ನಾನು ಮೊಬೈಲ್ ಬಳಕೆ ಬಿಟ್ಟಿದ್ದು ಏಕೆಂದರೆ...: ಕಾರಣ ತಿಳಿಸಿದ ಸಿಎಂ ಸಿದ್ದರಾಮಯ್ಯ
![ನಾನು ಮೊಬೈಲ್ ಬಳಕೆ ಬಿಟ್ಟಿದ್ದು ಏಕೆಂದರೆ...: ಕಾರಣ ತಿಳಿಸಿದ ಸಿಎಂ ಸಿದ್ದರಾಮಯ್ಯ ನಾನು ಮೊಬೈಲ್ ಬಳಕೆ ಬಿಟ್ಟಿದ್ದು ಏಕೆಂದರೆ...: ಕಾರಣ ತಿಳಿಸಿದ ಸಿಎಂ ಸಿದ್ದರಾಮಯ್ಯ](https://www.varthabharati.in/h-upload/2023/06/26/1157961-whatsapp-image-2023-05-25-at-82156-pm.webp)
ಬೆಂಗಳೂರು, ಜೂ.26: ಕೆಲವರು ಕುಡಿದ ಮತ್ತಿನಲ್ಲಿ ಕರೆ ಮಾಡಿ ತೊಂದರೆ ಕೊಡುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಬೇಕಾಗಿ ಬಂತು. ಹೀಗಾಗಿ ಮೊಬೈಲ್ ಬಳಕೆ ಮಾಡುವುದನ್ನು ನಿಲ್ಲಿಸಿಬಿಟ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ 16ನೆ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ಸೋಮವಾರ ಇಲ್ಲಿನ ನೆಲಮಂಗಲದ ಎಸ್ಡಿಎಂ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಕ್ಷೇಮವನದಲ್ಲಿ ಹಮ್ಮಿ ಕೊಂಡಿದ್ದ ಮೂರು ದಿನಗಳ ಕಾಲದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ನೂತನ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ಮೊಬೈಲ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಸಂದರ್ಭದಲ್ಲಿ 7ರಿಂದ8 ತಿಂಗಳು ಬಳಸಿದ್ದೆ. ಈ ವೇಳೆ ಕೆಲವರು ರಾತ್ರಿಯೆಲ್ಲ ಕರೆ ಮಾಡುತ್ತಿದ್ದರು. ಕೆಲವರು ಕುಡಿದ ಮತ್ತಿನಲ್ಲಿ ಕರೆ ಮಾಡಿ ತೊಂದರೆ ಕೊಡುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಬೇಕಾಗಿ ಬಂತು. ಈಗ ನನ್ನ ಬಳಿ ವೈಯಕ್ತಿಕವಾಗಿ ಮೊಬೈಲ್ ಇಲ್ಲ. ನಮ್ಮ ಅಧಿಕಾರಿಗಳು, ಆಪ್ತಸಹಾಯಕರ ಮೊಬೈಲ್ ಬಳಕೆ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.