ಬೆಂಗಳೂರಿಗರಿಗೆ ಕನ್ನಡ ಜಾನಪದ ಕಲೆಗಳನ್ನು ತಲುಪಿಸುವ ಪ್ರಯತ್ನ ಆಗಬೇಕು: ಸಚಿವ ಶಿವರಾಜ ತಂಗಡಗಿ

ಬೆಂಗಳೂರು: ನಗರ ಜೀವನದ ಒತ್ತಡದಲ್ಲಿ ಜೀವಿಸುತ್ತಿರುವ ಬೆಂಗಳೂರಿಗರಿಗೆ ಕರ್ನಾಟಕದ ವೈವಿಧ್ಯಮಯ ಜಾನಪದ ಕಲೆಗಳನ್ನು ತಲುಪಿಸುವ ಪರಿಚಯಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಯತ್ನಗಳು ಆಗಬೇಕಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ನಮ್ಮ ಜಾತ್ರೆ, ಜಾನಪದ ಸಂಭ್ರಮ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಭಾಷೆ ಮತ್ತು ಸಂಸ್ಕತಿ ಎಲ್ಲರನ್ನು ಆಕರ್ಷಿಸುವಂತಹದ್ದು, ಆದರೆ ನಾವು ಬೆಂಗಳೂರಿನಲ್ಲಿ ಕನ್ನಡ ಭಾಷೆ ಬಳಕೆಯನ್ನು ಕಡಿಮೆ ಮಾಡಿದ್ದೇವೆ. ಇಂಗ್ಲಿಷ್ ಜೀವನಕ್ಕೆ ಬೇಕು, ಅದನ್ನು ಕಲಿಯಿರಿ. ನಮ್ಮ ದಿನನಿತ್ಯದ ಆಡು ಭಾಷೆಯಾಗಿ ಕನ್ನಡವನ್ನು ಬಳಸಿರಿ, ಅದು ನಮ್ಮ ಭಾವಭಾಷೆ ಎಂದರು.
ಯುವ ಜನರು ಕನ್ನಡ ಬಳಸ ಬೇಕು ಅನ್ಯ ಭಾಷೆಯ ವ್ಯಮೋಹ ಬಿಡದೆ ಇದ್ದರೆ ನಗರದಲ್ಲಿ ಕನ್ನಡದ ಬೆಳವಣಿಗೆ ಆಗಲಾರದು. ಪಂಜಾಬ್ನಿಂದ ಬಂದ ನಟಿ ಪೂಜಾ ಗಾಂಧಿ ಕನ್ನಡ ಕಲಿತು ಮಾತನಾಡುವುದನ್ನು ರೂಡಿಸಿಕೊಂಡಿದ್ದಾರೆ. ಅವರಂತೆಯೇ ಇತರರೂ ಕನ್ನಡ ಕಲಿತರೆ ಕನ್ನಡದ ಏಳಿಗೆ ತನಗೆ ತಾನೆ ಆಗುತ್ತದೆ ಎಂದರು.
ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಇಲಾಖೆ ವರ್ಷಪೂರ್ತಿ ಪ್ರತಿ ತಿಂಗಳು ಇಂತಹ ದೊಡ್ಡ, ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಿದೆ. ನಾಲ್ಕು ಕಂದಾಯ ವಿಭಾಗಗಳಲ್ಲಿಯೂ ಮುಂದಿನ ನಾಲ್ಕು ತಿಂಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಆನಂತರ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಮತ್ತೊಂದು ಸುವರ್ಣ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ವಿವರಿಸಿದರು.
ನಟಿ ಪೂಜಾ ಗಾಂಧಿ ಅವರು ಮಾತನಾಡಿ, ಕನ್ನಡ ಅತ್ಯಂತ ಸುಂದರವಾದ ಭಾಷೆ ಅದು ನನಗೆ ಬದುಕು ಕೊಟ್ಟಿದೆ. ಕನ್ನಡದಿಂದ ನಾನು ಚಿತ್ರರಂಗದಲ್ಲಿ ಇದ್ದೇನೆ ಎಂದರು.
ಸಮಾರಂಭದಲ್ಲಿ ಸರಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳಾ, ನಿರ್ದೇಶಕಿ ಡಾ. ಧರಣಿ ದೇವಿ ಮಾಲಗತ್ತಿ ಹಾಗೂ ಕಾದಂಬರಿ ಟ್ರಸ್ಟ್ ಸಂಸ್ಥಾಪಕಿ ಚಂದ್ರ ಜೈನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







