ʼನಮ್ಮ ಮೆಟ್ರೋʼ ದೇಶಕ್ಕೆ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಯ ಹೊಸ ಮಾದರಿ ನೀಡಿದೆ : ಪ್ರಧಾನಿ ಮೋದಿ

ಬೆಂಗಳೂರು : ಬೆಂಗಳೂರು ಮೆಟ್ರೋ ದೇಶಕ್ಕೆ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಯ ಹೊಸ ಮಾದರಿಯನ್ನು ನೀಡಿದೆ. ಇನ್ಫೋಸಿಸ್ ಫೌಂಡೇಶನ್, ಬಯೋಕಾನ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ನಂತಹ ಕಂಪನಿಗಳು ಬೆಂಗಳೂರು ಮೆಟ್ರೋದ ಹಲವು ಪ್ರಮುಖ ನಿಲ್ದಾಣಗಳಿಗೆ ಭಾಗಶಃ ಹಣಕಾಸು ಒದಗಿಸಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ರವಿವಾರ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ಏರ್ಪಡಿಸಿದ್ದ 15,610 ಕೋಟಿ ರೂಮೊತ್ತದ ಮೆಟ್ರೋ ಹಂತ-3ರ ಶಂಕುಸ್ಥಾಪನೆ, 7,160 ಕೋಟಿ ರೂ.ಮೊತ್ತದ ಮೆಟ್ರೋ ಹಂತ-2ರ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮೆಟ್ರೋ ಯೋಜನೆಗೆ ಸಿಎಸ್ಆರ್ ಅನುದಾನ ಬಳಸುವ ಮಾದರಿಯು ದೊಡ್ಡ ಸ್ಫೂರ್ತಿಯಾಗಿದೆ. ಈ ನವೀನ ಪ್ರಯತ್ನಕ್ಕಾಗಿ ಕಾರ್ಪೊರೇಟ್ ವಲಯವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಬೆಂಗಳೂರು ನವ ಭಾರತದ ಉದಯದ ಸಂಕೇತವಾಗಿ ಹೊರಹೊಮ್ಮುತ್ತಿರುವ ನಗರವಾಗಿದೆ. ಜಾಗತಿಕಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಧ್ವಜವನ್ನು ಹಾರಿಸಿದ ನಗರ. ಬೆಂಗಳೂರಿನ ಈ ಯಶೋಗಾಥೆಯ ಹಿಂದೆ ಇಲ್ಲಿನ ಜನರ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಅಡಗಿದೆ ಎಂದು ಪ್ರಧಾನಿ ಹೇಳಿದರು.
21ನೆ ಶತಮಾನದಲ್ಲಿ, ನಗರ ಯೋಜನೆ ಮತ್ತು ನಗರ ಮೂಲಸೌಕರ್ಯ ನಮ್ಮ ನಗರಗಳಿಗೆ ಬಹಳ ಅಗತ್ಯವಾಗಿದೆ. ಬೆಂಗಳೂರಿನಂತಹ ನಗರಗಳನ್ನು ಭವಿಷ್ಯಕ್ಕಾಗಿ ನಾವು ಸಿದ್ಧಪಡಿಸಬೇಕು. ಭಾರತ ಸರಕಾರವು ಬೆಂಗಳೂರಿಗಾಗಿ ಸಾವಿರಾರು ಕೋಟಿ ರೂ.ಗಳ ಯೋಜನೆಗಳನ್ನು ಪ್ರಾರಂಭಿಸಿದೆ. ಇಂದು ಈ ಅಭಿಯಾನವು ಹೊಸ ವೇಗವನ್ನು ಪಡೆಯುತ್ತಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಮೆಟ್ರೋ ಹಳದಿ ಮಾರ್ಗವನ್ನು ಇಂದು ಉದ್ಘಾಟಿಸಲಾಗಿದೆ. ಮೆಟ್ರೋ ಹಂತ -3 ರ ಅಡಿಪಾಯವನ್ನು ಹಾಕಲಾಗಿದೆ. ಇದರೊಂದಿಗೆ, ದೇಶದ ವಿವಿಧ ಭಾಗಗಳಿಗೆ 3 ಹೊಸ ವಂದೇ ಭಾರತ್ ರೈಲುಗಳಿಗೂ ಚಾಲನೆ ಮಾಡಲಾಗಿದೆ. ಬೆಂಗಳೂರು ಮತ್ತು ಬೆಳಗಾವಿ ನಡುವೆ ವಂದೇ ಭಾರತ್ ಸೇವೆ ಪ್ರಾರಂಭವಾಗಿದೆ. ಇದು ಬೆಳಗಾವಿಯಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಇದಲ್ಲದೆ, ನಾಗ್ಪುರದಿಂದ ಪುಣೆಗೆ ಮತ್ತು ಶ್ರೀ ಮಾತಾ ವೈಷ್ಣೋದೇವಿ ಕತ್ರಾದಿಂದ ಅಮೃತಸರಕ್ಕೆ ವಂದೇ ಭಾರತ್ ಎಕ್ಸ್ ಪ್ರೆಸ್ ಅನ್ನು ಪ್ರಾರಂಭಿಸಲಾಗಿದೆ. ಇದು ಲಕ್ಷಾಂತರ ಭಕ್ತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಆಪರೇಷನ್ ಸಿಂಧೂರ್ ನಂತರ ನಾನು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಆಪರೇಷನ್ ಸಿಂಧೂರ್ನಲ್ಲಿ ಭಾರತೀಯ ಪಡೆಗಳ ಯಶಸ್ಸು, ಗಡಿಯುದ್ದಕ್ಕೂ ಹಲವಾರು ಕಿಲೋಮೀಟರ್ಗಳಷ್ಟು ಭಯೋತ್ಪಾದಕ ಅಡಗುತಾಣಗಳನ್ನು ನಾಶಮಾಡುವ ನಮ್ಮ ಸಾಮರ್ಥ್ಯ ಮತ್ತು ಭಯೋತ್ಪಾದಕರ ರಕ್ಷಣೆಗೆ ಬಂದ ಪಾಕಿಸ್ತಾನವನ್ನು ಕೆಲವೇ ಗಂಟೆಗಳಲ್ಲಿ ಮಂಡಿಯೂರಿಸುವ ನಮ್ಮ ಸಾಮರ್ಥ್ಯ ವು ಇಡೀ ಜಗತ್ತಿಗೆ ಹೊಸ ಭಾರತದ ಈ ರೂಪವನ್ನು ನೋಡುವಂತೆ ಮಾಡಿದೆ ಎಂದು ನರೇಂದ್ರ ಮೋದಿ ಹೇಳೀದರು.
ಆಪರೇಷನ್ ಸಿಂಧೂರ್ನ ಈ ಯಶಸ್ಸಿನ ಹಿಂದಿನ ದೊಡ್ಡ ಕಾರಣವೆಂದರೆ ನಮ್ಮ ತಂತ್ರಜ್ಞಾನ ಮತ್ತು ರಕ್ಷಣೆಯಲ್ಲಿ ಮೇಕ್ ಇನ್ ಇಂಡಿಯಾದ ಶಕ್ತಿ. ಇದರಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಯುವಕರ ಪಾಲು ದೊಡ್ಡದು. ಇದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.
ಬೆಂಗಳೂರು ವಿಶ್ವದ ದೊಡ್ಡ ನಗರಗಳೊಂದಿಗೆ ಗುರುತಿಸಲ್ಪಟ್ಟಿದೆ. ನಾವು ಜಾಗತಿಕವಾಗಿ ಸ್ಪರ್ಧಿಸಬೇಕು. ನಮ್ಮ ನಗರಗಳು ಸ್ಮಾರ್ಟ್, ವೇಗ, ಪರಿಣಾಮಕಾರಿಯಾದಾಗ ಮಾತ್ರ ನಾವು ಮುಂದುವರಿಯುತ್ತೇವೆ. ಅದಕ್ಕಾಗಿಯೆ ಇಂದು ನಾವು ಆಧುನಿಕ ಮೂಲಸೌಕರ್ಯಕ್ಕಾಗಿ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದರು.
ಇಂದು, ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗವನ್ನು ಪ್ರಾರಂಭಿಸಲಾಗಿದೆ. ಇದು ಬಸವನಗುಡಿಯಿಂದ ಎಲೆಕ್ಟ್ರಾನಿಕ್ ಸಿಟಿಯವರೆಗಿನ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಹಳದಿ ಮಾರ್ಗದ ಉದ್ಘಾಟನೆಯೊಂದಿಗೆ, ನಾವು ಹಂತ-3ರ ಕಿತ್ತಳೆ ಮಾರ್ಗಕ್ಕೆ ಅಡಿಪಾಯವನ್ನು ಹಾಕಿದ್ದೇವೆ. ಹಳದಿ ಮಾರ್ಗದೊಂದಿಗೆ ಈ ಮಾರ್ಗವು ಪ್ರಾರಂಭವಾದರೆ ಪ್ರತಿದಿನ 25 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಇದು ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಮನೋಹರ್ ಲಾಲ್ ಕಟ್ಟರ್, ಎಚ್.ಡಿ. ಕುಮಾರಸ್ವಾಮಿ, ಅಶ್ವಿನಿ ವೈಷ್ಣವ್, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್, ಸಂಸದರಾದ ಡಾ.ಸಿ.ಎನ್.ಮಂಜುನಾಥ್, ತೇಜಸ್ವಿ ಸೂರ್ಯ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.







