Belagavi | ಬಹುಕೋಟಿ ಹಣ ದುರುಪಯೋಗ ಪ್ರಕರಣ: ಶಿವಾನಂದ ನೀಲಣ್ಣವರ 10 ದಿನ ಸಿಐಡಿ ವಶಕ್ಕೆ

ಬೆಳಗಾವಿ : ನಗರದಲ್ಲಿ ಸಂಚಲನ ಮೂಡಿಸಿರುವ ಬಹುಕೋಟಿ ಹಣ ದುರಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ಅವರನ್ನು 10 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಕಳೆದ ಕೆಲವು ದಿನಗಳಿಂದ ಮಾಳಮಾರುತಿ ಠಾಣೆ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದ್ದು, ಸಿಐಡಿ ಡಿಜಿಪಿ ಭೀಮಾಶಂಕರ ಗುಳೇದ್ ಠಾಣೆಗೆ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದರು.
ಸೋಮವಾರ ಬೆಳಿಗ್ಗೆ ಆರೋಪಿಯನ್ನು ಪೊಲೀಸರು ಬೆಳಗಾವಿಯ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಈ ವೇಳೆ ಸಿಐಡಿ ಅಧಿಕಾರಿಗಳು, “ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣದ ವ್ಯವಹಾರ ನಡೆದಿರುವ ಶಂಕೆ ಇದೆ. ಸುಮಾರು 35 ಸಾವಿರ ಹೂಡಿಕೆದಾರರ ಮಾಹಿತಿಯನ್ನು ಪರಿಶೀಲಿಸಬೇಕಿದ್ದು, ಹೆಚ್ಚಿನ ತನಿಖೆಗಾಗಿ 10 ದಿನಗಳ ಕಸ್ಟಡಿ ಅಗತ್ಯವಿದೆ” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ನ್ಯಾಯಾಲಯದ ಆದೇಶದಂತೆ ಶಿವಾನಂದ ನೀಲಣ್ಣವರರನ್ನು 10 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಲಾಗಿದೆ. ಸಿಐಡಿ ಅಧಿಕಾರಿಗಳು ಇನ್ನೂ ಎರಡು ದಿನ ಬೆಳಗಾವಿಯಲ್ಲೇ ವಿಚಾರಣೆ ನಡೆಸಿ, ಬಳಿಕ ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 35 ಸಾವಿರಕ್ಕೂ ಹೆಚ್ಚು ಹೂಡಿಕೆದಾರರ ಮಾಹಿತಿಯನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದು, ಎಲ್ಲ ದಾಖಲೆಗಳನ್ನು ಸಿಐಡಿಗೆ ಹಸ್ತಾಂತರಿಸಲಾಗುತ್ತಿದೆ.
ಇದೇ ಪ್ರಕರಣದಲ್ಲಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪದಡಿ ಮಹಾರಾಷ್ಟ್ರ ಮೂಲದ ಓಂಕಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆ್ಯಪ್ನ ತಾಂತ್ರಿಕ ವಿಭಾಗದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಆತ, ಆ್ಯಪ್ನಲ್ಲಿದ್ದ ಮಾಹಿತಿಯನ್ನು ಅಳಿಸಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಆರೋಪಿ ಪರ ವಕೀಲರು ಮಾಧ್ಯಮಗಳೊಂದಿಗೆ ಮಾತನಾಡಿ, “ಪ್ರಕರಣದಲ್ಲಿ 35 ಸಾವಿರ ಜನ ಠೇವಣಿದಾರರು ಇದ್ದಾರೆ. ಆದರೆ ದಾಖಲೆಗಳಲ್ಲಿ ಎಲ್ಲಿಯೂ ಹೆಚ್ಚಿನ ಬಡ್ಡಿ ನೀಡುವ ಕುರಿತು ಉಲ್ಲೇಖವಿಲ್ಲ. ಆರ್ಬಿಐ ನಿಯಮ ಉಲ್ಲಂಘನೆ ನಡೆದಿದೆ ಎನ್ನುವುದು ಪೊಲೀಸರ ವಾದ. ಆದರೆ ಇದುವರೆಗೆ ಯಾರೂ ನೇರವಾಗಿ ದೂರು ನೀಡಿಲ್ಲ. ಶೀಘ್ರದಲ್ಲೇ ಜಾಮೀನಿಗೆ ಅರ್ಜಿ ಸಲ್ಲಿಸಲಾಗುವುದು” ಎಂದು ಹೇಳಿದರು.






