ಡಿ.14ರಿಂದ 22ರವರೆಗೆ ಬೆಂಗಳೂರು- ಮಂಗಳೂರು ರೈಲು ಸಂಚಾರ ರದ್ದು

ಬೆಂಗಳೂರು: ಇಂಟರ್ ಲಾಕಿಂಗ್ ಹಾಗೂ ಪುನರ್ ನಿರ್ಮಾಣ ಕಾಮಗಾರಿ ಹಿನ್ನೆಲೆ ಡಿ.14ರಿಂದ 22ರವರೆಗೆ ಬೆಂಗಳೂರು ಮತ್ತು ಮಂಗಳೂರಿನ ನಡುವಿನ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುವುದು ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಈ ಕುರಿತು ಪ್ರಕಟಣೆ ನೀಡಿದ್ದು, ಹಾಸನ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಯಾರ್ಡ್ ಮರುನಿರ್ಮಾಣಕ್ಕೆ ಅನುಕೂಲವಾಗಲು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಡಿ.14ರಿಂದ 18ರವರೆಗೆ ಪೂರ್ವ ಇಂಟರ್ ಲಾಕಿಂಗ್ ಮತ್ತು ಡಿ.19 ರಿಂದ 22 ರವರೆಗೆ ಪುನರ್ ನಿರ್ಮಾಣ ಕಾಮಗಾರಿಗಾಗಿ ಹಾಸನ ಯಾರ್ಡ್ನಲ್ಲಿ ನಾನ್-ಇಂಟರ್ ಲಾಕಿಂಗ್ಗೆ ಅನುಮೋದನೆಯನ್ನು ನೀಡಲಾಗಿದೆ ಎಂದಿದ್ದಾರೆ.
ಸ್ಟ್ಯಾಂಡರ್ಡ್ ಇಂಟರ್ ಲಾಕಿಂಗ್ ನ್ನು ನವೀಕರಿಸಲಾಗುತ್ತಿದ್ದು, ಇದರಿಂದ ನೈರುತ್ಯ ರೈಲ್ವೆಯು ಅರಸೀಕೆರೆ, ನೆಲಮಂಗಲ, ಮೈಸೂರು ಮತ್ತು ಮಂಗಳೂರುಗಳಲ್ಲಿ ರೈಲುಗಳನ್ನು ಸಮರ್ಥವಾಗಿ ಸಂಚಾರ ನಡೆಸಲು ಸಹಾಯಕವಾಗಲಿದೆ. ಈ ಕಾಮಗಾರಿಯು ಡಿ. 14 ರಿಂದ 18 ರ ಅವಧಿಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತ್ತು ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲೈನ್ ಬ್ಲಾಕ್, ಸಿಗ್ನಲ್ ಮತ್ತು ದೂರಸಂಪರ್ಕ ಬ್ಲಾಕ್ ಜಾರಿಯಾಗುವುದರಿಂದ ಈ ಸಮಯದಲ್ಲಿ ರೈಲು ಕಾರ್ಯಚರಣೆ ಇರುವುದಿಲ್ಲ ಎಂದು ಹೇಳಿದೆ.
ರದ್ದುಗೊಂಡ ರೈಲು ಸೇವೆಗಳ ವಿವರ:
►ಬೆಂಗಳೂರು-ಕಣ್ಣೂರು-ಬೆಂಗಳೂರು ಪಂಚಗಂಗಾ ಎಕ್ಸ್ ಪ್ರೆಸ್ (ರಾತ್ರಿಯ ಸೇವೆಗಳು) ಡಿ.16 ರಿಂದ 20 ರವರೆಗೆ ರದ್ದು
►ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್ ಪ್ರೆಸ್(ರಾತ್ರಿಯ ಸೇವೆಗಳು) - ಡಿ.16 ರಿಂದ 20 ರವರೆಗೆ ರದ್ದು
►ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆಸ್ - ಡಿ.14, 17, 19 ಮತ್ತು 21 ರಂದು ರದ್ದು
►ಯಶವಂತಪುರ-ಕಾರವಾರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆಸ್ - ಡಿ.13, 15, 18, 20 ಮತ್ತು 22 ರಂದು ರದ್ದು
►ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16539) - ಡಿ.16 ರಂದು ರದ್ದು
►ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ಸ್(ರೈಲು ಸಂಖೆ 16540) - ಡಿ.17 ರಂದು ರದ್ದು
ಪರ್ಯಾಯ ಸೇವೆ: ನೈರುತ್ಯ ರೈಲ್ವೆಯು ಈ ಅವಧಿಯಲ್ಲಿ ಬೆಂಗಳೂರು-ಮಂಗಳೂರು ಸಂಪರ್ಕಿಸುವ ಏಕೈಕ ರೈಲು ಸೇವೆ ರೈಲು ಸಂಖ್ಯೆ 16585/16586 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಬೆಂಗಳೂರು-ಮುರುಡೇಶ್ವರ. ಆದರೆ ಇದು ಮೈಸೂರು ಮೂಲಕ ಹಾದುಹೋಗುವುದಿಲ್ಲ.
ಡಿ.14 ರಿಂದ 16 ರವರೆಗೆ, ರೈಲು ಯಶವಂತಪುರ ಬೈಪಾಸ್, ನೆಲಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ಮೂಲಕ ಬೆಂಗಳೂರು ನಗರ, ಮಂಡ್ಯ ಮತ್ತು ಮೈಸೂರು ಮೂಲಕ ಚಲಿಸುತ್ತದೆ.
ಡಿ.17 ರಿಂದ 22 ರವರೆಗೆ ಮೈಸೂರು ಮಾರ್ಗವನ್ನು ಹೊರತುಪಡಿಸಿ ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ ಮತ್ತು ಹಾಸನ ಮೂಲಕ ರೈಲು ಸಂಚಾರ ನಡೆಸಲಿದೆ.







