ಕಾಂಗ್ರೆಸ್ನಲ್ಲಿ ಟಾರ್ಗೆಟ್ ರಾಜಕೀಯಕ್ಕೆ ಕಡಿವಾಣ ಹಾಕದಿದ್ದರೆ ಹೋರಾಟ : ಅಹಿಂದ ಎಚ್ಚರಿಕೆ

ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು ಮತ್ತು ದಲಿತ(ಅಹಿಂದ) ಸಮುದಾಯದ ಮುಖಂಡರ ಮೇಲೆ ನಡೆಯುತ್ತಿರುವ ಟಾರ್ಗೆಟ್ ರಾಜಕೀಯಕ್ಕೆ ಕಡಿವಾಣ ಹಾಕದಿದ್ದರೆ, ಹೊಸದಿಲ್ಲಿಯಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯಾಧ್ಯಕ್ಷ ಕೆ.ಎಚ್.ಮೋಹನ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಅಹಿಂದ ಸಮುದಾಯದ ಪಾತ್ರವನ್ನು ಯಾರೂ ನಿರಾಕರಿಸಲಾರರು. ಅಹಿಂದ ಸಮುದಾಯಗಳು ಒಗ್ಗೂಡಿ ನೀಡಿದ ಬೆಂಬಲವೇ ಈ ಸರಕಾರದ ಆಧಾರಸ್ತಂಭವಾಗಿದೆ. ಆದರೆ, ಸರಕಾರ ರಚನೆಯಾದ ನಂತರ ಇದೇ ಸಮುದಾಯಗಳ ನಾಯಕತ್ವವನ್ನು ಕಡೆಗಣಿಸುವುದು, ಅವರನ್ನು ರಾಜಕೀಯವಾಗಿ ದುರ್ಬಲಗೊಳಿಸುವ ಕ್ರಮಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಇತ್ತೀಚಿನ ಘಟನೆಗಳನ್ನು ಅವಲೋಕಿಸಿದರೆ ಅಹಿಂದ ಸಮುದಾಯದಿಂದ ಬೆಳೆದ ನಾಯಕರನ್ನು ವ್ಯವಸ್ಥಿತವಾಗಿ ಗುರಿ ಮಾಡುವ ಪ್ರವೃತ್ತಿ ಗೋಚರಿಸುತ್ತದೆ. ಸಚಿವರಾಗಿದ್ದ ಕೆ.ಎನ್.ರಾಜಣ್ಣ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮೇಲೆ ತೆಗೆದುಕೊಳ್ಳಲಾದ ಕ್ರಮವಾಗಲಿ, ಇವೆಲ್ಲವೂ ಸಮರ್ಪಕ ಪ್ರಕ್ರಿಯೆಗಳನ್ನು ಅನುಸರಿಸದೇ ನಡೆದಿರುವುದು ಪ್ರಶ್ನಾರ್ಹವಾಗಿದೆ. ಇದೇ ರೀತಿಯಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್ರನ್ನು ರಾಜಕೀಯವಾಗಿ ಗುರಿ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದು ಮೋಹನ್ ಕುಮಾರ್ ತಿಳಿಸಿದರು.
ಈ ಘಟನೆಗಳು ವೈಯಕ್ತಿಕ ಮಟ್ಟದ ವಿಷಯಗಳಲ್ಲ. ಇವುಗಳ ಹಿಂದೆ ಪಟ್ಟಭದ್ರ ಶಕ್ತಿಗಳ ಪ್ರಭಾವ ಹಾಗೂ ಅಹಿಂದ ನಾಯಕತ್ವವನ್ನು ದುರ್ಬಲಗೊಳಿಸುವ ಸಂಯೋಜಿತ ಪ್ರಯತ್ನಗಳ ಸುಳಿವು ಕಾಣಿಸುತ್ತಿದೆ. ಅಹಿಂದ ಸಮುದಾಯದಲ್ಲಿ ನಾಯಕತ್ವ ಬೆಳೆಸುವುದು ಸ್ವತಃ ಸವಾಲಿನ ವಿಷಯವಾಗಿರುವಾಗ, ಬೆಳೆದ ನಾಯಕರನ್ನೇ ಗುರಿ ಮಾಡುವುದು ಸಾಮಾಜಿಕ ನ್ಯಾಯದ ಮೂಲ ಆತ್ಮಕ್ಕೆ ವಿರುದ್ಧವಾಗಿದೆ. ಇದರಲ್ಲಿ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲರ ಪಾತ್ರ ಮತ್ತು ಅವರ ಹಿಂದೆ ಇರುವ ಕಾಣದ ಕೈಗಳ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತಿವೆ ಎಂದು ಅವರು ಆರೋಪ ಮಾಡಿದರು.
ಈ ರೀತಿಯ ಬೆಳವಣಿಗೆಗಳು ಅಹಿಂದ ಸಮುದಾಯಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಹಾನಿಕಾರಕವಾಗಿದ್ದು, ಭವಿಷ್ಯದಲ್ಲಿ ಗಂಭೀರ ರಾಜಕೀಯ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷ ತನ್ನ ಮೂಲ ಆಧಾರವಾಗಿರುವ ಅಹಿಂದ ತತ್ವವನ್ನು ಉಳಿಸಿಕೊಳ್ಳಬೇಕಾದರೆ, ಈ ವಿಚಾರವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿದಿದ್ದರೆ, ಮುಂದಿನ ದಿನಗಳಲ್ಲಿ ಅಹಿಂದ ಪಕ್ಷವನ್ನು ಕಟ್ಟಿ ಮುಂದಿನ ಎಲ್ಲ ಸ್ಥಳೀಯ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಮೋಹನ್ ಕುಮಾರ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮುತ್ತಣ್ಣ ಎಸ್.ಶಿವಳ್ಳಿ, ಬಿ.ಬಸವಯ್ಯ, ಶಿವಣ್ಣ, ಭಾಗೀರತಿ, ಮತಿನ ಬೇಗ್, ರಾಚೆಗೌಡ, ಮಲ್ಲೇಶ ಉಪಸ್ಥಿತರಿದ್ದರು.






