ನಟ ಮಾಸ್ಟರ್ ಆನಂದ್ ಪುತ್ರಿ ಹೆಸರಿನಲ್ಲಿ ವಂಚನೆ: ಆರೋಪಿ ವಶಕ್ಕೆ
![ನಟ ಮಾಸ್ಟರ್ ಆನಂದ್ ಪುತ್ರಿ ಹೆಸರಿನಲ್ಲಿ ವಂಚನೆ: ಆರೋಪಿ ವಶಕ್ಕೆ ನಟ ಮಾಸ್ಟರ್ ಆನಂದ್ ಪುತ್ರಿ ಹೆಸರಿನಲ್ಲಿ ವಂಚನೆ: ಆರೋಪಿ ವಶಕ್ಕೆ](https://www.varthabharati.in/h-upload/2023/07/13/1166932-va.webp)
ಫೋಟೊ - (ಮಾಸ್ಟರ್ ಆನಂದ್- ಪುತ್ರಿ ವಂಶಿಕಾ)
ಬೆಂಗಳೂರು, ಜು.13: ಕನ್ನಡ ಚಲನಚಿತ್ರ ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪ ಹೆಸರಿನಲ್ಲಿ ವಂಚನೆ ಎಸಗಿರುವ ಪ್ರಕರಣ ಸಂಬಂಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ನಿಶಾ ನರಸಪ್ಪ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ನಿಶಾ ನರಸಪ್ಪ ಎಂಬ ಹೆಸರಿನ ಮಹಿಳೆಯು, ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರನ್ನು ಹೇಳಿಕೊಂಡು ಅಭಿನಯ ತರಬೇತಿ ಹಾಗೂ ಮಕ್ಕಳ ಫೋಟೋ ಶೂಟ್ ಮಾಡಿಸುವುಸುವುದಾಗಿ ವಂಚನೆ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಜಾಹೀರಾತು ಚಿತ್ರೀಕರಣ, ಕಾರ್ಯಕ್ರಮಗಳು, ಮಕ್ಕಳ ಟ್ಯಾಲೆಂಟ್ ಶೋ ನೆಪದಲ್ಲಿ ನಿಮ್ಮ ಮಕ್ಕಳಿಗೂ ಚ್ಯಾನ್ಸ್ ಕೊಡಿಸುವುದಾಗಿ ಹೇಳಿ ನೂರಾರು ಮಂದಿ ಪೋಷಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚನೆ ಎಸಗಲಾಗಿದೆ. ಈ ಸಂಬಂಧ ಹಣ ಕಳೆದುಕೊಂಡಿದ್ದ ಪೋಷಕರು ನಿಶಾ ನರಸಪ್ಪಳನ್ನು ಹಿಡಿದು ಸದಾಶಿವನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಈ ವಂಚನೆ ಸಂಬಂಧ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ನಿಶಾ ನರಸಪ್ಪಳನ್ನು ವಶಕ್ಕೆ ಪಡೆದಿರುವ ಸದಾಶಿವನಗರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.