ದಕ್ಷಿಣ ಆಫ್ರಿಕಾ ವಿರುದ್ಧ ಚತುರ್ದಿನ ಪಂದ್ಯ ಭಾರತ ಎ ತಂಡಕ್ಕೆ ಕೆ.ಎಸ್.ಭರತ್ ನಾಯಕ

Photo : instagram
ಹೊಸದಿಲ್ಲಿ : ಆಂಧ್ರಪ್ರದೇಶದ ವಿಕೆಟ್ ಕೀಪರ್-ಬ್ಯಾಟರ್ ಕೆ.ಎಸ್.ಭರತ್ ದಕ್ಷಿಣ ಆಫ್ರಿಕಾ ಎ ವಿರುದ್ಧದ ಮುಂಬರುವ ಎರಡು ಚತುರ್ದಿನ ಪಂದ್ಯಗಳಿಗೆ ಭಾರತ ಎ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ತಿಂಗಳಾಂತ್ಯದಲ್ಲಿ ಟೀಮ್ ಇಂಡಿಯಾ ಕೂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.
ಗುರುವಾರ ಎರಡು ಪಂದ್ಯಗಳಿಗೆ ಬಿಸಿಸಿಐ ಪ್ರತ್ಯೇಕ ತಂಡಗಳನ್ನು ಪ್ರಕಟಿಸಿದೆ. ಎರಡೂ ತಂಡಗಳಲ್ಲಿ ಭರತ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಧ್ರುವ್ ಜುರೆಲ್, ಮಾನವ್ ಸುಥಾರ್ ಹಾಗೂ ವಿದ್ವತ್ ಕಾವೇರಪ್ಪ ಅವರಿದ್ದಾರೆ.
ಈಶ್ವರನ್ ಪಾಲ್ಗೊಳ್ಳುವಿಕೆ ಅವರ ಫಿಟ್ನೆಸ್ಅನ್ನು ಆಧರಿಸಿದೆ ಎಂದು ಬಿಸಿಸಿಐ ತಿಳಿಸಿದೆ.
ಆಸ್ಟ್ರೇಲಿಯ ವಿರುದ್ಧ ಜೂನ್ ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಆಡಿದ್ದ 30ರ ಹರೆಯದ ಭರತ್ ತನ್ನ ಸಾಮರ್ಥ್ಯ ತೋರಿಸುವ ವಿಶ್ವಾಸದಲ್ಲಿದ್ದಾರೆ. ಈಗ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿಯಲ್ಲಿ ಕರ್ನಾಟಕದ ಪರ ಗರಿಷ್ಠ ರನ್ ಸ್ಕೋರರ್ ಆಗಿರುವ ದೇವದತ್ತ ಪಡಿಕ್ಕಲ್ ಸೆಂಚೂರಿಯನ್ನಲ್ಲಿ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ ಗಿಂತ ಮೊದಲು ನಡೆಯುವ ಪ್ರಥಮ ಚತುರ್ದಿನ ಪಂದ್ಯದಲ್ಲಿ ಸ್ಥಾನ ಪಡೆದಿದ್ದಾರೆ.
ಡಿ.11ರಿಂದ 14ರ ತನಕ ನಡೆಯುವ ಮೊದಲ ಪಂದ್ಯದಲ್ಲಿ ಮುಂಬೈನ ಸರ್ಫರಾಝ್ ಖಾನ್ ಜೊತೆಗೆ ಪ್ರಸಿದ್ದ ಕೃಷ್ಣ ಹಾಗೂ ತುಷಾರ್ ದೇಶಪಾಂಡೆ ಅವಕಾಶ ಪಡೆದಿದ್ದಾರೆ. ಎರಡನೇ ಚತುರ್ದಿನ ಪಂದ್ಯವು ಡಿಸೆಂಬರ್ 26ರಿಂದ 29 ರ ತನಕ ನಡೆಯಲಿದೆ. ಇದರಲ್ಲಿ ತಿಲಕ್ ವರ್ಮಾ, ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಹಾಗೂ ನವದೀಪ್ ಸೈನಿಗೆ ಅವಕಾಶ ನೀಡಲಾಗಿದೆ.
ಡಿಸೆಂಬರ್ 20ರಿಂದ 22ರ ತನಕ ನಡೆಯುವ ಮೂರು ದಿನಗಳ ಪಂದ್ಯಕ್ಕೆ ಅಂತರ್-ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇದರಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಂತಹ ಆಟಗಾರರಿದ್ದಾರೆ. ಈ ಇವರಿಬ್ಬರು ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ ಸರಣಿಗಳಲ್ಲಿ ಆಡುತ್ತಿಲ್ಲ. ಸ್ಟಾರ್ ಆಟಗಾರರಾದ ಜಸ್ಟ್ರೀತ್ ಬುಮ್ರಾ, ಮುಹಮ್ಮದ್ ಶಮಿ, ಆರ್.ಅಶ್ವಿನ್, ರವೀಂದ್ರ ಜಡೇಜ, ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರಿದ್ದಾರೆ.
ತಂಡಗಳು:
ಮೊದಲ ಚತುರ್ದಿನ ಪಂದ್ಯಕ್ಕೆ ಭಾರತ ಎ ತಂಡ: ಕೆ.ಎಸ್.ಭರತ್(ನಾಯಕ, ವಿಕೆಟ್ ಕೀಪರ್), ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ದೇವದತ್ತ ಪಡಿಕ್ಕಲ್, ಪ್ರದೋಶ್ ರಂಜನ್ ಪಾಲ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್, ಶಾರ್ದೂಲ್ ಠಾಕೂರ್, ಪುಲ್ಕಿಟ್ ನಾರಂಗ್, ಸೌರಭ್ ಕುಮಾರ್, ಮಾನವ್ ಸುಥಾರ್, ಪ್ರಸಿದ್ದ ಕೃಷ್ಣ, ಆಕಾಶ್ ದೀಪ್, ವಿದ್ವತ್ ಕಾವೇರಪ್ಪ ಹಾಗೂ ತುಷಾರ್ ದೇಶಪಾಂಡೆ.
ದ್ವಿತೀಯ ಚತುರ್ದಿನ ಪಂದ್ಯಕ್ಕೆ ಭಾರತ ಎ ತಂಡ: ಕೆ.ಎಸ್. ಭರತ್(ನಾಯಕ, ವಿಕೆಟ್ ಕೀಪರ್), ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಧ್ರುವ್ ಜುರೆಲ್(ವಿಕೆಟ್ ಕೀಪರ್), ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮಾನವ್ ಸುಥರ್, ಆಕಾಶ್ ದೀಪ್, ವಿದ್ವತ್ ಕಾವೇರಪ್ಪ ಹಾಗೂ ನವದೀಪ್ ಸೈನಿ.







