ಅಧಿವೇಶನ | ಮೇಲ್ಮನೆಯಲ್ಲಿ ಧರ್ಮಸ್ಥಳ ಪ್ರಕರಣ ಪ್ರಸ್ತಾಪ : ತನಿಖಾ ಪ್ರಗತಿಯ ವರದಿ ಬಹಿರಂಗಪಡಿಸಲು ಬಿಜೆಪಿ ಒತ್ತಾಯ

ಬೆಂಗಳೂರು, ಆ.11: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಠಿಸಿರುವ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಕೊಲೆ ಹಾಗೂ ನೂರಾರು ಶವಗಳ ಹೂತಿಟ್ಟ ಪ್ರಕರಣವು ಸೋಮವಾರ ಮೇಲ್ಮನೆಯಲ್ಲಿ ಪ್ರಸ್ತಾಪವಾಯಿತು.
ಸೋಮವಾರ ಈ ಬಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಡಿ.ಎಸ್.ಅರುಣ್, ಲಕ್ಷಾಂತರ ಹಿಂದೂ ಭಕ್ತರ ಧಾರ್ಮಿಕ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ಅನಾಮಿಕ ವ್ಯಕ್ತಿಯೊಬ್ಬ ಯಾವುದೇ ದೃಢವಾದ ಸಾಕ್ಷ್ಯವಿಲ್ಲದೆ ಆರೋಪ ಮಾಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಗೃಹ ಸಚಿವರು ತನಿಖೆಯ ಪ್ರಗತಿ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಧರ್ಮಸ್ಥಳದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿರುವುದು ಅತ್ಯಂತ ಖಂಡನೀಯ ಮತ್ತು ಹಿಂದೂ ಸಮಾಜದ ಭಾವನೆಗೆ ಅವಮಾನವಾಗಿದೆ. ಇಂತಹ ಸುಳ್ಳು ಮತ್ತು ಉದ್ದೇಶಪೂರಿತ ಆರೋಪಗಳಿಂದ ಸನಾತನ ಧರ್ಮದ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಡಿ.ಎಸ್.ಅರುಣ್ ದೂರಿದರು.
ಜನರ ಭಕ್ತಿ ಭಾವನೆಗೆ ಧಕ್ಕೆ ಉಂಟುಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಬದ್ಧವಾಗಿರಬೇಕು. ಧರ್ಮಸ್ಥಳ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿ. ಈ ಆರೋಪದ ಹಿಂದಿರುವ ನಿಜಸ್ವರೂಪವನ್ನು ಬಹಿರಂಗಪಡಿಸಬೇಕು ಎಂದು ಡಿ.ಎಸ್.ಅರುಣ್ ಆಗ್ರಹಿಸಿದರು.







