ದಿನಗೂಲಿ ಕಾರ್ಮಿಕರ ಶೆಡ್ ನೆಲಸಮ, ಜಾತಿನಿಂದನೆ ಆರೋಪ : ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್

ಮುನಿರತ್ನ
ಬೆಂಗಳೂರು: ದಿನಗೂಲಿ ನೌಕರರ ಶೆಡ್ಗಳನ್ನು ನೆಲಸಮಗೊಳಿಸಿ ಜಾತಿ ನಿಂದನೆ ಹಾಗೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ಆರ್ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜ.20ರ ಬೆಳಗ್ಗೆ 11ಕ್ಕೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ದಿನಗೂಲಿ ಕಾರ್ಮಿಕರ ಮನೆಗಳನ್ನು ನೆಲಸಮ ಮಾಡಿರುವ ಆರೋಪ ಮುನಿರತ್ನ ಅವರ ವಿರುದ್ಧ ಕೇಳಿ ಬಂದಿದ್ದು, ಶಾಸಕರು ಸೇರಿದಂತೆ ಏಳು ಜನರ ವಿರುದ್ಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ನೋಟಿಸ್ ನೀಡುವ ಸಾಧ್ಯತೆ ಇದೆ.
ಏನಿದು ಘಟನೆ?: ಇಲ್ಲಿನ ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ಅಕ್ಕಮಹಾದೇವಿ ಸ್ಲಂನಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಶೆಡ್ಗಳನ್ನು ನಿರ್ಮಿಸಿಕೊಂಡಿದ್ದರು. ಆದರೆ, ಸೋಮವಾರ ಬೆಳಿಗ್ಗೆ ಏಕಾಏಕಿ ಶಾಸಕ ಮುನಿರತ್ನ ಮತ್ತು ಸಹಚರರು ಜೆಸಿಬಿಗಳ ಮೂಲಕ ಶೆಡ್ಗಳನ್ನು ನೆಲಸಮಗೊಳಿಸಿದ್ದಾರೆ. ಈ ಬಗ್ಗೆ ದಿನಗೂಲಿಗಾರರು ಮನವಿ ಮಾಡಿಕೊಂಡರು ಸ್ಪಂದಿಸಿಲ್ಲ ಎಂದು ಹೇಳಲಾಗಿದೆ.
ಕಾರ್ಯಾಚರಣೆ ಸಂದರ್ಭದಲ್ಲಿ ಕೂಡಿಟ್ಟ ಹಣ, ಚಿನ್ನ ಮಣ್ಣುಪಾಲು ಮಾಡಿದ್ದಾರೆ. ತಾವು ಮನವಿ ಮಾಡಿದರೂ ಸಹ ಜಾತಿ ನಿಂದನೆ ಮಾಡಿ, ಮಹಿಳೆಯರಿಗೆ ಚಪ್ಪಲಿ ಕಾಲಿನಿಂದ ಒದ್ದು ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ಘಟನೆ ಬಳಿಕ ಶೆಡ್ನಲ್ಲಿ ವಾಸವಿದ್ದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಶಾಸಕ ಮುನಿರತ್ನ ಸೇರಿದಂತೆ 7 ಜನರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಕಾಯ್ದೆ (ದೌರ್ಜನ್ಯ ತಡೆ) ಕಾಯ್ದೆ, ಬಿಎನ್ಎಸ್ 324, 74, 351 ಮತ್ತು 190 ಅಡಿ ಪ್ರಕರಣ ದಾಖಲು ಮಾಡಲಾಗಿದ್ದು, ಈ ಸಂಬಂಧ ನೋಟಿಸ್ ನೀಡಿ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.







