ಬಂಜಾರ ಸಮುದಾಯದ ಬೇಡಿಕೆ ಈಡೇರಿಸಲು ಕ್ರಮ: ಸಿಎಂ ಭರವಸೆ

ಬೆಂಗಳೂರು, ಆ.25: ಬಂಜಾರ ಸಮುದಾಯದ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.
ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಬಂಜಾರ ಸಮುದಾಯ ಮುಖಂಡರು ಸಿಎಂ ಭೇಟಿ ಮಾಡಿ, ತಮ್ಮ ಸಮುದಾಯದ ಬೇಡಿಕೆಗಳನ್ನು ಸಲ್ಲಿಸಿದರು. ಬಿಜೆಪಿ ಸರಕಾರ ತಮ್ಮ ಅಸಂವಿಧಾನಿಕ ನಡೆಗಳ ಮೂಲಕ ಮೀಸಲಾತಿಯನ್ನು ದುರ್ಬಲಗೊಳಿಸಲು ಯತ್ನಿಸಿದ ಸಮಯದಲ್ಲಿ ಅವರ ಆ ನೀತಿಗಳನ್ನು ವಿರೋಧಿಸಿ ರಾಜ್ಯವ್ಯಾಪಿ ಬಂಜಾರ ಸಂಘಟನೆಗಳು ಪ್ರತಿಭಟಿಸಿದ ಸಮಯದಲ್ಲಿ ಸಮುದಾಯದ ಕಾರ್ಯಕರ್ತರ ಮೇಲೆ ರಾಜ್ಯವ್ಯಾಪಿ ವಿನಾಕಾರಣ ದಾಖಲಾದ ಪ್ರಕರಣಗಳನ್ನು ರಾಜ್ಯ ಸರಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
2019ರಲ್ಲಿ ಕಲಬುರಗಿಯ ವಿಮಾನನಿಲ್ದಾಣವನ್ನು ಸ್ಥಾಪಿಸುವ ಸಮಯದಲ್ಲಿ ಬಂಜಾರರ ಕುಲಗುರು ಶ್ರೀ ಸೇವಾಲಾರ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು. ಅದೇ ಪ್ರದೇಶದಲ್ಲಿ ಸೇವಾಲಾಲರ ದೇವಸ್ಥಾನ, ಗ್ರಂಥಾಲಯ, ಮ್ಯೂಸಿಯಂ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಬಂಜಾರ ಭಾಷೆಯನ್ನು ಸಂವಿಧಾನದ 8ನೆ ಪರಿಚ್ಚೇದದಲ್ಲಿ ಸೇರಿಸಬೇಕು. ಇದರ ಕುರಿತಂತೆ ಅಧ್ಯಯನ ಮತ್ತು ಪ್ರಸ್ತಾವನೆಯನ್ನು ತಯಾರಿಸಲು ಅನುವಾಗುವಂತೆ ಭಾಷಾ ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಹೇಳಿದರು.
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು. ಆ ಮೂಲಕ ಬಂಜಾರ ಸಮುದಾಯದ ಅಭಿವೃದ್ಧಿ ಕಾರ್ಯಯೋಜನೆಗಳನ್ನು ರೂಪಿಸಬೇಕು. ಬಂಜಾರ ಸಮುದಾಯಕ್ಕೆ ಒಂದು ಮೆಡಿಕಲ್ ಕಾಲೇಜು/ವೃತ್ತಿಪರ ಕಾಲೇಜು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಬಂಜಾರ ಸಮುದಾಯದ ಜನರು ಕೂಲಿ ಅರಸಿ ದೂರದ ಸ್ಥಳಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಅಲ್ಲಿಯವರೆಗೆ ವಲಸೆ ಹೋಗುವವರ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆಯಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್, ರಂಗತಜ್ಞ ಡಾ.ಎ.ಆರ್.ಗೋವಿಂದ ಸ್ವಾಮಿ, ವಕೀಲ ಅನಂತ ನಾಯ್ಕ್ ಸೇರಿ ಹಲವರಿದ್ದರು.







