ಯಶಸ್ವಿ ಜೈಸ್ವಾಲ್ ಯು-ಟರ್ನ್: ಮುಂಬೈ ತಂಡದಲ್ಲೇ ಉಳಿಯಲು ನಿರ್ಧಾರ

ಯಶಸ್ವಿ ಜೈಸ್ವಾಲ್ | PC : NDTV
ಮುಂಬೈ: ಮುಂಬೈನಿಂದ ಗೋವಾಗೆ ಸ್ಥಳಾಂತರಗೊಳ್ಳಲು ನಿರಾಕ್ಷೇಪಣಾ ಪ್ರಮಾಣಪತ್ರ(ಎನ್ಒಸಿ)ವನ್ನು ಕೇಳಿ ವಿವಾದ ಸೃಷ್ಟಿಸಿದ ಒಂದು ತಿಂಗಳ ನಂತರ ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸಂಪೂರ್ಣ ಯು-ಟರ್ನ್ ತೆಗೆದುಕೊಂಡಿದ್ದಾರೆ. ಇದೀಗ ಮುಂಬೈ ಕ್ರಿಕೆಟ್ ತಂಡದ ಪರ ಮತ್ತೊಮ್ಮೆ ಆಡಲು ಬಯಸಿದ್ದಾರೆ.
23 ವರ್ಷದ ಆಟಗಾರ ಮುಂಬೈ ಕ್ರಿಕೆಟ್ ಸಂಸ್ಥೆಗೆ(ಎಂಸಿಎ)ಇ-ಮೇಲ್ ಕಳುಹಿಸಿ ತನ್ನ ಎನ್ಒಸಿಯನ್ನು ಹಿಂಪಡೆಯುವಂತೆ ಕೋರಿದ್ದಾರೆ. ಮುಂದಿನ ದೇಶೀಯ ಋತುವಿನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.
‘‘ನಾನು ಗೋವಾಗೆ ಸ್ಥಳಾಂತರಗೊಳ್ಳಲು ಬಯಸಿದ್ದ ಕಾರಣ ನನಗೆ ನೀಡಲಾಗಿರುವ ಎನ್ಒಸಿಯನ್ನು ಹಿಂಪಡೆಯುವ ನನ್ನ ವಿನಂತಿಯನ್ನು ಪರಿಗಣಿಸುವಂತೆ ವಿನಂತಿಸುವೆ. ವೈಯಕ್ತಿಕ ಕಾರಣದಿಂದಾಗಿ ಗೋವಾಕ್ಕೆ ಸ್ಥಳಾಂತರವಾಗುವುದನ್ನು ಸದ್ಯಕ್ಕೆ ಮೊಟಕುಗೊಳಿಸಲಾಗಿದೆ. ಈ ಋತುವಿನಲ್ಲಿ ಮುಂಬೈ ಪರ ಆಡಲು ನನಗೆ ಅವಕಾಶ ನೀಡುವಂತೆ ಎಂಸಿಎಯಲ್ಲಿ ವಿನಂತಿಸುತ್ತೇನೆ. ನಾನು ಬಿಸಿಸಿಐ ಅಥವಾ ಗೋವಾ ಕ್ರಿಕೆಟ್ ಸಂಸ್ಥೆಗೆ ಎನ್ಒಸಿ ಅನ್ನು ಸಲ್ಲಿಸಿಲ್ಲ’’ಎಂದು ಜೈಸ್ವಾಲ್ ಅವರು ಎನ್ಸಿಎಗೆ ನೀಡಿರುವ ಇ-ಮೇಲ್ನಲ್ಲಿ ಬರೆದಿದ್ದಾರೆ.
ವೈಯಕ್ತಿಕ ಕಾರಣದಿಂದಾಗಿ ಗೋವಾಕ್ಕೆ ಸ್ಥಳಾಂತರಗೊಳ್ಳುವೆ ಎಂದು ಎಪ್ರಿಲ್ನಲ್ಲಿ ಹೇಳಿದ್ದ ಜೈಸ್ವಾಲ್ ಎಂಸಿಎ ಅಧಿಕಾರಿಗಳನ್ನು ತಬ್ಬಿಬ್ಬುಗೊಳಿಸಿದ್ದರು. ಈ ಮೂಲಕ ಮುಂಬೈನ ಅರ್ಜುನ್ ತೆಂಡುಲ್ಕರ್ ಹಾಗೂ ಸಿದ್ದೇಶ್ ಲಾಡ್ ರ ಹಾದಿ ತುಳಿಯುವ ಸುಳಿವು ನೀಡಿದ್ದರು.
ಕಳೆದ ವರ್ಷ ಮುಂಬೈ ಪರ ಕೇವಲ 1 ರಣಜಿ ಪಂದ್ಯ ಆಡಿದ್ದ ಜೈಸ್ವಾಲ್ ಅವರು ಈ ವರ್ಷ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿದ್ದು, 12 ಪಂದ್ಯಗಳಲ್ಲಿ 43ರ ಸರಾಸರಿಯಲ್ಲಿ ಒಟ್ಟು 473 ರನ್ ಗಳಿಸಿದ್ದಾರೆ.
ಎಡಗೈ ಬ್ಯಾಟರ್ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಪರ 5 ಟೆಸ್ಟ್ ಪಂದ್ಯಗಳಲ್ಲಿ 43.44ರ ಸರಾಸರಿಯಲ್ಲಿ 1 ಶತಕ ಹಾಗೂ 2 ಅರ್ಧಶತಕಗಳ ಸಹಿತ ಒಟ್ಟು 391 ರನ್ ಗಳಿಸಿ ಗಮನಸೆಳೆದಿದ್ದರು.