ರಣಜಿ | ಕರುಣ್ ನಾಯರ್ ಶತಕ, ಕೇರಳದ ವಿರುದ್ಧ ಕರ್ನಾಟಕ 319/3

ಕರುಣ್ ನಾಯರ್ | Photo Credit : PTI
ರಣಜಿ: ಮಂಗಳಪುರಂ, ನ.1: ಕರುಣ್ ನಾಯರ್(ಔಟಾಗದೆ 142 ರನ್, 251 ಎಸೆತ, 14 ಬೌಂಡರಿ, 2 ಸಿಕ್ಸರ್)ಶತಕ, ಆರ್. ಸ್ಮರಣ್(ಔಟಾಗದೆ 88, 143 ಎಸೆತ, 8 ಬೌಂಡರಿ, 1 ಸಿಕ್ಸರ್)ಹಾಗೂ ಕೆ.ಶ್ರೀಜಿತ್(65 ರನ್, 110 ಎಸೆತ, 10 ಬೌಂಡರಿ)ಅರ್ಧಶತಕಗಳ ಕೊಡುಗೆಯ ಸಹಾಯದಿಂದ ಕರ್ನಾಟಕ ಕ್ರಿಕೆಟ್ ತಂಡವು ಕೇರಳ ತಂಡದ ವಿರುದ್ಧ ಶನಿವಾರ ಆರಂಭವಾದ ರಣಜಿ ಟ್ರೋಫಿಯ ‘ಬಿ’ ಗುಂಪಿನ 3ನೇ ಸುತ್ತಿನ ಪಂದ್ಯದಲ್ಲಿ ಉತ್ತರ ಮೊತ್ತದತ್ತ ಹೆಜ್ಜೆ ಇಟ್ಟಿದೆ.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಕರ್ನಾಟಕ ತಂಡವು 90 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 319 ರನ್ ಗಳಿಸಿದೆ.
7.3 ಓವರ್ ಗಳಲ್ಲಿ ನಾಯಕ ಮಯಾಂಕ್ ಅಗರ್ವಾಲ್(5 ರನ್)ಹಾಗೂ ಕೆ.ವಿ.ಅನೀಶ್(8 ರನ್)ವಿಕೆಟ್ ಗಳನ್ನು ಕಳೆದುಕೊಂಡ ಕರ್ನಾಟಕ ತಂಡವು ಕಳಪೆ ಆರಂಭ ಪಡೆದಿತ್ತು. ಆಗ ಜೊತೆಯಾದ ಕರುಣ್ ನಾಯರ್ ಹಾಗೂ ಕೃಷ್ಣನ್ ಶ್ರೀಜಿತ್ 3ನೇ ವಿಕೆಟ್ ಗೆ 123 ರನ್ ಜೊತೆಯಾಟ ನಡೆಸಿ ತಂಡವನ್ನು ಕುಸಿತದಿಂದ ಮೇಲೆತ್ತಿದರು.
ಶ್ರೀಜಿತ್ ಔಟಾದ ನಂತರ ರವಿಚಂದ್ರನ್ ಸ್ಮರಣ್ ಜೊತೆ ಕೈಜೋಡಿಸಿದ ಕರುಣ್ 4ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 183 ರನ್ ಸೇರಿಸಿ ಮೊದಲ ದಿನದಾಟದಂತ್ಯಕ್ಕೆ ಕರ್ನಾಟಕವನ್ನು ಸುಸ್ಥಿತಿಗೆ ತಲುಪಿಸಿದರು.
ಗೋವಾ ವಿರುದ್ಧ 2ನೇ ಸುತ್ತಿನ ಪಂದ್ಯದಲ್ಲಿ ಶತಕ ಗಳಿಸಿದ್ದ ಕರುಣ್ ನಾಯರ್ ಇದೀಗ ಸತತ 2ನೇ ಶತಕ ಸಿಡಿಸಿ ಮಿಂಚಿದ್ದಾರೆ.







