ಥರ್ಡ್ ಕ್ಲಾಸ್ ವಂಚಕನಿಂದ ನಾವು ಇನ್ನೇನು ನಿರೀಕ್ಷಿಸಲು ಸಾಧ್ಯ: ಅಸ್ಸಾಂ ಸಿಎಂ ಶರ್ಮಾಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ಅಸ್ಸಾಂ ಸಿಎಂ ಒಬ್ಬ (ಥರ್ಡ್ ಕ್ಲಾಸ್ ಕ್ರೂಕ್) ‘ಮೂರನೇ ದರ್ಜೆ ವಂಚಕ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ತನ್ನನ್ನು ʼಫಸ್ಟ್ ಕ್ಲಾಸ್ ಈಡಿಯಟ್ʼ ಎಂದು ಕರೆದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಒಬ್ಬ ʼಥರ್ಡ್ ಕ್ಲಾಸ್ ಕ್ರೂಕ್ʼ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಅನುಮತಿ ದೊರೆತ ವಿಚಾರವಾಗಿ ಇಬ್ಬರು ನಾಯಕರ ನಡುವೆ ವಾಗ್ವಾದ ನಡೆಯುತ್ತಿದ್ದು, ವೈಯಕ್ತಿಕ ನಿಂದನೆಗೆ ಇಳಿಯುವವರೆಗೆ ತಲುಪಿದೆ.
ದೊಡ್ಡ ಕೈಗಾರಿಕೆಗಳ ಸ್ಥಾಪಿಸಲು ಈಶಾನ್ಯ ರಾಜ್ಯಗಳಲ್ಲಿ ಪ್ರತಿಭೆಗಳ ಕೊರೆತೆಯಿದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಸ್ವಾ, ಪ್ರಿಯಾಂಕ್ ಅವರನ್ನು ‘ಫಸ್ಟ್ ಕ್ಲಾಸ್ ಮುಠ್ಠಾಳ’ ಎಂದು ಕರೆದಿದ್ದರು. ಈ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಅಸ್ಸಾಂ ಸಿಎಂ ಒಬ್ಬ ‘ಮೂರನೇ ದರ್ಜೆ ವಂಚಕ’ ಎಂದಿದ್ದಾರೆ.
‘ಬಿಸ್ವಾ ಅವರ ಭಾಷೆ ಅವರ ಹತಾಶೆಯನ್ನು ತೋರಿಸುತ್ತದೆ. ಅವರು ನನ್ನ ಹೇಳಿಕೆಯನ್ನು ತಿರುಚಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಮೂರನೇ ದರ್ಜೆಯ ವಂಚಕನಿಂದ ನಾವು ಇನ್ನೇನು ನಿರೀಕ್ಷಿಸಬಹುದು’ ಎಂದು ಪ್ರಶ್ನಿಸಿದ್ದಾರೆ.
ʼತರಬೇತಿ ಪಡೆದುಕೊಳ್ಳಲು ಅನೇಕ ಅಸ್ಸಾಮಿಗರು ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಬಿಸ್ವಾ ಅವರೇ ಟ್ವೀಟ್ ಮಾಡಿದ್ದರು. ನಾವು ಅವರನ್ನು ಸ್ವಾಗತಿಸುತ್ತೇವೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.







