ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ಅಳಿಸುವಿಕೆ ಆರೋಪ | ತಪ್ಪಾದ ಅರ್ಜಿ ತಿರಸ್ಕೃತ, ಎಫ್ಐಆರ್ ದಾಖಲು: ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸ್ಪಷ್ಟನೆ

Photo credit: PTI
ಬೆಂಗಳೂರು: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸಲಾಗಿದೆ ಎಂಬ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ), ಯಾವುದೇ ಅಕ್ರಮ ನಡೆದಿಲ್ಲ, ತಪ್ಪಾದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ. 2023ರಲ್ಲಿ ಸಂಬಂಧಪಟ್ಟ ಪ್ರಕರಣದಲ್ಲಿ ಎಫ್ಐಆರ್ ಕೂಡ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಇಒ ಕಚೇರಿ ಬಿಡುಗಡೆ ಮಾಡಿದ ವಿವರಗಳ ಪ್ರಕಾರ, ಆಳಂದ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ಇಆರ್ಒ) ಡಿಸೆಂಬರ್ 2022ರಲ್ಲಿ ಒಟ್ಟು 6,018 ಫಾರ್ಮ್–7 ಅರ್ಜಿಗಳನ್ನು ಸ್ವೀಕರಿಸಿದ್ದರು. ಇವುಗಳನ್ನು ಎನ್ವಿಎಸ್ಪಿ (NVSP), ವಿಎಚ್ಎ (VHA) ಮತ್ತು ಗರುಡಾ (Garuda) ಸೇರಿದಂತೆ ವಿವಿಧ ಆನ್ಲೈನ್ ವೇದಿಕೆಗಳ ಮೂಲಕ ಸಲ್ಲಿಸಲಾಗಿತ್ತು. ಏಕಕಾಲದಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದ ಹಿನ್ನೆಲೆ, ಅವುಗಳ ಪ್ರಾಮಾಣಿಕತೆ ಕುರಿತು ಅನುಮಾನ ವ್ಯಕ್ತವಾಗಿದ್ದು, ಪ್ರತಿ ಅರ್ಜಿಯನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಯಿತು ಎಂದು ಅವರು ಹೇಳಿದ್ದಾರೆ.
ಪರಿಶೀಲನೆಯ ಬಳಿಕ, ಕೇವಲ 24 ಅರ್ಜಿಗಳು ಮಾತ್ರ ನಿಜವಾದ ಅರ್ಜಿಗಳು ಎಂಬುದು ದೃಢಪಟ್ಟಿದೆ. ಉಳಿದ 5,994 ಅರ್ಜಿಗಳು ತಪ್ಪಾದವು, ಅಸಂಬದ್ಧ ಅಥವಾ ದುರುದ್ದೇಶಿತ ಅರ್ಜಿಗಳು ಎಂದು ಪತ್ತೆಯಾಗಿದೆ. ಆದ್ದರಿಂದ 24 ಅರ್ಜಿಗಳ ಆಧಾರದ ಮೇಲೆ ಮಾತ್ರ ಮತದಾರರ ಹೆಸರುಗಳನ್ನು ಅಳಿಸಲಾಗಿದ್ದು, ಉಳಿದ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ತಪ್ಪಾದ ಅರ್ಜಿಗಳ ಆಧಾರದ ಮೇಲೆ ಯಾವುದೇ ಹೆಸರುಗಳನ್ನು ಅಳಿಸಲಾಗಿಲ್ಲ ಎಂದು ಹೇಳಿಕೆಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ಫೆಬ್ರವರಿ 2023ರಲ್ಲಿ ವಿಚಾರಣೆ ಫಲಿತಾಂಶಗಳ ಆಧಾರದ ಮೇಲೆ ಆಳಂದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಬಳಿಕ 2023ರ ಸೆಪ್ಟೆಂಬರ್ 6ರಂದು ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಕಲಬುರಗಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.







