ಒಂದು ರೂಪಾಯಿ ಖರ್ಚಿಗೂ ಅನುಮೋದನೆ ಕಡ್ಡಾಯ: ಸಚಿವ ಕೃಷ್ಣಭೈರೇಗೌಡ

ಬೆಂಗಳೂರು: ರಾಜ್ಯದ ಹಣಕಾಸಿನ ವ್ಯವಸ್ಥೆಯಲ್ಲಿ ಒಂದು ರೂಪಾಯಿ ಖರ್ಚು ಮಾಡುವುದಕ್ಕೂ ವಿಧಾನ ಮಂಡಲದ ಅನುಮೋದನೆ ಕಡ್ಡಾಯವಾಗಿದ್ದು, ಈ ಕುರಿತು ಶಾಸಕರು ಬಜೆಟ್ ಮೇಲೆ ಚರ್ಚೆಯಲ್ಲಿ ಭಾಗವಹಿಸಿ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ರಾಜಭವನ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಕರ್ನಾಟಕ ವಿಧಾನ ಮಂಡಲ ತರಬೇತಿ ಸಂಸ್ಥೆಯ ವತಿಯಿಂದ ನಡೆದ 16ನೇ ವಿಧಾನ ಸಭೆಯ ಸದಸ್ಯರುಗಳಿಗೆ ಬಜೆಟ್ ಕುರಿತು ತರಬೇತಿ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಜನರ ತೆರಿಗೆ ಹಣ ಸದ್ಬಳಕೆಯಾಗಬೇಕು ಎನ್ನುವುದೇ ಅಧಿವೇಶನದ ಉದ್ದೇಶವಾಗಿದೆ ಎಂದರು.
ಶಾಸಕರು ತಮ್ಮ ಕ್ಷೇತ್ರಕ್ಕೆ ಸೀಮಿತವಾಗದೆ, ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ವಿಧಾನಮಂಡಲದಲ್ಲಿ ಮೌಲ್ಯಯುತವಾದ ಚರ್ಚೆಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕ್ಷೇತ್ರದ ಅಭಿವೃದ್ಧಿಗೆ ಮಹತ್ವ ನೀಡಬೇಕು. ಆದರೆ, ತಾವು ಕರ್ನಾಟಕ ವಿಧಾನಸಭಾ ಸದಸ್ಯರೆಂಬುದನ್ನು ಶಾಸಕರು ಮರೆಯಬಾರದು. ವಿಧಾನಮಂಡಲ ಹಾಗೂ ಮುನ್ಸಿಪಾಲಿಟಿ ನಡುವೆ ವ್ಯತ್ಯಾಸವಿದೆ. ಶಾಸಕರು ಸೀಮಿತವಾಗಿ ಯೋಚಿಸಬಾರದು. ವಿಧಾನಮಂಡಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಂತಹ ಹಿರಿಯರು ಮಾತನಾಡುವುದನ್ನು ಗಮಸಿದರೆ ಬಹಳಷ್ಟು ವಿಚಾರಗಳು ತಿಳಿಯುತ್ತವೆ. ಆದರೆ, ಎಲ್ಲದಕ್ಕೂ ಆಸಕ್ತಿ ಮುಖ್ಯ ಎಂದು ಕೃಷ್ಣಭೈರೇಗೌಡ ಹೇಳಿದರು.
ಫೆಬ್ರವರಿಯಲ್ಲಿ ಬಜೆಟ್ ಮಂಡನೆಯಾದಾಗ ಸದಸ್ಯರು ಪೂರ್ತಿಯಾಗಿ ಓದಿಕೊಳ್ಳಲು ಆಗುವುದಿಲ್ಲ ಎಂಬ ಕಾರಣಕ್ಕೆ ಆರಂಭದ ಮೂರು ತಿಂಗಳು ಲೇಖಾನುದಾನ ಪಡೆಯಲಾಗುತ್ತದೆ. ಬಳಿಕ ಜೂನ್ ಅಥವಾ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ಗೆ ಅಂಗೀಕಾರ ಪಡೆಯಲಾಗುತ್ತದೆ. ಶಾಸಕರು ಬಜೆಟ್ ಭಾಷಣದ ಪ್ರತಿಯನ್ನು ಮಾತ್ರ ಓದದೇ ಅದರ ಜೊತೆಗೆ ನೀಡಲಾಗುವ ಆರ್ಥಿಕ ಸಮೀಕ್ಷಾ ವರದಿ ಸೇರಿದಂತೆ ಹೆಚ್ಚುವರಿ ದಾಖಲೆಗಳನ್ನು ಅಧ್ಯಯನ ಮಾಡಬೇಕು. ಆಗ ಮಾತ್ರವೇ ಬಜೆಟ್ ಮೇಲೆ ಅಧಿಕೃತವಾಗಿ ಮಾತನಾಡುವ ಸಾಮಥ್ರ್ಯ ಬರುತ್ತದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.
ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಅನುದಾನವನ್ನು ಕೇಳುವುದಕ್ಕಷ್ಟೇ ಸೀಮಿತವಾಗಬಾರದು. ನಾಡಿನ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚೆಯಲ್ಲಿ ಭಾಗವಹಿಸಬೇಕು. ಆಸಕ್ತಿ ಇರುವವರಿಗೆ ಅವಕಾಶಗಳು ತಾನಾಗೇ ಒಲಿದು ಬರುತ್ತವೆ ಎಂದು ಕೃಷ್ಣಭೈರೇಗೌಡ ಹೇಳಿದರು.







