ಸೂರ್ಯವಂಶಿಗೋಸ್ಕರ ಉತ್ತಮ ರನ್ ಗಳಿಸುತ್ತಿರುವ ಆಟಗಾರರನ್ನು ಕೈಬಿಡುವುದು ಸರಿಯಲ್ಲ: ಬ್ಯಾಟಿಂಗ್ ಕೋಚ್

Photo: x.com/Shailu
ಹೊಸದಿಲ್ಲಿ: ಹದಿಹರೆಯದ ಆಟಗಾರನಿಗೆ ಅವಕಾಶ ನೀಡುವ ಸಲುವಾಗಿ ಉತ್ತಮ ಪ್ರದರ್ಶನ ನೀಡಿ ರನ್ ಗಳಿಸುತ್ತಿರುವ ಆಟಗಾರರನ್ನು ಕೈಬಿಡುವುದು ಸರಿಯಲ್ಲ ಎಂದು ಭಾರತ ತಂಡದ ಬ್ಯಾಟಿಂಗ್ ಕೋಚ್ ಅಭಿಪ್ರಾಯಪಟ್ಟಿದ್ದಾರೆ.
ಹದಿನೈದು ವರ್ಷದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲು ಸಜ್ಜಾಗುತ್ತಿರುವ ನಡುವೆಯೇ, ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಅವರು ಮಾತನಾಡಿದರು.
ಶುಕ್ರವಾರ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಆರಂಭವಾಗಲಿದ್ದು, ಆಡುವ 11ರ ಬಳಗದಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ. 15 ವರ್ಷದ ಈ ಆಟಗಾರ ಭಾರತವನ್ನು ಪ್ರತಿನಿಧಿಸುವ ಅತ್ಯಂತ ಕಿರಿಯ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದ ತಂಡದ ವ್ಯವಸ್ಥಾಪಕ ವರ್ಗಕ್ಕೆ ಅತ್ಯಂತ ಕಠಿಣ ಸವಾಲು ಎದುರಾಗಿದ್ದು, ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅಥವಾ ಸಂಜು ಸ್ಯಾಮ್ಸನ್ ಜತೆ ಇನಿಂಗ್ಸ್ ಆರಂಭಿಸಬೇಕಿದೆ. ಪಂದ್ಯಕ್ಕೆ ಮುನ್ನಾ ದಿನ ಮಾಧ್ಯಮಗಳ ಜತೆ ಮಾತನಾಡಿದ ಕೊಟಾಕ್, ಹದಿಹರೆಯದ ಆಟಗಾರನ ಸಾಮರ್ಥ್ಯವನ್ನು ಹೊಗಳಿದರಾದರೂ, ತಂಡದ ಆಯ್ಕೆ ಈಗಾಗಲೇ ರನ್ ಗಳಿಸುತ್ತಿರುವ ಆಟಗಾರರಿಗೆ ನ್ಯಾಯ ಒದಗಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.
"ವೈಭವ್ ಅತ್ಯಂತ ಪ್ರತಿಭಾವಂತ ಆಟಗಾರ ಎನ್ನುವುದು ನಿಸ್ಸಂದೇಹ. ಐಪಿಎಲ್ ಹಾಗೂ ಇತರ ಪಂದ್ಯಗಳಲ್ಲಿ ಅವರ ಆಟವನ್ನು ನೋಡಿದ ಬಳಿಕ ಅವರಲ್ಲಿ ಪ್ರತಿಭೆ ಇದೆ ಎಂದು ಮತ್ತೆ ಹೇಳಬೇಕಾಗಿಲ್ಲ. ಐಪಿಎಲ್ನಲ್ಲಿ ಜೋಫ್ರಾ ಹಾಗೂ ಇತರ ಹಲವು ಅನುಭವಿ ವೇಗದ ಬೌಲರ್ಗಳನ್ನು ಎದುರಿಸಿರುವುದರಿಂದ ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಈಗಾಗಲೇ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಕೈಬಿಡುವುದು ಸರಿಯಲ್ಲ" ಎಂದು ಹೇಳಿದರು.






