ಬಿಜೆಪಿ ಹೈಕಮಾಂಡ್ ಬಳಿ ಯಾವುದೇ ಕ್ಷಮಾಪಣೆ ಕೇಳಿಲ್ಲ, ಪತ್ರವೂ ಸಹ ಬರೆದಿಲ್ಲ: ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು : ನಾನು ಬಿಜೆಪಿ ಹೈಕಮಾಂಡ್ ಬಳಿ ಯಾವುದೇ ಕ್ಷಮಾಪಣೆ ಕೇಳಿಲ್ಲ. ಬದಲಾಗಿ ಯಾವುದೇ ರೀತಿಯ ಪತ್ರ ಸಹ ಬರೆದಿಲ್ಲ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಇತಿ ಮಿತಿಯೊಳಗೆ ಕೆಲಸ ಮಾಡುತ್ತೇನೆಂದು ಪತ್ರ ಬರೆದಿದ್ದೇನೆ ಎಂದು ಸುದ್ದಿಯಾಗುತ್ತಿದೆ. ಆದರೆ, ಎಲ್ಲಿ ಇದೆ ದಾಖಲೆ?. ನಾನು ಯಾರ ಬಳಿಯೂ ಹೋಗಿಲ್ಲ. ಕ್ಷಮಾಪಣೆಯನ್ನೂ ಕೇಳಿಲ್ಲ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ಸಾಕ್ಷಾಧಾರ ಇದ್ದು ಸುದ್ದಿ ಮಾಡಿ ಎಂದು ತಿಳಿಸಿದರು.
ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿ, ಆರೇಳು ಬಾರಿ ಶಾಸಕರಾಗಿ ಆಯ್ಕೆಯಾದ ಜನಪ್ರತಿನಿಧಿಗೆ ರಾಜೀನಾಮೆ ಹೇಗೆ ಕೊಡಬೇಕು ಎಂಬ ಸಾಮಾನ್ಯ ಪರಿಜ್ಞಾನ ಬೇಕಲ್ಲ. ಗ್ರಾಮ ಪಂಚಾಯತಿ ಸದಸ್ಯನಿಗೆ ಹೇಗೆ ರಾಜೀನಾಮೆ ಪತ್ರ ಕೊಡಬೇಕು ಎಂದು ಗೊತ್ತಿದೆ. ಸ್ವಂತ ಕೈ ಬರಹದಲ್ಲಿ ಇರಬೇಕು. ಸ್ಪೀಕರ್ ಬಳಿ ಖುದ್ದು ಹೋಗಿ ಸ್ವಇಚ್ಛೆಯಿಂದ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೇಳಬೇಕು ಎಂದು ವ್ಯಂಗ್ಯವಾಡಿದರು.