡಿಸುತ್ತಿದ್ದಾರೆಯೆ?
ವಿರಾಮದ ಜಾಹೀರಾತಿಗೆ ಮತ್ತೊಂದು ಅವಕಾಶವೆ ಎನ್ನುವ ಪ್ರಶ್ನೆ ಎದ್ದಿದೆ. ಪ್ರಸಾರಕರು ಆಟ ಪುನರಾರಂಭವಾಗುವ 30 ಸೆಕೆಂಡುಗಳ ಮೊದಲು ನೇರಪ್ರಸಾರಕ್ಕೆ ಮರಳಬೇಕು ಎಂದು ಫಿಫಾ ಹೇಳಿದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಮೆಕ್ಸಿಕೊ ಪಂದ್ಯದ ಸಮಯದಲ್ಲಿ ಆ ಮಾರ್ಗಸೂಚಿ ಅನುಸರಿಸಲಾಗಿಲ್ಲ. ಪಂದ್ಯ ಆರಂಭವಾದರೂ ಫಾಕ್ಸ್ ಟಿವಿ 10 ಸೆಕೆಂಡುಗಳ ಕಾಲ ಜಾಹೀರಾತು ಮುಂದುವರಿಸಿದೆ ಎಂದು ವರದಿಯಾಗಿದೆ.






