ಕೇಂದ್ರ ಸರಕಾರ ರೂಪಿಸುತ್ತಿರುವ ಕಾಯಿದೆಗಳು ಜನ ವಿರೋಧಿ: ಹಿರಿಯ ಪತ್ರಕರ್ತ ಪಿ.ಸಾಯಿನಾಥ್
ಬಹುರೂಪಿ ಪ್ರಕಾಶನದ ‘ಕೊನೆಯ ಹೀರೋಗಳು' ಕೃತಿ ಬಿಡುಗಡೆ

ಬೆಂಗಳೂರು, ಅ.1: ‘ಕೇಂದ್ರ ಸರಕಾರವು ರೂಪಿಸುತ್ತಿರುವ ಕಾಯಿದೆಗಳು ಜನ ವಿರೋಧಿಯಾಗಿದ್ದು, ನಮ್ಮ ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಆವರಣದ ಡಾ. ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ 'ಬಹುರೂಪಿ' ಪ್ರಕಾಶನದ ವತಿಯಿಂದ ಹಮ್ಮಿಕೊಂಡಿದ್ದ ‘ಕೊನೆಯ ಹೀರೋಗಳು' ಅನುವಾದಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದರು.
ನಮ್ಮ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ನಾಶವನ್ನು ತಡೆಯುವುದು ತುರ್ತು ಅಗತ್ಯವಾಗಿದೆ. ಕೇಂದ್ರ ಸರಕಾರದ ನೀತಿಗಳು ಸಮಾಜವನ್ನು ನಿಧಾನವಾಗಿ ಉಸಿರುಗಟ್ಟಿಸುತ್ತಿದೆ. ರೈತರು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ರೈತರ ಹಕ್ಕುಗಳನ್ನು ರಕ್ಷಿಸುವುದು ಮಾತ್ರವಾಗಿರಲಿಲ್ಲ, ಅದು ಪರೋಕ್ಷವಾಗಿ ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ರಕ್ಷಿಸುವ ಚಳವಳಿಯಾಗಿತ್ತು ಎಂದು ನೆನಪಿಸಿಕೊಂಡರು.
ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಆದರೆ ಬಿಡುಗಡೆ ಸಿಕ್ಕಿಲ್ಲ ಎನ್ನುವುದು ಬಹುತೇಕ ಸ್ವಾತಂತ್ರ್ಯ ಹೋರಾಟಗಾರರ ಅಳಲು. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕೊನೆಗೊಂಡಾಗ, ಜಾತಿ ತಾರತಮ್ಯಗಳಿಲ್ಲದೆ ಎಲ್ಲರಿಗೂ ಸಂಪನ್ಮೂಲಗಳು ಸಮಾನವಾಗಿ ಹಂಚಿಕೆಯಾದಾಗ ಸಂಪೂರ್ಣ ಬಿಡುಗಡೆ ಸಿಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಆದರೆ, ಬಿಡುಗಡೆ ಎಂಬುದರ ವ್ಯಾಪ್ತಿ ತುಂಬಾ ಹಿರಿದಾಗಿದೆ. ಇದನ್ನು ಪಡೆದುಕೊಳ್ಳಲು ನಾವೆಲ್ಲರೂ ಒಂದಾಗಬೇಕಿದೆ. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ಹಲ್ಲೆಗಳನ್ನು ತಡೆಗಟ್ಟಬೇಕಾಗಿದೆ ಎಂದು ಕರೆ ನೀಡಿದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವರೆಲ್ಲರನ್ನೂ ಕಡೆಗಣಿಸಲಾಗಿದೆ. ಮನೆಗಳಲ್ಲಿ ಅಡುಗೆ ಮಾಡಿಕೊಂಡು, ಕುಟುಂಬವನ್ನು ನಿರ್ವಹಿಸುವ ಜತೆಗೆ ಕೃಷಿ ಕಾರ್ಯವನ್ನೂ ಮಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷವಾಗಿ ಮಹಿಳೆಯರು ಸಹಕರಿಸಿದ್ದಾರೆ. ಕೆಲವೊಮ್ಮೆ ಬಂದೂಕು ಹಿಡಿದುಕೊಂಡು, ಇಲ್ಲವೇ ಶಸ್ತ್ರಾಸ್ತ್ರಗಳ ಸಾಗಾಟದಂತ ಕಾರ್ಯಗಳಲ್ಲೂ ನೆರವಾಗಿದ್ದಾರೆ. ಆದರೆ, ಇವರು ಯಾರೂ ಗುಂಡು ಹಾರಿಸಿಲ್ಲ, ಜೈಲಿಗೆ ಹೋಗಿಲ್ಲ ಎಂಬ ಕಾರಣಕ್ಕಾಗಿ ಅಧಿಕಾರಶಾಹಿಯ ಕೆಂಪುಪಟ್ಟಿ ನಿಲುವು ಅವರು ಯಾರಿಗೂ ಸ್ವಾತಂತ್ರ್ಯ ಯೋಧರು ಎಂಬ ಸ್ಥಾನಮಾನ ಸಿಗದಂತೆ ಮಾಡಿತು ಎಂದು ಪಿ.ಸಾಯಿನಾಥ್ ಬೇಸರ ವ್ಯಕ್ತಪಡಿಸಿದರು.
ಹಿರಿಯ ವಿದ್ವಾಂಸ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘1990ರ ದಶಕದಲ್ಲಿ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರ ನೇತೃತ್ವದಲ್ಲಿ ಕೇಂದ್ರ ವಿತ್ತ ಸಚಿವರಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಮುಕ್ತ ನೀತಿ ಜಾರಿಗೊಳಿಸಿದರು. ಇದರ ಜತೆಗೆ ಲಾಲ್ ಕೃಷ್ಣ ಅಡ್ವಾಣಿಯವರು ರಥಯಾತ್ರೆ ನಡೆಸಿದರು. ಈ ಎರಡು ಘಟನೆಗಳು ಇಡೀ ದೇಶವನ್ನು ಆಳವಾಗಿ ಘಾಸಿಗೊಳಿಸಿವೆ. ಈ ಗಾಯಗಳು ಮಾಗಲು ತುಂಬಾ ಸಮಯ ಬೇಕಾಗುತ್ತದೆ ಎಂದು ಹೇಳಿದರು.
1992ರ ನಂತರದಲ್ಲಿ ರಾಷ್ಟ್ರದಲ್ಲಿ ಬೌದ್ಧಿಕ ಸ್ಥಿತ್ಯಂತರಗಳು ಉಂಟಾಗಿವೆ. ಅದುವರೆಗೂ ಸಮಾಜವಾದ, ಸಮಾನತೆ ಎಂದು ಸಂವಿಧಾನಿಕ ಪರಿಭಾಷೆಯಲ್ಲಿ ಮಾತನಾಡುತ್ತಿದ್ದವರು, ಮತೀಯ ಭಾಷೆಯಲ್ಲಿ ಮಾತನಾಡಲು ಆರಂಭಿಸಿದರು. ಆದರೆ ಪಿ. ಸಾಯಿನಾಥ್ ಅವರ ಕೊನೆಯ ಹೀರೋಗಳು ಕೃತಿಯಲ್ಲಿರುವ 16 ಮಂದಿ ಸ್ವಾತಂತ್ರ್ಯ ಯೋಧರು ಎಂದಿಗೂ ಇಂಥ ಸ್ಥಿತ್ಯಂತರಕ್ಕೆ ಒಳಗಾಗಲಿಲ್ಲ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ನಿಲುಗಳು, ತಾವು ರೂಢಿಸಿಕೊಂಡಿದ್ದ ಗಾಂಧಿವಾದದ ಅಂಶಗಳನ್ನು ಆಧರಿಸಿ ಜೀವನ ಸಾಗಿಸಿದರು ಎಂದು ಹೇಳಿದರು.
ರಾಜ್ಯ ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಮಾತನಾಡಿ, ದಾಖಲೆಗಳಲ್ಲಿ ಇಲ್ಲದಿರುವ ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ದನಿಯಾದದ್ದು ಸಾಯಿನಾಥ್ ಅವರ ವಿಶೇಷ. ಸ್ವಾತಂತ್ರ್ಯ ಹೋರಾಟದ ಈ ಕಾಲಾಳು ಯೋಧರಿಂದ ಸ್ಫೂರ್ತಿ ಪಡೆಯೋಣ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಪಿ.ಸಾಯಿನಾಥ್ ಬರೆದಿರುವ ಜಿ.ಎನ್.ಮೋಹನ್ ಅವರ ಕನ್ನಡಕ್ಕೆ ಅನುವಾದಿಸಿರುವ ‘ಕೊನೆಯ ಹೀರೋಗಳು' ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಅನುವಾದಕ ಜಿ.ಎನ್. ಮೋಹನ್, ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷ ಎನ್.ಆರ್.ವಿಶುಕುಮಾರ್, ಸಂಸ್ಕೃತಿ ಚಿಂತಕಿ ಡಾ ವಿಜಯಮ್ಮ, ಬಹುರೂಪಿಯ ಸಂಸ್ಥಾಪಕಿ ಶ್ರೀಜಾ ವಿ.ಎನ್. ಉಪಸ್ಥಿತರಿದ್ದರು.
‘1992ರಿಂದ 2017ರ ನಡುವೆ ರಾಷ್ಟ್ರದಾದ್ಯಂತ 17 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜತೆಗೆ ಬಡತನ ಹೆಚ್ಚಾಗುತ್ತಲೇ ಹೋಗುತ್ತಿದೆ. ಆದರೆ, ಮಾಧ್ಯಮಗಳು ಈ ಬಗ್ಗೆ ಚಕಾರವೆತ್ತದೆ, ಈ ಯಾವುದೇ ವಿಷಯಗಳಿಗೆ ಪ್ರಾಮುಖ್ಯತೆ ಕೊಡದೆ, ಬಂಡವಾಳಶಾಹಿಗಳ ಪರವಾದ ನಿಲುವು ಪ್ರಕಟಪಡಿಸುತ್ತಾ, ತಮ್ಮ ಜವಾಬ್ದಾರಿ ಮರೆಯುತ್ತಿವೆ. ಇದು ಜಾಗತೀಕರಣ ಕರಾಳತೆಗೆ ಹಿಡಿದ ಕೈಗನ್ನಡಿ’
-ಪ್ರೊ.ಪುರುಷೋತ್ತಮ ಬಿಳಿಮಲೆ, ಹಿರಿಯ ವಿದ್ವಾಂಸ







