ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸುವವರ ವಿರುದ್ಧ ಕ್ರಮ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ನಕಲಿ ಮತ್ತು ಸುಳ್ಳು ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುವವರ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಅರಣ್ಯ ಭೂಮಿ ಕಬಳಿಕೆ ಪ್ರಯತ್ನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ತಮ್ಮ ಕಚೇರಿಯಲ್ಲಿಂದು ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬೆಂಗಳೂರು ಕೆಂಗೇರಿ ಬಳಿಯ ಬಿಎಂ. ಕಾವಲು ಕಾಯ್ದಿಟ್ಟ ಅರಣ್ಯ ವ್ಯಾಪ್ತಿಯ ಸುಮಾರು 25 ಸಾವಿರ ಕೋಟಿ ರೂ. ಬೆಲೆಬಾಳುವ ಸುಮಾರು 482 ಎಕರೆ ಮೀಸಲು ಅರಣ್ಯ ಭೂಮಿ ರಕ್ಷಣೆಗೆ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿದರು.
ಎಂ.ಬಿ.ನೇಮಣ್ಣ ಗೌಡ ಎನ್ನುವವರು 2025ರ ಆಗಸ್ಟ್ 13ರಂದು ಹೈಕೋರ್ಟ್ ಗೆ ಅರ್ಜಿ ಹಾಕಿದ್ದು, 17 ದಿನಗಳಲ್ಲಿ ಅಂದರೆ ಆ.30ರಂದು ಉಚ್ಛ ನ್ಯಾಯಾಲಯ ಆದೇಶ ನೀಡಿರುವ ಬಗ್ಗೆ ಅಚ್ಚರಿ ಇದ್ದು, ಈ ತೀರ್ಪನ್ನು ಪ್ರಶ್ನಿಸಿ ಕೂಡಲೇ ಮೇಲ್ಮನವಿ ಸಲ್ಲಿಸಬೇಕು ಎಂದು ಅವರು ಉಲ್ಲೇಖಿಸಿದರು.
ಹಾಸನ ವಿಭಾಗದ ಇನಾಂ ರದ್ದು ಕುರಿತ ನ್ಯಾಯಾಲಯದ ವಿಶೇಷ ಜಿಲ್ಲಾಧಿಕಾರಿ ಬೆಂಗಳೂರು ಬಿ.ಎಂ.ಕಾವಲು ಅರಣ್ಯ ಭೂಮಿಯನ್ನು 1974ರಲ್ಲಿ ತಮಗೆ 532 ಎಕರೆ ಮಂಜೂರು ಮಾಡಿರುತ್ತಾರೆಂದು ದಾಖಲೆ ಸಲ್ಲಿಸಿ ಆದೇಶ ಪಡೆದಿದ್ದಾರೆ. ಆದರೆ ಈ ಭೂಮಿ 1933ರಲ್ಲಿ ಸೆಕ್ಷನ್ 4 ಆಗಿ, 1935ರಲ್ಲಿ ಕಾಯ್ಡಿಟ್ಟ ಅರಣ್ಯ ಎಂದು ಅಧಿಸೂಚನೆಯಾಗಿದೆ. ಬೆಂಗಳೂರಿನ ಅಧಿಸೂಚಿತ ಅರಣ್ಯ ಭೂಮಿಯನ್ನು ಹಾಸನ ವಿಶೇಷ ಜಿಲ್ಲಾಧಿಕಾರಿ ಹೇಗೆ ಮಂಜೂರು ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.
ಮಿಗಿಲಾಗಿ 532 ಎಕರೆಯನ್ನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ, ಭೂ ಪರಿಮಿತಿ ಕಾಯ್ದೆ ಅನ್ವಯಿಸುವುದಿಲ್ಲವೇ ಈ ಎಲ್ಲ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದು ಸಮರ್ಥವಾಗಿ ವಾದ ಮಂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರಕಾರದ ಅಭಿಯೋಜಕರು ಕೊನೆ ಕ್ಷಣದವರೆಗೂ ಈ ಪ್ರಕರಣದಲ್ಲಿ ಮಾಹಿತಿ ನೀಡದೆ ಇರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಲವು ಅರ್ಹ ಪ್ರಕರಣದಲ್ಲೂ ಮೇಲ್ಮನವಿಗೆ ಸೂಕ್ತ ಪ್ರಕರಣ ಅಲ್ಲ ಎಂದು ಸರಕಾರಿ ವಕೀಲರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಬೇಸರ ತಂದಿದೆ ಎಂದು ಸಭೆಯಲ್ಲಿ ಸಚಿವರು ಹೇಳಿದರು.
ಅರಣ್ಯ ಭೂಮಿ ಕಬಳಿಕೆ ಮತ್ತು ಒತ್ತುವರಿ ಪ್ರಕರಣಗಳಲ್ಲಿ, ಸಮರ್ಥ ವಕೀಲರನ್ನು ನೇಮಕ ಮಾಡಲು ಮತ್ತು ಪರಿಣಾಮಕಾರಿಯಾಗಿ ವಾದ ಮಂಡಿಸುವಂತೆ ಸರಕಾರಿ ಅಭಿಯೋಜಕರುಗಳಿಗೆ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರಿಗೆ ಸೂಚಿಸಲು ಸಭೆಯಲ್ಲಿ ಹಾಜರಿದ್ದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ತಿಳಿಸಿದರು.
ಅರಣ್ಯ ಒತ್ತುವರಿ ಪ್ರಕರಣ ಹೆಚ್ಚಿರುವ 6-7 ಜಿಲ್ಲೆಗಳಲ್ಲಿ ಇಲಾಖೆಯಿಂದಲೇ ಪ್ರತ್ಯೇಕವಾಗಿ ವಕೀಲರನ್ನು ನೇಮಕ ಮಾಡಿಕೊಂಡು, ಅವರೊಂದಿಗೆ ವಾರಕ್ಕೊಮ್ಮೆ ಸಭೆ ನಡೆಸಿ, ಪ್ರಗತಿ ತಿಳಿಯುವುದು ಅಗತ್ಯವಾಗಿದೆ. ಹೀಗಾಗಿ ವಕೀಲರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ ಸೇರಿದಂತೆ ಪ್ರಮುಖರಿದ್ದರು.







