ಮಾನವೀಯತೆಯನ್ನು ಮೀರಿ ಯಾವ ಆಟ ಅಥವಾ ರಾಜಕೀಯ ಖಂಡಿತ ಇರಲಾರದು : ನಟ ಕಿಶೋರ್ ಕುಮಾರ್

ಕಿಶೋರ್ ಕುಮಾರ್
ಬೆಂಗಳೂರು : ಏಶ್ಯಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ ತಂಡದ ಗೆಲುವನ್ನು ʼಆಪರೇಷನ್ ಸಿಂಧೂರʼ ಕಾರ್ಯಾಚರಣೆಗೆ ಹೋಲಿಕೆ ಮಾಡಿದ ಪ್ರಧಾನಿ ಮೋದಿಯನ್ನು ಟೀಕಿಸಿದ ನಟ ಕಿಶೋರ್ ಕುಮಾರ್, ʼಮಾನವೀಯತೆಯನ್ನು ಮೀರಿ ಯಾವ ಆಟ ಅಥವಾ ರಾಜಕೀಯ ಖಂಡಿತ ಇರಲಾರದುʼ ಹೇಳಿದ್ದಾರೆ.
ಈ ಕುರಿತ ಪ್ರಧಾನಿಯ ಪೋಸ್ಟ್ ಅನ್ನು ಹಂಚಿಕೊಂಡು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ನಟ ಕಿಶೋರ್, ರಾಜಕೀಯ ಲಾಭಕ್ಕೆ ಯಾವುದೇ ಮಟ್ಟಕ್ಕೂ ಇಳಿಯುವ ಮಹಾಮಾನವನ ಪೋಸ್ಟ್ ಇದು. ಇದು ಅವರ ಪಕ್ಷದ ಕೀಳು ಮನೋಭಾವವನ್ನು ಬಯಲು ಮಾಡಿದೆ.
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಸಂತ್ರಸ್ತರು ಮತ್ತು ಹುತಾತ್ಮರನ್ನು ಮರೆತು ಕ್ರೀಡಾ ಮನೋಭಾವದ ಸೋಗಿನಲ್ಲಿ ಆಡಿದ ಹಣದ ಆಟ, ಕ್ರೀಡಾ ಮನೋಭಾವ, ಪ್ರಧಾನಿ ಕಚೇರಿಯ ಘನತೆ, ದೇಶದ ಘನತೆ ಮತ್ತು ದೇಶದ ಕ್ರಿಕೆಟ್ ತಂಡದ ಘನತೆಯನ್ನು ನಾಶಪಡಿಸಿದೆ. ಆಟದಲ್ಲಿ ಗೆಲುವು ಸೋಲು ಸಹಜ. ಗೆದ್ದಿರುವುದು ಸಂತೋಷ. ಆದರೆ, ಒಂದು ವೇಳೆ ನಮ್ಮ ತಂಡ ಸೋತಿದ್ದರೆ? ಅದನ್ನು ಯಾವ ಕಾರ್ಯಾಚರಣೆಗೆ ಹೋಲಿಸಿ ಈ ಮಹಾಮಾನವ ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನೋ ಗೊತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.







