ಸನ್ನಡತೆ ತೋರಿದ 77 ಕೈದಿಗಳ ಬಿಡುಗಡೆ: ಡಾ.ಜಿ. ಪರಮೇಶ್ವರ್
ಬೆಂಗಳೂರು: ಹೈಕೋರ್ಟ್ ಆದೇಶದನ್ವಯ ಸನ್ನಡತೆ ತೋರಿದ 77 ಸಜಾ ಬಂಧಿಗಳನ್ನು ಮಂಗಳವಾರ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ರಾಷ್ಟ್ರಪತಿಗಳ ಸುಧಾರಣಾ ಸೇವೆ ಪದಕ ಹಾಗೂ ಸಿಎಂ ಪದಕ ಪ್ರಧಾನ ಮತ್ತು ಸನ್ನಡತೆಯ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆ ಸಮಾರಂಭದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು-34, ಮೈಸೂರು-7, ಬೆಳಗಾವಿ-5, ಕಲಬುರಗಿ-9, ವಿಜಯಪುರ-6, ಬಳ್ಳಾರಿ-10 ಮತ್ತು ಧಾರವಾಡದ 6 ಜನ ಬಂಧಿಗಳು ಜೈಲಿನಿಂದ ಮುಕ್ತಿ ಪಡೆದಿದ್ದಾರೆ ಎಂದರು.
ಹೈಕೋರ್ಟ್ ಆದೇಶದ ಮೇರೆಗೆ ಸನ್ನಡತೆ ತೋರಿದ ಬಂಧಿಗಳ ಬಿಡುಗಡೆಗೆ ಅವಕಾಶವಿದೆ. ಬಿಡುಗಡೆಯಾದ 77 ಜನರು ಸುಮಾರು 10, 15 ವರ್ಷ ಜೈಲಿನಲ್ಲೇ ಜೀವನ ಕಳೆದು ಸನ್ನಡತೆ ಕಂಡುಕೊಂಡಿದ್ದಾರೆ. ಒಂದೇ ದಿನದಲ್ಲಿ ಸನ್ನಡತೆ ಪರಿಗಣಿಸಲ್ಲ. ಅದಕ್ಕೆ ಆದ ಕೆಲ ಮಾನದಂಡಗಳಿವೆ. ಜೈಲಿನಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ?, ಪರಿವರ್ತನೆಯಾಗಿದ್ದಾರೆ?, ಸಮಾಜದ ನಡುವೆ ಯಾವ ರೀತಿ ಅವರು ಇರಲಿದ್ದಾರೆ ಎಂಬುವುದನ್ನು ಮನನ ಮಾಡಿಕೊಳ್ಳಲಾಗುತ್ತದೆ ಎಂದು ಜಿ.ಪರಮೇಶ್ವರ್ ಹೇಳಿದರು.
ತದನಂತರದಲ್ಲಿ ಸಮಿತಿಯೊಂದು ಪರಿಶೀಲನೆ ಮಾಡಿ ಸರಕಾರಕ್ಕೆ ಶಿಫಾರಸು ಮಾಡುತ್ತದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಬಿಡುಗಡೆ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನಿಸಲಾಗುತ್ತದೆ. ರಾಜ್ಯಪಾಲರ ಅಂಕಿತ ಹಾಕಿದ ನಂತರ ಬಿಡುಗಡೆ ಮಾಡುವುದು ನಿಮಯ ಎಂದು ಜಿ.ಪರಮೇಶ್ವರ್ ತಿಳಿಸಿದರು.
2015ರಿಂದ ಇದುವರೆಗೆ 2,144 ಜನರನ್ನು ಸನ್ನಡತೆ ಆಧಾರ ಮೇಲೆ ಬಿಡುಗಡೆ ಮಾಡಲಾಗಿದೆ. ಎಲ್ಲರೂ ಕೂಡ ಉತ್ತಮವಾದ ಜೀವನ ನಡೆಸುತ್ತಿದ್ದಾರೆ. ಯಾರೋ ಒಬ್ಬರು, ಇಬ್ಬರು ಮತ್ತೆ ಅದೇ ತಪ್ಪು ಮಾಡಿರುತ್ತಾರೆ. ಅಂತಹವರಿಗೆ ಶಿಕ್ಷೆ ಕೂಡ ಆಗಿದೆ. ಹೆಚ್ಚಿನಂಶ ಬದಲಾವಣೆ ಮಾಡಿಕೊಂಡು ಸಮಾಜದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಜಿ.ಪರಮೇಶ್ವರ್ ವಿವರಿಸಿದರು.
ಈಗ ಬಿಡುಗಡೆಯಾದವರಲ್ಲಿ ಒಬ್ಬರು ಬಿ.ಎ ಮಾಡಿದ್ದಾರೆ, ಮತ್ತೊಬ್ಬರು ಕಾನೂನು ಡಿಪ್ಲೋಮಾ ಮಾಡಿದ್ದಾರೆ. ಅಲ್ಲದೇ, ಸಂಗೀತ ಕಲಿಕೆ, ಎಲೆಕ್ಟ್ರಿಲ್, ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತದೆ. ಕೈದಿಗಳು ಬದಲಾವಣೆ ಆಗಲು ಅವಕಾಶ ಇರುತ್ತದೆ ಎಂದು ಜಿ.ಪರಮೇಶ್ವರ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 2022ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಾಲ್ವರು ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಹಾಗೂ 2023ನೇ ಸಾಲಿನ 14 ಜನ ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ನೀಡಿ ಸನ್ಮಾನಿಸಲಾಯಿತು.
‘ಆಕಸ್ಮಿಕ ಘಟನೆಯಿಂದ ಜೈಲಿಗೆ ಬರಬೇಕಾಯಿತು: ಹದಿನೈದು ವರ್ಷಗಳಿಂದ ಜೈಲು ವಾಸ ಅನುಭವಿಸಿದ್ದೇನೆ. ಆಕಸ್ಮಿಕ ಘಟನೆಯಿಂದ ಜೈಲಿಗೆ ಬರಬೇಕಾಯಿತು. ನನ್ನ ಮಗಳ ಉನ್ನತ ವ್ಯಾಸಂಗದ ಗುರಿ ಸಾಧಿಸಲು ಆಗಲಿಲ್ಲ. ಜೈಲಿನಲ್ಲಿದ್ದುಕೊಂಡು ಬಿ.ಎ. ಪದವಿ ಪೂರ್ಣಗೊಳಿಸಿದ್ದೇನೆ. ಈ ದಿನವು ನನಗೆ ಪುನರ್ ಜನ್ಮವಿದ್ದಂತೆ. ಉತ್ತಮ ನಾಗರಿಕನಾಗಿ ಜೀವನ ಸಾಗಿಸುತ್ತೇನೆ’ ಎಂದು ಸನ್ನಡತೆ ಮೇಲೆ ಬಿಡುಗಡೆ ಹೊಂದಿದ ದಾನೇಶ್ ಎಂಬಾತ ಅಭಿಪ್ರಾಯ ಹಂಚಿಕೊಂಡರು.
ಜೈಲಿನ ಜಾಮರ್ ವ್ಯಾಪ್ತಿ ತಗ್ಗಿಸಲಾಗಿದೆ: ಜೈಲಿನ ಜಾಮರ್ನಿಂದ ಸುತ್ತ-ಮುತ್ತಲಿನ ಜನರಿಗೆ ಸಮಸ್ಯೆ ಆಗುತ್ತಿದೆ ಎಂಬ ಆರೋಪದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ಜಿ.ಪರಮೇಶ್ವರ್, ಬಳಹಷ್ಟು ಸಂದರ್ಭದಲ್ಲಿ ಜೈಲಿನ ಒಳಗೆ ಕೈದಿಗಳಿಗೆ ಫೋನ್ಗಳು ತಂದುಕೊಡುತ್ತಾರೆ. ಇದರಿಂದ ಕೈದಿಗಳು ಹೊರಗಿನವರೊಂದಿಗೆ ಮಾತನಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತದೆ. ಹೀಗಾಗಿ ಹೈರೆಸ್ಯೂಲೇಷನ್ ಜಾಮರ್ ಇರುತ್ತದೆ. ಇದು ಬೇರೆ-ಬೇರೆ ರಾಜ್ಯ, ದೇಶಗಳ ಕೈದಿಗಳು ಇದ್ದಾಗ ಅವಶ್ಯ ಕೂಡ ಇರುತ್ತದೆ. ರೆಸ್ಯೂಲೇಷನ್ ಜಾಮರ್ ವ್ಯಾಪ್ತಿಯು 800 ಮೀಟರ್ ಇರುತ್ತದೆ. ಸ್ವಭಾವಿಕವಾಗಿ ಕಾಂಪೌಂಡ್ನಿಂದ ಆಚೆ ಇರುವ ಮನೆಗಳಿಗೆ ತೊಂದರೆ ಆಗಿರುತ್ತದೆ. ಇದನ್ನು ತೆಗೆದು ಹಾಕಿದರೆ, ಕೈದಿಗಳು ದುರುಪಯೋಗ ಮಾಡಿಕೊಳ್ಳುತ್ತಾರೆ. ಹೆಚ್ಚು ಮಾಡಿದರೆ, ಮನೆಗಳಿಗೆ ತೊಂದರೆ ಎನ್ನುವಂತಾಗುತ್ತದೆ. ಹೀಗಾಗಿ ಜಾಮರ್ ವ್ಯಾಪ್ತಿಯು 100 ಮೀಟರ್ಗೆ ತಗ್ಗಿಸಿದ್ದೇವೆ ಎಂದು ಮಾಹಿತಿ ನೀಡಿದರು.
‘ಜೈಲಿನಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ಸಿಗುತ್ತಿದೆ ಎಂಬುದು ಸುಳ್ಳು ಆರೋಪವಾಗಿದೆ. ಊಟ ಉಪಚಾರ ವಿಚಾರದಲ್ಲಿ ಬೇರೆ ರೀತಿ ಅತಿಥ್ಯ ನೀಡಿಲ್ಲ. ಜೈಲಿನಲ್ಲಿರುವ ಎಲ್ಲರಂತೆಯೇ ದರ್ಶನ್ಗೆ ವ್ಯವಸ್ಥೆ ಇದೆ. ಬಿರಿಯಾನಿ ಕೊಟ್ಟರು ಎಂದು ಕೆಲವರು ಆರೋಪಿಸಿದ್ದಾರೆ. ಅಂತಹ ಯಾವುದೇ ಘಟನೆ ನಡೆದಿಲ್ಲ’
-ಡಾ.ಜಿ.ಪರಮೇಶ್ವರ್ ಗೃಹ ಸಚಿವ