ಸೆಲೆಬ್ರಿಟಿ ಪತ್ರಕರ್ತರಿಗಿಂತ ಆ್ಯಕ್ಟಿವಿಸ್ಟ್ ಪತ್ರಕರ್ತರು ಬೇಕಾಗಿದ್ದಾರೆ: ಅಬ್ದುಸ್ಸಲಾಮ್ ಪುತ್ತಿಗೆ

ಬೆಂಗಳೂರು : ಇಂದಿನ ಸಮಾಜಕ್ಕೆ ಸೆಲೆಬ್ರಿಟಿ ಪತ್ರಕರ್ತರಿಗಿಂತ ಹೋರಾಟ ಮನೋಭಾವದ, ನ್ಯಾಯದ ಪರ ವಕಾಲತ್ತು ವಹಿಸುವ ಆ್ಯಕ್ಟಿವಿಸ್ಟ್ ಪತ್ರಕರ್ತರ ಅಗತ್ಯವಿದೆ ಎಂದು ‘ವಾರ್ತಾಭಾರತಿ’ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಹೇಳಿದ್ದಾರೆ.
ಬುಧವಾರ ನಗರದ ಗಾಂಧಿ ಭವನ ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ-2026 ಹಾಗೂ ‘ಡಿಜಿಟಲ್ ಯುಗದಲ್ಲಿ ನಿಜ ಪತ್ರಕರ್ತರು ಯಾರು?’’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಯಾವುದೇ ಸಮಸ್ಯೆಯ ಕುರಿತು ಚರ್ಚೆ, ಸಂವಾದಗಳು ಆ ಸಮಸ್ಯೆಯ ಪರಿಹಾರದ ಮೊದಲ ಹೆಜ್ಜೆ. ಆ ಚರ್ಚೆ ದೊಡ್ಡ ಪ್ರಮಾಣದಲ್ಲಿ ನಿತ್ಯ ನಡೆಯುವಂತೆ, ದಾರಿ ತಪ್ಪದಂತೆ, ನೋಡಿಕೊಳ್ಳುವಾತನೇ ನಿಜವಾದ ಪತ್ರಕರ್ತ. ಇಂದು ಸಮಾಜಕ್ಕೆ ಅಂತಹ ಪತ್ರಕರ್ತರ ಅಗತ್ಯ ಇದೆ. ಆದರೆ, ಸೆಲೆಬ್ರಿಟಿ ಪತ್ರಕರ್ತರ ಉಪದೇಶ ಸಮಾಜಕ್ಕೆ ಇಂದು ಬೇಕಾಗಿಲ್ಲ. ಸಮಾಜ ಉಪದೇಶವನ್ನು ನಿರೀಕ್ಷಿಸುವುದೂ ಇಲ್ಲ. ಸಮಾಜ ಪತ್ರಕರ್ತರಿಂದ ನಿರೀಕ್ಷಿಸುವುದು ಹೋರಾಟದ ಮನೋಭಾವ, ಸತ್ಯ, ವಿಶ್ವಾಸಾರ್ಹ ಮಾಹಿತಿ ಹಾಗೂ ನ್ಯಾಯದ ಪರ ವಕಾಲತ್ತು ಎಂದು ಅವರು ಪ್ರತಿಪಾದಿಸಿದರು.
ಇವೆಲ್ಲನ್ನೂ ಬೇರೆಲ್ಲರಿಗಿಂತ ಪರಿಣಾಮಕಾರಿಯಾಗಿ ಮಾಡಬಲ್ಲವರು ಪತ್ರಕರ್ತರು ಮಾತ್ರ. ಅಂತಹವರೇ ಎಲ್ಲ ಯುಗಗಳಲ್ಲೂ ನೈಜ ಪತ್ರಕರ್ತರು ಎಂದ ಅವರು, ಮಾಧ್ಯಮ ರಂಗವು ಹಲವು ಸಂಧಿಕಾಲಗಳನ್ನು ಕಂಡಿದೆ. ಅವುಗಳನ್ನು ದಾಟಿ ಬೆಳೆದಿದೆ. ನಿಜವಾಗಿ ಮಾಧ್ಯಮಕ್ಕೆ ಮತ್ತು ಪತ್ರಕರ್ತನಿಗೆ ಕಾಲ, ತಂತ್ರಜ್ಞಾನ, ಯಂತ್ರ, ಸಾಧನ, ಉಪಕರಣಗಳು ಮುಖ್ಯವಲ್ಲ. ಅವೆಲ್ಲ ಬದಲಾಗುತ್ತಿರುತ್ತವೆ. ಆದರೆ ಜನಪರ ಮಾಧ್ಯಮದ ಹಾಗೂ ಸಂವೇದನಾಶೀಲ ಪತ್ರಕರ್ತನ ಮೌಲ್ಯ, ಬದ್ಧತೆ ಬದಲಾಗುವುದಿಲ್ಲ ಎಂದು ಅವರು ವಿಶ್ಲೇಷಿಸಿದರು.
ಜನಪರ ಮಾಧ್ಯಮ ಮತ್ತು ಪತ್ರಕರ್ತ ಎಲ್ಲ ಸನ್ನಿವೇಶಗಳಲ್ಲೂ ಸಮಾಜದ ಕನ್ನಡಿ ಮಾತ್ರವಲ್ಲದೆ, ಮಾರ್ಗದರ್ಶಿ ಮಿತ್ರನೂ ಆಗಿರುತ್ತಾನೆ. ಆಳುವವರು ಯಾರೇ ಇರಲಿ ಇವರು ಸದಾ ವಿಮರ್ಶಕರು. ಸ್ವತಃ ಜಾಗೃತರಾಗಿದ್ದು ಸಮಾಜವನ್ನು ಎಚ್ಚರಿಸಬೇಕಾಗಿದೆ. ಹಾಗೆಯೇ, ಜನಾಭಿಪ್ರಾಯವನ್ನು ಮೂಡಿಸುವವರು, ದಾರಿ ತಪ್ಪಿದಾಗ ತಿದ್ದುವವರಾಗಿರುತ್ತಾರೆ. ಸಮಾಜದಲ್ಲಿ ಚರ್ಚಾ ವಿಷಯ ಏನು ಎಂಬುದರ ಮೇಲೆ ಅವರ ದೃಷ್ಟಿ ಇರುತ್ತದೆ ಎಂದು ಅವರು ಹೇಳಿದರು.
ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದವರು ಖಾಸಗಿ ವಿಮಾನಗಳಲ್ಲಿ ಓಡಾಡುತ್ತಿದ್ದಾರೆ. ಆರ್ಬಿಐ ವರದಿ ಪ್ರಕಾರ 2014ರಿಂದ 2025ರ ನಡುವೆ ಬ್ಯಾಂಕ್ಗಳನ್ನು ವಂಚಿಸಿ 6 ಲಕ್ಷ ಕೋಟಿ ರೂಪಾಯಿಗಳನ್ನು ಲಪಟಾಯಿಸಿದ್ದಾರೆ. ಇದು ನಮ್ಮ ರಾಜ್ಯ ಸರಕಾರದ ಈ ಬಾರಿಯ ಬಜೆಟ್ ಮೊತ್ತಕ್ಕಿಂತ ಹೆಚ್ಚಾಗಿದೆ. ಮಾಧ್ಯಮಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಿದ್ದರೆ ಈ ವಂಚನೆ ಕುರಿತು ನಿತ್ಯ ಚರ್ಚೆ ನಡೆಯುತ್ತಿದ್ದವು. ಅದೇ ರೀತಿ ಈ ದೇಶದ 50% ಜನರು ಕೇವಲ ಮಾಸಿಕ 6000 ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಈ ಬಗ್ಗೆಯೂ ಪತ್ರಕರ್ತರು ಬರೆಯಬೇಕು ಎಂದು ಅವರು ತಿಳಿಸಿದರು.
ಕೆಲವು ದಶಕಗಳ ಅವಧಿಯಲ್ಲಿ ನೂರಾರು ದಿನಪತ್ರಿಕೆಗಳು ಮುಚ್ಚಿಹೋಗಿರುವುದು ವಾಸ್ತವ. ಆದರೆ, ದಿನಪತ್ರಿಕೆಗಳಿಗೆ ಸವಾಲಾಗಿ ಬಂದ ಟಿವಿ ಸುದ್ದಿ ವಾಹಿನಿಗಳ ಸ್ಥಿತಿ ಹೇಗಿದೆ ಎಂದು ನೋಡಿದರೆ 25 ವರ್ಷಗಳಲ್ಲಿಯೇ ನೂರಾರು ಸುದ್ದಿ ವಾಹಿನಿಗಳು ಬಾಗಿಲು ಜಡಿದಿವೆ. ಇತರ ಮಾಧ್ಯಮಗಳು ಕೂಡ ಮುಚ್ಚುವ ಅಂಚಿನಲ್ಲಿವೆ. ಹಾಗೆಯೇ, ಡಿಜಿಟಲ್ ವೇದಿಕೆಗಳು ಸುದ್ದಿ ವಾಹಿನಿಗಳಿಗೆ ಸವಾಲಾಗಿ ಬಂದವು. ಆದರೆ ಬರೀ 10 ವರ್ಷಗಳಲ್ಲಿ ನೂರಾರು ಡಿಜಿಟಲ್ ವೇದಿಕೆಗಳು ಚಾಪೆ ಮಡಚುತ್ತಿವೆ. ಆದರೆ, ಶತಾಯುಷಿ ಎನ್ನುವ ಶ್ರೇಯ ದಿನಪತ್ರಿಕೆಗಳಿಗೆ ಮಾತ್ರ ಈಗಲೂ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ ಎಂದು ಅಬ್ದು ಸ್ಸಲಾಮ್ ಪುತ್ತಿಗೆ ನುಡಿದರು.
ಪ್ರಾಸ್ತಾವಿಕವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ದಿನೇಶ್ ಗುಂಡೂರಾವ್, ತೆಲಂಗಾಣ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ.ಶ್ರೀನಿವಾಸ ರೆಡ್ಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳೆಮಲೆ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್.ಅನುಚೇತ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಡಾ.ಆರ್.ಪೂರ್ಣಿಮಾ, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ, ಎಂ, ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ ಸೇರಿದಂತೆ ಪ್ರಮುಖರಿದ್ದರು.






