ಪರಿಷತ್ನ 17 ಮಂದಿ ನೂತನ ಸದಸ್ಯರಿಂದ ನಾಳೆ(ಜೂ.24) ಪ್ರಮಾಣ ವಚನ ಸ್ವೀಕಾರ

ಬೆಂಗಳೂರು : ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಹಾಗೂ ಶಿಕ್ಷಕ-ಪದವೀಧರರ ಕ್ಷೇತ್ರಗಳಿಂದ ಪರಿಷತ್ತಿಗೆ ನೂತನವಾಗಿ ಚುನಾಯಿತರಾಗಿರುವ 17 ಮಂದಿ ಸದಸ್ಯರು ನಾಳೆ(ಜೂ.24) ಬೆಳಗ್ಗೆ 11ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ನೂತನ ಸದಸ್ಯರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ. ವಿಧಾನಸಭೆಯ ಸದಸ್ಯರಿಂದ 11 ಮಂದಿ, ಶಿಕ್ಷಕರ ಕ್ಷೇತ್ರಗಳಿಂದ ಮೂವರು ಹಾಗೂ ಪದವೀಧರರ ಕ್ಷೇತ್ರಗಳಿಂದ ಮೂವರು ಸದಸ್ಯರು ಚುನಾಯಿತರಾರುವ ಎಲ್ಲ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಸಚಿವ ಎನ್.ಎಸ್.ಭೋಸರಾಜು, ಕೆ.ಗೋವಿಂದರಾಜು, ಎ.ವಸಂತಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ಐವಾನ್ ಡಿಸೋಜ, ಜಗದೇವ ಗುತ್ತೇದಾರ್, ಬಲ್ಕೀಸ್ ಬಾನು, ಡಿ.ಟಿ.ಶ್ರೀನಿವಾಸ, ರಾಮೋಜಿಗೌಡ, ಡಾ.ಚಂದ್ರಶೇಖರ ಬಸವರಾಜ ಪಾಟೀಲ್ ಸೇರಿದಂತೆ 10 ಮಂದಿ ಚುನಾಯಿತರಾಗಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಿ ಸಿ.ಟಿ.ರವಿ, ಎನ್. ರವಿಕುಮಾರ್, ಮೂಳೆ ಮಾರುತಿರಾವ್, ಡಾ.ಧನಂಜಯ ಸರ್ಜಿ ಸೇರಿದಂತೆ ನಾಲ್ಕು ಮಂದಿ ಆಯ್ಕೆಯಾಗಿದ್ದಾರೆ. ಜೆಡಿಎಸ್ನಿಂದ ಟಿ.ಎನ್.ಜವರಾಯಿಗೌಡ, ಎಸ್.ಎಲ್.ಭೋಜೇಗೌಡ, ಕೆ.ವಿವೇಕಾನಂದ ಸಹಿತ ಮೂವರು ಆಯ್ಕೆಗೊಂಡಿದ್ದಾರೆ.
ಆಡಳಿತ ಪಕ್ಷದ 10 ಮಂದಿ ಹಾಗೂ ಪ್ರತಿಪಕ್ಷಗಳ ಏಳು ಮಂದಿ ಸದಸ್ಯತ್ವದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೂರು ರಾಜಕೀಯ ಪಕ್ಷಗಳ ಸದಸ್ಯರು ಪ್ರಮಾಣ ವಚನ ಸ್ವೀಕರಿಸುತ್ತಿರುವುದರಿಂದ ಸಚಿವರು, ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು, ನೂತನ ಸದಸ್ಯರ ಕುಟುಂಬದ ಸದಸ್ಯರು ಹಾಗೂ ಸದಸ್ಯರ ಬೆಂಬಲಿಗರು ಪಾಲ್ಗೊಳ್ಳಲಿದ್ದಾರೆ.







