VIDEO | ವಿಶ್ವಕಪ್ ತಂಡದಿಂದ ಗಿಲ್ ಹೊರಕ್ಕೆ: ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಗೌತಮ್ ಗಂಭೀರ್

Photo : X (Twitter)
ಹೊಸದಿಲ್ಲಿ: 2026ರ ಟಿ-20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಶನಿವಾರ ಪ್ರಕಟಿಸಲಾಗಿದ್ದು, ಶುಭಮನ್ ಗಿಲ್ ರನ್ನು ಹೊರಗಿಟ್ಟಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಟಿ-20 ತಂಡದ ಉಪನಾಯಕನಾಗಿದ್ದ ಗಿಲ್ 15 ಸದಸ್ಯರ ಅಂತಿಮ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಗಿಲ್ ಆಯ್ಕೆಯಾಗಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ತಂಡದಿಂದ ಕೈಬಿಟ್ಟ ಸುದ್ದಿಯು ಎಲ್ಲರಿಗೂ ಆಘಾತ ತಂದಿದೆ.
ತಂಡ ಪ್ರಕಟವಾದ ಕೆಲವೇ ಗಂಟೆಗಳ ನಂತರ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆಗ ಅವರನ್ನು ಸುತ್ತುವರಿದ ಸುದ್ದಿಗಾರರು ಗಿಲ್ ಹೊರಗಿಟ್ಟಿರುವ ಕುರಿತಂತೆ ಪ್ರಶ್ನೆಗಳ ಸುರಿಮಳೆಗರೆದರು.
ಅದರೆ ಗಂಭೀರ್ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ವರದಿಗಾರರು ಅವರ ಬೆನ್ನತ್ತಿ ಹೋದರೂ ಯಾವುದೇ ಹೇಳಿಕೆಯನ್ನು ನೀಡದೆ ತಮ್ಮ ಕಾರನ್ನು ಏರಿ ಹೊರಟರು. ಈ ವೀಡಿಯೊವು ಸಾಮಾಜಿಕ ಜಾಲತಾಣದಲ್ಲಿ ತಕ್ಷಣವೇ ವೈರಲ್ ಆಗಿದೆ. ಗಿಲ್ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಯಲ್ಲಿ ಆಡಿದ್ದರು. ಆದರೆ ಅವರು ಮೂರು ಪಂದ್ಯಗಳಲ್ಲಿ ಕೇವಲ 32 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದ್ದರು.







