ಆದಿತ್ಯ ಎಲ್-1 ಉಡಾವಣೆ | ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಸೌರ ವಿಜ್ಞಾನಿಗಳೊಂದಿಗೆ ಸಂವಾದ
![ಆದಿತ್ಯ ಎಲ್-1 ಉಡಾವಣೆ | ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಸೌರ ವಿಜ್ಞಾನಿಗಳೊಂದಿಗೆ ಸಂವಾದ ಆದಿತ್ಯ ಎಲ್-1 ಉಡಾವಣೆ | ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಸೌರ ವಿಜ್ಞಾನಿಗಳೊಂದಿಗೆ ಸಂವಾದ](https://www.varthabharati.in/h-upload/2023/09/02/1186449-2bnp-16.webp)
ಬೆಂಗಳೂರು, ಸೆ.2: ನಗರದ ಜವಾಹರ್ ಲಾಲ್ ನೆಹರೂ ತಾರಾಲಯದಲ್ಲಿ ಆದಿತ್ಯ ಎಲ್-1 ಬಗ್ಗೆ ಸೌರ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಶನಿವಾರದಂದು ಆಯೋಜಿಸಲಾಗಿತ್ತು. ಬೆಳಗ್ಗೆ 11.50ಕ್ಕೆ ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್-1 ನೌಕೆ ಸೂರ್ಯನಲ್ಲಿಗೆ ಯಶಸ್ವಿಯಾಗಿ ಉಡಾವಣೆಯಾಗುವ ನೇರಪ್ರಸಾರದ ವಿವರಣೆ ನೀಡಲಾಯಿತು.
ಇಸ್ರೋ ಮಾಜಿ ಹಿರಿಯ ವಿಜ್ಞಾನಿ ಡಾ. ಬಿ. ಆರ್. ಗುರುಪ್ರಸಾದ್ ಮಾತನಾಡಿ, ಇಸ್ರೋ ಅಧ್ಯಕ್ಷ ಸೋಮನಾಥ್ ಘೋಷಿಸಿದಂತೆ ಆದಿತ್ಯ ಎಲ್-1 ಯಶಸ್ವಿಯಾಗಿ ಉಡಾವಣೆಯಾಗಿದೆ. ಇದೀಗ ತನ್ನ ನಿಗದಿತ ಗಮ್ಯದತ್ತ ಸಾಗುತ್ತಿದೆ. ಈ ಮೂಲಕ ನಮ್ಮ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಮೈಲಿಗಲ್ಲು ತಲುಪಿದೆ ಎಂದು ಅವರು ಹೇಳಿದರು.
ಆದಿತ್ಯ ಎಲ್-1 ಸೂರ್ಯನ ಮಧ್ಯೆಯಿರುವ ಲಾಂಗ್ರೇಜ್ ಪಾಯಿಂಟ್ 1 ತಲುಪಲು ನಾಲ್ಕು ತಿಂಗಳು ಸಮಯ ಬೇಕಾಗುತ್ತದೆ. ಮುಂದಿನ 5 ವರ್ಷಗಳ ಕಾಲ ಆದಿತ್ಯ ಎಲ್-1 ಮೂಲಕ ಇಸ್ರೋ ಸೂರ್ಯನ ಬಗ್ಗೆ ಅಧ್ಯಯನ ನಡೆಸಲಿದೆ. ಸೂರ್ಯನ ಕಿರಣಗಳು, ಸೂರ್ಯನ ಮೇಲ್ಮೈ, ಸೂರ್ಯನ ಶಾಖ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ ಎಂದು ಅವರು ವಿವರಿಸಿದರು.
ಈವರೆಗೂ ಆಮೆರಿಕಾದ ನಾಸಾ, ಯೂರೋಪ್ ಬಾಹ್ಯಾಕಾಶ ಏಜೆನ್ಸಿಗಳಿಂದ ಸೂರ್ಯನ ಬಗ್ಗೆ ಅಧ್ಯಯನ ನಡೆಸಲಾಗಿದೆ. 7 ಪೇಲೋಡ್ಗಳನ್ನು ಹೊತ್ತು ಸೂರ್ಯನ ಲಾಗ್ರಾಂಗಿಯನ್ ಪಾಯಿಂಟ್ ಭೂಮಿಯಿಂದ ಅಂದಾಜು 15 ಲಕ್ಷ ಕಿ.ಮಿ.ದೂರದಲ್ಲಿದ್ದು, ಅಲ್ಲಿಗೆ ತಲುಪಲು 120 ದಿನ ಅಂದರೆ, ಸುಮಾರು 4 ತಿಂಗಳು ಸಮಯ ತೆಗೆದುಕೊಳ್ಳುತ್ತದೆ. ನಂತರ ಹಲೋ ಕಕ್ಷೆಯನ್ನು ತಲುಪಲಿದೆ. ಆದಿತ್ಯ ಎಲï-1 ಸೂರ್ಯನ ಬಳಿ ಹೋದ ನಂತರದಲ್ಲಿ ಅಲ್ಲಿನ ಸಾಕಷ್ಟು ಮಾಹಿತಿಗಳನ್ನು ಚಿತ್ರ ಹಾಗೂ ವಿಡಿಯೋಗಳ ಮೂಲಕ ನಮಗೆ ಕಳುಹಿಸಿಕೊಡಲಿದೆ ಎಂದರು.
ಇನ್ನು ತಾರಾಲಯದಲ್ಲಿ ಆದಿತ್ಯ ಎಲï-1 ಉಡಾವಣೆಯಾಗಿ ಸೂರ್ಯನ ಹತ್ತಿರ ಹೇಗೆ ಚಲಿಸುತ್ತದೆ ಎಂಬುದರ ಬಗ್ಗೆ ಡೆಮೋ ಮಾಡಲಾಗಿತ್ತು. ಮತ್ತು ಆದಿತ್ಯ ಎಲï-1 ಉಡಾವಣೆಯನ್ನು ನೋಡುವುದಕ್ಕೆ ಸಾರ್ವಜನಿಕರಿಗೆ ಎಲïಇಡಿ ಪರದೆಯ ಮೂಲಕ ಅವಕಾಶ ಮಾಡಿಕೊಡಲಾಗಿತ್ತು. ಇದನ್ನು ನೋಡೋದಕ್ಕೆ ನೆಹರು ತಾರಾಲಯಕೆ ಸಾಕಷ್ಟು ಜನ ಬಂದಿದ್ದರು.
ಆದಿತ್ಯ ಪ್ರಾಜೆಕ್ಟ್ ಐಐಎ ಸಂಸ್ಥೆಯ ಪ್ರೊ.ಜಗದೇವ್ ಸಿಂಗ್, ಉದಯಪುರ ಸೌರ ವೀಕ್ಷಣಾಲಯದ ಮಾಜಿ ಮುಖ್ಯಸ್ಥ ಪ್ರೊ.ಪಿ ವೆಂಕಟಕೃಷ್ಣನ್, ಜೆಎನ್ಪಿ ವಿಸಿಟಿಂಗ್ ಫ್ಯಾಕಲ್ಟಿ ಎಚ್.ಆರ್.ಮಧುಸೂದನ್ ಸಂವಾದದಲ್ಲಿ ಭಾಗಿಯಾಗಿದ್ದರು.