ಮುಂಗಾರು ಅಧಿವೇಶನ | ಬಿಜೆಪಿಯ 18 ಮಂದಿ ಸದಸ್ಯರ ಅಮಾನತು ನಿರ್ಣಯ ವಾಪಸ್

ಬೆಂಗಳೂರು : ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿ, ಸದನದಲ್ಲಿ ಅಶಿಸ್ತು ಪ್ರದರ್ಶಿಸಿದ್ದ ಆರೋಪದ ಮೇಲೆ ಬಿಜೆಪಿಯ 18ಮಂದಿ ಸದಸ್ಯರನ್ನು ಆರು ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಿದ್ದ ನಿರ್ಣಯವನ್ನು ಹಿಂಪಡೆದಿದ್ದು, ಆ ತೀರ್ಮಾನನ್ನು ವಿಧಾನಸಭೆಯಲ್ಲಿ ಸ್ಥಿರೀಕರಿಸಲಾಯಿತು.
ಸೋಮವಾರ ವಿಧಾನಸಭೆಯಲ್ಲಿ ಸಂತಾಪ ಸೂಚನಾ ನಿರ್ಣಯ ಮಂಡನೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಎಚ್.ಕೆ.ಪಾಟೀಲ್ ಸ್ಥಿರೀಕರಣ ಪ್ರಸ್ತಾವನ್ನು ಮಂಡಿಸಿದರು. ಬಿಜೆಪಿ ಸದಸ್ಯರಾದ ದೊಡ್ಡನಗೌಡ ಪಾಟೀಲ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಮುನಿರತ್ನ, ಬೈರತಿ ಬಸವರಾಜ್, ಎಸ್.ಆರ್.ವಿಶ್ವನಾಥ್, ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್, ಎಂ.ಆರ್.ಪಾಟೀಲ್, ಡಾ.ಭರತ್ ಶೆಟ್ಟಿ, ಬಿ.ಪಿ.ಹರೀಶ್, ಧೀರಜ್ ಮುನಿರಾಜು, ಡಾ.ಚಂದ್ರು ಲಮಾಣಿ, ಶರಣು ಸಲಗಾರ್, ಬಸವರಾಜ್ ಮತ್ತಿಮೋಡ್ ಸೇರಿದಂತೆ 18 ಶಾಸಕರನ್ನು ಅಮಾನತು ಮಾಡಲಾಗಿತ್ತು ಎಂದು ಉಲ್ಲೇಖಿಸಿದರು.
ಬಿಜೆಪಿಯ 18 ಮಂದಿ ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಆ ಬಳಿಕ ಪ್ರತಿಪಕ್ಷ ನಾಯಕರ ಮನವಿ ಹಿನ್ನೆಲೆಯಲ್ಲಿ ಅಮಾನತ್ತುಗೊಳಿಸಿದ ನಿರ್ಣಯವನ್ನು 2025ರ ಮೇ 25ರಿಂದ ಜಾರಿಗೆ ಬರುವಂತೆ ವಾಪಸ್ ಪಡೆಯಲಾಗಿತ್ತು. ಇದೀಗ ಆ ನಿರ್ಣಯವನ್ನು ಸದನದಲ್ಲಿ ಸ್ಥಿರೀಕರಣ ಮಾಡಬೇಕಿದೆ. ಹೀಗಾಗಿ ಪ್ರಸ್ತಾವಕ್ಕೆ ಸದನ ಅನುಮೋದನೆ ನೀಡಬೇಕು ಎಂದು ಪಾಟೀಲ್ ಕೋರಿದರು.
ಆ ಬಳಿಕ ಸ್ಪೀಕರ್ ಯು.ಟಿ.ಖಾದರ್ ಅವರು ಸ್ಥಿರೀಕರಣ ಪ್ರಸ್ತಾವವನ್ನು ಮತಕ್ಕೆ ಹಾಕಿದ ಸಂದರ್ಭ ದ್ವನಿಮತ ಅನುಮೋದನೆ ದೊರೆಯಿತು. ನಂತರ ಕಲಾಪವನ್ನು ಸ್ಪೀಕರ್ ಖಾದರ್ ಅವರು ಭೋಜನ ವಿರಾಮಕ್ಕೆ ಮುಂದೂಡಿದರು.







