ಅಂಬೇಡ್ಕರ್ ಅವರ ಮಂತ್ರಗಳು ಸ್ವಾಭಿಮಾನ, ಅಧಿಕಾರದ ಮಂತ್ರದಂಡವಾಗಿದೆ: ಕೆ.ವಿ.ಪಿ

ಬೆಂಗಳೂರು, ಏ.16: ಅಂಬೇಡ್ಕರ್ ಅವರ ಮಂತ್ರಗಳು ಶತಮಾನದ ಬಳಿಕವೂ ಸ್ವಾಭಿಮಾನ ಮತ್ತು ಅಧಿಕಾರದ ಮಂತ್ರದಂಡವಾಗಿದೆ. ಅಂಬೇಡ್ಕರ್ ಅವರ ವಿಗ್ರಹಗಳನ್ನು ಸ್ಥಾಪಿಸಿ ವಿಚಾರಗಳನ್ನು ಕೊಲ್ಲುವ ಕಪಟ ರಾಜಕಾರಣವನ್ನು ಅರ್ಥಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಕರೆ ನೀಡಿದರು.
ದೂರದರ್ಶನದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಿಕ್ಷಣ–ಸಂಘಟನೆ–ಹೋರಾಟ ಎನ್ನುವ ಮೂರು ಮಂತ್ರಗಳನ್ನು ಶತಮಾನದ ಹಿಂದೆ ಅಂಬೇಡ್ಕರ್ ನೀಡಿದರು. ಈಗ ಈ ಮಂತ್ರಗಳು ಮಂತ್ರದಂಡವಾಗಿ, ಅಧಿಕಾರದಂಡವಾಗಿವೆ. ಹೀಗಾಗಿ ಶತಮಾನ ಕಳೆದರೂ ಅಂಬೇಡ್ಕರ್ ಹೆಚ್ಚೆಚ್ಚು ಪ್ರಸ್ತುತರಾಗುತ್ತಿದ್ದಾರೆ ಎಂದರು.
ಕಳೆದ ಅಧಿವೇಶನದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದ ಮರ್ಯಾದೆಗೇಡು ಹತ್ಯೆಗಳ ವಿರುದ್ಧದ “ಇವ ನಮ್ಮವ, ಇವ ನಮ್ಮವ” ಕಾಯ್ದೆಯೂ ಅಂಬೇಡ್ಕರ್ ಅವರ ಮಂತ್ರ, ಬಸವಣ್ಣನವರ ಆಶಯ ಮತ್ತು ಬುದ್ಧನ ಮಾರ್ಗದಲ್ಲಿ ರೂಪುಗೊಂಡಿದೆ. ಮಹಾನ್ ಪುರುಷರ ವಿಗ್ರಹಗಳನ್ನು ಸ್ಥಾಪಿಸಿ ಅವರ ವಿಚಾರಗಳನ್ನು ಕೊಲ್ಲುವುದು ಇಂದಿನ ಸಾಂಸ್ಕೃತಿಕ ರಾಜಕಾರಣವಾಗಿದೆ. ಆದರೆ ಅಂಬೇಡ್ಕರ್ ಅವರ ‘ಶಿಕ್ಷಣ’ ಎನ್ನುವ ಮಂತ್ರದಿಂದ ಈಗ ಶೋಷಿತ ಸಮುದಾಯಗಳು “ವಿಗ್ರಹ ಪೂಜಿಸಿ, ವಿಚಾರ ಕೊಲ್ಲುವ” ಕಪಟ ರಾಜಕಾರಣವನ್ನು ಅರ್ಥಮಾಡಿಕೊಳ್ಳುವಷ್ಟು ಅರಿವನ್ನು ಗಳಿಸಿವೆ ಎಂದರು.
ಹೀಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ಕಾಲಘಟ್ಟಕ್ಕೆ ಸೀಮಿತವಾದ ನಾಯಕರಾಗದೆ, ಅವರ ವಿಚಾರಧಾರೆಗಳು ಇಂದಿನ ಸಂಕೀರ್ಣ ಸಮಾಜದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವೆನಿಸುತ್ತಿವೆ ಎಂದರು.
ಇವತ್ತು ಯಾವುದೇ ರಾಜಕೀಯ ಪಕ್ಷವಾದರೂ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಕನಿಷ್ಠ ತಮ್ಮ ಪ್ರಣಾಳಿಕೆ ಮತ್ತು ಭಾಷಣಗಳಲ್ಲಾದರೂ ಉಲ್ಲೇಖಿಸುತ್ತಿವೆ ಎಂದರೆ, ಅದಕ್ಕೆ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಹಾಕಿಕೊಟ್ಟ ಪ್ರಜಾಪ್ರಭುತ್ವದ ಗಟ್ಟಿಯಾದ ಅಡಿಪಾಯವೇ ಕಾರಣ. ಅಂಬೇಡ್ಕರ್ ಅವರು ಪ್ರತಿಪಾದಿಸಿದ ‘ಸಮಾನತೆ’ ಕೇವಲ ಕಾಗದದ ಮೇಲಿನ ಹಕ್ಕಲ್ಲ; ಅದು ಬದುಕಿನ ಸಂಸ್ಕೃತಿಯಾಗಬೇಕು ಎನ್ನುವ ಹೋರಾಟ ಮತ್ತು ಆಶಯ ಹೆಚ್ಚೆಚ್ಚು ವಿಸ್ತರಿಸುತ್ತಿದೆ ಎಂದರು.
ಇಂದಿಗೂ ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಸಾಮಾಜಿಕ ತಾರತಮ್ಯಗಳು ಬೇರೆಬೇರೆ ರೂಪಗಳಲ್ಲಿ ಜೀವಂತವಾಗಿದ್ದು, ಎಲ್ಲೇ ಜಾತಿ ದೌರ್ಜನ್ಯ ನಡೆದರೂ ಅಲ್ಲಿ ಅಂಬೇಡ್ಕರ್ ಅವರ ಮಂತ್ರದಂಡ ಮತ್ತು ಅಧಿಕಾರದಂಡ ಪ್ರತ್ಯಕ್ಷವಾಗುತ್ತದೆ ಎಂದರು.
“ಒಂದು ಸಮುದಾಯದ ಪ್ರಗತಿಯನ್ನು ನಾನು ಆ ಸಮುದಾಯದ ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರದ ಮೇಲೆ ಅಳೆಯುತ್ತೇನೆ” ಎಂದು ಅಂಬೇಡ್ಕರ್ ಹೇಳಿದ್ದರು. ಈ ಆಶಯದ ಭಾಗವಾಗಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಜಾರಿಯಾಗಿವೆ. ಇದೇ ಅಂಬೇಡ್ಕರ್ ಅವರ ತಾಕತ್ತು ಎಂದರು.
ಶತಮಾನಗಳ ಬಳಿಕವೂ ಅಂಬೇಡ್ಕರ್ ಅವರ ಆಶಯದ ಕಾಯ್ದೆ, ಕಾನೂನುಗಳು ಜಾರಿಗೆ ಬರುತ್ತಲೇ ಇವೆ; ಮುಂದೆಯೂ ಆಗುತ್ತಲೇ ಇರುತ್ತವೆ ಎಂದರು.
ಹೀಗಾಗಿ ಅಂಬೇಡ್ಕರ್ ಭಾರತದ ಅಸ್ಮಿತೆಯಾಗಿ, ಭಾರತೀಯತೆಯ ಉಸಿರಾಗಿ ಈ ನೆಲದಲ್ಲಿ ಆಳವಾಗಿ ಬೇರುಬಿಡುತ್ತಲೇ ಇರುತ್ತಾರೆ. GenZ ಪೀಳಿಗೆಯ ಯುವಕ-ಯುವತಿಯರು ಅಂಬೇಡ್ಕರ್ ಅವರ ಆಶಯಗಳು, ಕಾಳಜಿಗಳು ಮತ್ತು ಮಂತ್ರಗಳನ್ನು ಬದುಕಿನ ಕ್ರಮವಾಗಿಸಿಕೊಳ್ಳುವ ಅಗತ್ಯವಿದೆ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ದೂರದರ್ಶನ ಕಾರ್ಯಕ್ರಮ ಮುಖ್ಯಸ್ಥೆ ಆರತಿ ಹೆಚ್.ಎನ್., ದೂರದರ್ಶನ ಉಪ ಮಹಾನಿರ್ದೇಶಕ ಎ. ಹನುಮಂತ್, ಕೆ.ಪಿ. ಸಂಜಯ್, ನಿರ್ದೇಶಕ ಬಿ.ಎ. ಕೇಶವಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






